ಕನ್ನಡಪ್ರಭ ವಾರ್ತೆ, ತುಮಕೂರುವೀರಲೋಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ನಗರದ ಗಾಜಿನ ಮನೆಯಲ್ಲಿ ಈ ತಿಂಗಳ 26, 27 ಮತ್ತು 28 ರಂದು ಹಮ್ಮಿಕೊಂಡಿರುವ ೫ನೇ ಆವೃತ್ತಿಯ ಬೃಹತ್ ‘ವೀರಲೋಕ ಪುಸ್ತಕ ಸಂತೆ'''''''' ಸಾಂಸ್ಕೃತಿಕ ಹಬ್ಬದ ಲೋಗೋವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗುರುವಾರ ಬಿಡುಗಡೆ ಮಾಡಿದರು.

ಓದುಗನಿಗೂ ಮತ್ತು ಕನ್ನಡ ಪುಸ್ತಕಗಳಿಗೂ ಇರುವ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆರ್.ಕೆ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯುವ 3 ದಿನಗಳ ಜ್ಞಾನದ ಜಾತ್ರೆಗೆ ನಾಡಿನಾದ್ಯಂತ ಒಂದು ಲಕ್ಷಕ್ಕೂ ಅಧಿಕ ಪುಸ್ತಕ ಪ್ರೇಮಿಗಳು ಹಾಗೂ ಓದುಗರು ಆಗಮಿಸುವ ನಿರೀಕ್ಷೆಯಿದೆ. ವೀರಲೋಕ ಪುಸ್ತಕ ಸಂತೆಯ ಯಶಸ್ಸಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಈ ವೇಳೆ ಭರವಸೆ ನೀಡಿದರು.ಪುಸ್ತಕ ಸಂತೆಯ ಪೂರ್ವ ಸಿದ್ಧತೆಯ 2 ದಿನಗಳು ಹಾಗೂ ಕಾರ್ಯಕ್ರಮ ನಡೆಯುವ 3 ದಿನಗಳು ಸೇರಿದಂತೆ ಒಟ್ಟು 5 ದಿನಗಳ ಕಾಲ ಗಾಜಿನಮನೆಯನ್ನು ಉಚಿತವಾಗಿ ಒದಗಿಸಿಕೊಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳು, ಪ್ರೌಢಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನೌಕರರು ಈ ಸಾಂಸ್ಕೃತಿಕ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲು ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲೇ ಆದೇಶವನ್ನು ಹೊರಡಿಸಲಾಗುವುದು ಎಂದು ಹೇಳಿದರು.ವಸತಿ ವ್ಯವಸ್ಥೆ: ರಾಜ್ಯದ ಮೂಲೆ ಮೂಲೆಗಳಿಂದ ಅಕ್ಷರ ಜಾತ್ರೆಗೆ ಆಗಮಿಸಲಿರುವ 100 ಕ್ಕೂ ಹೆಚ್ಚು ಪ್ರಮುಖ ಸಾಹಿತಿಗಳು ಮತ್ತು ಲೇಖಕರಿಗೆ ಜಿಲ್ಲಾಡಳಿತದ ವ್ಯಾಪ್ತಿಗೆ ಒಳಪಡುವ ಸರ್ಕಾರಿ ವಸತಿ ಗೃಹಗಳು ಅಥವಾ ಸೂಕ್ತ ಕೇಂದ್ರಗಳಲ್ಲಿ ತಂಗಲು ವಸತಿ ಸೌಕರ್ಯವನ್ನು ಕಲ್ಪಿಸಿಕೊಡುವಂತೆ ಕೋರಿದ ಮನವಿಗೆ ಜಿಲ್ಲಾಡಳಿತ ಸಮ್ಮತಿಸಿದೆ. ಯಾವುದೇ ಲಾಭಾಪೇಕ್ಷೆ ಇಲ್ಲದೆ, ನೈಜವಾಗಿ ಕನ್ನಡವನ್ನು ಕಟ್ಟುವ ಹಾಗೂ ಸಾಹಿತ್ಯವನ್ನು ಪ್ರಸಾರ ಮಾಡುವ ಈ ಸತ್ಕಾರ್ಯವು ತುಮಕೂರು ನಗರದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಮೂಡಿಬರಬೇಕು ಎಂದು ಜಿಲ್ಲಾಧಿಕಾರಿಗಳು ಶುಭ ಕೋರಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಯ್ಯ, ಪುಸ್ತಕ ಸಂತೆಯ ತಂಡವಾದ ರೇವಣ್ಣಸಿದ್ದಪ್ಪ, ಸೌಮ್ಯ, ನರೇಂದ್ರಬಾಬು, ಕಲ್ಪತರು ಪ್ರಶಾಂತ್, ಸೀಗಲಹಳ್ಳಿ ನರಸಿಂಹಮೂರ್ತಿ, ಗೋವರ್ಧನ್, ಶೈಲಜಾ, ಜ್ಯೋತಿ, ಕೃಷ್ಣ, ನಾಗೇಶ್, ಅನಿಲ್, ವಿನಯ್ ಕಾವ್ಯತನಯ ಮೊದಲಾದವರು ಭಾಗವಹಿಸಿದ್ದರು.