ಸಾರಾಂಶ
- ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಸ್ಥಳೀಯ ಮುಖಂಡರ ಚರ್ಚೆ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೆಲುವಿನ ಕ್ಷೇತ್ರಗಳ ಪಟ್ಟಿಯಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಸೋತಿದ್ದನ್ನು ಸ್ವತಃ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಸೋಲಿಗೆ ಕಾರಣಗಳ ಪಟ್ಟಿ ಸಮೇತ ಇದೀಗ ಪಕ್ಷದ ಜಿಲ್ಲಾ ಮುಖಂಡರ ನಿಯೋಗವು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವಿವರಣೆ ನೀಡಿದೆ.ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಉಭಯ ನಾಯಕರನ್ನು ಭೇಟಿ ಮಾಡಿದ್ದ ಜಿಲ್ಲಾ ಮುಖಂಡರ ನಿಯೋಗದ ಜೊತೆ ಸುಮಾರು ಗಂಟೆ ಕಾಲ ಪ್ರತ್ಯೇಕವಾಗಿ ಸಾಕ್ಷ್ಯಾಧಾರ ಸಮೇತ ಮಾಹಿತಿ ನೀಡಿ, ಪಕ್ಷದ ಸೋಲು ಎದುರಾಳಿಗಳಿಂದಲ್ಲ, ಸ್ವಪಕ್ಷೀಯರಿಂದಲೇ ಆಗಿದ್ದ ಬಗ್ಗೆ ಪುರಾವೆ ಸಮೇತ ಮಾಹಿತಿ ನೀಡುವ ಮೂಲಕ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ. ದಾವಣಗೆರೆಯಲ್ಲಿ ಪಕ್ಷದ ಸೋಲಿಗೆ ಯಾರೇ ಕಾರಣಾಗಿದ್ದರೂ ವರಿಷ್ಠರು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಭಯವನ್ನು ಬಿ.ಎಲ್.ಸಂತೋಷ್ ನೀಡಿದ್ದಾರೆ.
25 ವರ್ಷದಿಂದ ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರ ಕೈ ತಪ್ಪಿದ್ದನ್ನು ಅಮಿತ್ ಶಾ ಗಂಭೀರವಾಗಿ ಪರಿಗಣಿಸಿ, ಸೋಲಿನ ಕಾರಣ ಕಲೆ ಹಾಕಲು ಮುಂದಾಗಿದ್ದಾರೆ. ಪಕ್ಷದ ಸೋಲಿಗೆ ಕಾರಣರಾದವರಿಗೆ ಶೀಘ್ರದಲ್ಲೇ ಪಕ್ಷದ ಗದಾಪ್ರಹಾರವಾದರೂ ಅಚ್ಚರಿ ಇಲ್ಲವೆಂಬ ಮಾತು ಕೇಳಿಬರುತ್ತಿವೆ.ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ, ಚನ್ನಗಿರಿ ಪರಾಜಿತ ಅಭ್ಯರ್ಥಿ ಶಿವಕುಮಾರ ತುಮ್ಕೋಸ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಹೊನ್ನಾಳಿ ಎ.ಬಿ. ಹನುಮಂತಪ್ಪ ಅರಕೆರೆ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಚನ್ನಪ್ಪ, ಜಿಲ್ಲೆಯ ಮುಖಂಡರ ನಿಯೋಗ ಲೋಕಸಭೆ ಚುನಾವಣೆ ಸೋಲಿಗೆ ಹಿನ್ನಡೆಗೆ ಹಲವಾರು ಕಾರಣಗಳನ್ನು, ಬಿಜೆಪಿ ಸೋಲಿಗೆ ಕಾರಣರಾದವರು, ಏನೆಲ್ಲಾ ಬೆಳವಣಿಗೆ ನಡೆದವು, ಯಾರು ಏನೆಲ್ಲಾ ಮಾಡಿದ್ದರೆಂಬ ಬಗ್ಗೆ ರಾಜ್ಯ ನಾಯಕರಿಗೆ ವಿವರಿಸಿದರು.
