ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ವಾರ್ಡ್ ನಂ.೨೭, ೨೮ ಹಾಗೂ ೩೧ರ ವ್ಯಾಪ್ತಿಯಲ್ಲಿ ಬರುವ ನವಭಾಗ ರಸ್ತೆ, ಒಳಚರಂಡಿ ಮೇಲೆ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡ ಕಟ್ಟಡಗಳನ್ನು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸುತ್ತಿದ್ದು, ಈ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ವಾರ್ಡ್ ನಂ.೨೭, ೨೮ ಹಾಗೂ ೩೧ರ ವ್ಯಾಪ್ತಿಯಲ್ಲಿ ಬರುವ ನವಭಾಗ ರಸ್ತೆ, ಒಳಚರಂಡಿ ಮೇಲೆ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡ ಕಟ್ಟಡಗಳನ್ನು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸುತ್ತಿದ್ದು, ಈ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು.ಮುಂಬರುವ ದಿನಗಳಲ್ಲಿ ನಗರದ ವಿವಿಧೆಡೆ ಒತ್ತುವರಿಯಾಗಿರುವ ಸಾರ್ವಜನಿಕ ರಸ್ತೆಗಳನ್ನು ಗುರುತಿಸಿಕೊಂಡು ತೆರವುಗೊಳಿಸಲು ಕ್ರಮ ವಹಿಸಬೇಕು. ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬೇಕು. ರಾಜಾಕಾಲುವೆಗಳ ಮೂಲಕ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ನಗರದ ನವಭಾಗ ರಸ್ತೆಯು ನಗರದ ಮಾಸ್ಟರ್ ಪ್ಲಾನ್ನಡಿ ೬೦ ಅಡಿ ಮುಖ್ಯ ರಸ್ತೆಯಾಗಿದ್ದು, ಜನ-ವಾಹನ ಸಂಚಾರಕ್ಕೆ ಅನಾನೂಕುಲವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯ ನೀರು ಸಂಗ್ರಹಣೆಯಾಗಿ ಅನಾನುಕೂಲವಾಗಿರುವುದರಿಂದ ರಸ್ತೆ ಅಗಲೀಕರಣ ಕಾರ್ಯ ಕೈಗೊಂಡು ನಗರದ ಅಭಿವೃದ್ಧಿ ಉದ್ದೇಶದಿಂದ ಅತಿಕ್ರಮಣ ಮಾಡಿಕೊಂಡ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು.ಆದರೂ ಅನೇಕ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಒತ್ತುವರಿಯಾದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿದ್ದರು. ನೋಟಿಸ್ ನೀಡಿದರೂ ತೆರವುಗೊಳಿಸದೇ ಇರುವ ಕಟ್ಟಡಗಳ ಕೆಲವು ಭಾಗಗಳನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಯಿತು. ಈ ವೇಳೆ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಉಪ ಆಯುಕ್ತ ವಿಠ್ಠಲ ಹೊನ್ನಳ್ಳಿ, ಮಹಾವೀರ ಬೋರಣ್ಣವರ, ವಲಯ ಆಯುಕ್ತ ಶಿವಪ್ಪ ಅಂಬಿಗೇರ, ಸುನೀಲ ಪಾಟೀಲ, ಕಾರ್ಯಪಾಲಕ ಅಭಿಯಂತರ ವಿದ್ಯಾಧರ ನ್ಯಾಮಗೊಂಡ, ಎಸ್.ಎ.ಇನಾಮದಾರ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಲ್ಲಪ್ಪ ಹಳ್ಳಿ ಸೇರಿದಂತೆ ಪಾಲಿಕೆಯ ವಿವಿಧ ಸಿಬ್ಬಂದಿ ಉಪಸ್ಥಿತರಿದ್ದರು.