ದಾವಣಗೆರೆ ಅಂದ್ರೆ ಎಸ್.ಎ.ರವೀಂದ್ರನಾಥ್ ಎನ್ನುತ್ತಿದ್ದೆವು. ಆದರೆ, ಅಮಿತ್ ಶಾ ಗೆಲುವಿನ ಸಾಧ್ಯತೆಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ದಾವಣಗೆರೆ ಸೋಲು ಅನಿರೀಕ್ಷಿತ. ಬೇರಾವುದೇ ಕ್ಷೇತ್ರ ಸೋತಿದ್ದರೂ ನೋವಾಗುತ್ತಿರಲಿಲ್ಲ. 25 ವರ್ಷದಿಂದ ನಾವು ಅನಾಯಾಸವಾಗಿ ಗೆಲ್ಲುತ್ತಿದ್ದ ಕ್ಷೇತ್ರ ರಾಜ್ಯದಲ್ಲೇ ಅತಿ ಕಡಿಮೆ ಅಂತರದಲ್ಲಿ ಸೋತಿದ್ದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಬಿ.ಎಸ್.ಯಡಿಯೂರಪ್ಪನವರು ದಾವಣಗೆರೆಗೆ ಬಂದು, ಅತೃಪ್ತಿ ಶಮನ ಮಾಡಿದ್ದರೂ ಕೆಲವರು ಮೊಂಡಾಟ ಮಾಡಿ, ಎದುರಾಳಿ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆಂಬ ವಿಚಾರವನ್ನೂ ನಾಯಕರ ಗಮನಕ್ಕೆ ತರುವ ಕೆಲಸ ನಿಯೋಗ ಮಾಡಿದೆ.ಟಿಕೆಟ್ ಘೋಷಣೆವರೆಗೂ ಕೆಲ ಕ್ಷೇತ್ರದಲ್ಲಿ ವಿರೋಧವಿತ್ತು. ಆದರೆ, ಟಿಕೆಟ್ ಘೋಷಣೆ ನಂತರ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಿದರು. ಆದರೆ, ದಾವಣಗೆರೆಯಲ್ಲಿ ಇದೆಲ್ಲಾ ಉಲ್ಟಾ ಆಗಿದ್ದು, ಸೋಜಿಗದ ಸಂಗತಿ.
- - - ಬಾಕ್ಸ್ಎಲ್ಲ ದಾಖಲೆ, ಮಾಹಿತಿ ಬಿಜೆಪಿ ವರಿಷ್ಠರಿಗೆ ತಲುಪಿಸುತ್ತೇವೆ
ದಾವಣಗೆರೆ ಬಿಜೆಪಿ ನಿಯೋಗದಿಂದ ಮಾಹಿತಿ ಪಡೆದ ಬಿ.ಎಲ್. ಸಂತೋಷ್ ತಮ್ಮಲ್ಲಿ ಸ್ವಪಕ್ಷೀಯರೇ ಎದುರಾಳಿಗಳ ಜೊತೆ ಕೈ ಜೋಡಿಸಿದ್ದ ವಿಚಾರ ಹಂಚಿಕೊಂಡರು. ಶೀಘ್ರವೇ ತಮ್ಮಲ್ಲಿರುವ ಎಲ್ಲ ಸಾಕ್ಷ್ಯ, ದಾಖಲೆ, ಮಾಹಿತಿ ಸಮೇತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲಿದ್ದೇವೆ. ದಾಖಲೆ, ಮಾಹಿತಿಯನ್ನೂ ವರಿಷ್ಠರಿಗೆ ತಲುಪಿಸುತ್ತೇವೆ ಎಂದು ನಿಯೋಗ ಹೇಳಿತು. ಅದಕ್ಕೆ ರಾಜ್ಯ ನಾಯಕರು ಸಹ, ಸುಧೀರ್ಘ ಕಾಲ ಶಾಸಕರಾಗಿ, ಮಂತ್ರಿ ಆಗಿದ್ದವರ ವರ್ತನೆ, ಸಚಿವರಾಗಿ, ಶಾಸಕರಾಗಿ ಸ್ಥಾನಮಾನ ಪಡೆದವರು ಹೀಗೆ ಇಡೀ ಅತೃಪ್ತ ಗುಂಪಿನ ಪ್ರತಿಯೊಬ್ಬರ ಬಗ್ಗೆಯೂ ಪಕ್ಷದ ವರಿಷ್ಠರೂ ಮಾಹಿತಿ ಕಲೆ ಹಾಕಿದ್ದಾರೆ. ನಮ್ಮಿಂದಲೂ ಮತ್ತಷ್ಟು ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಸರಿಯಾದ ಸಮಯಕ್ಕೆ ಸೂಕ್ತ ಕ್ರಮವನ್ನು ಪಕ್ಷ ಕೈಗೊಳ್ಳುವ ಭರವಸೆಯನ್ನು ಸಂತೋಷ್ ನಿಯೋಗಕ್ಕೆ ನೀಡಿದ್ದಾರೆ ಎನ್ನಲಾಗಿದೆ.- - - -15ಕೆಡಿವಿಜಿ2:
ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ದಾವಣಗೆರೆ ಬಿಜೆಪಿ ಮುಖಂಡರ ನಿಯೋಗ ಭೇಟಿ ಮಾಡಿ, ದಾವಣಗೆರೆ ಕ್ಷೇತ್ರದಲ್ಲಿ ಸೋಲಿನ ಕುರಿತು ವಿವರಣೆ ನೀಡಿತು. -15ಕೆಡಿವಿಜಿ3:ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ದಾವಣಗೆರೆ ಬಿಜೆಪಿ ಮುಖಂಡರ ನಿಯೋಗ ಭೇಟಿ ಮಾಡಿ, ಸೋಲಿನ ಬಗ್ಗೆ ವಿವರಣೆ ನೀಡಿತು.