ಡಿಸಿಎಂ ಡಿಕೆಶಿ ಕ್ಷಮೆಯಾಚನೆಗೆ ಮಾ.24ರವರೆಗೆ ಗಡುವು

| Published : Mar 23 2025, 01:35 AM IST

ಡಿಸಿಎಂ ಡಿಕೆಶಿ ಕ್ಷಮೆಯಾಚನೆಗೆ ಮಾ.24ರವರೆಗೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಡಿ.ಕೆ.ಶಿವಕುಮಾರ್‌ ಆಡಿರುವ ಮಾತಿಗೆ ಒಂದು ಮಾತನ್ನು ಆಡದೆ ಸಮರ್ಥನೀಯ ಭಾವ ಪ್ರದರ್ಶಿಸಿರುವುದು ನಾಚಿಕೆಗೇಡಿನ ಸಂಗತಿ. ಶಿವಕುಮಾರ ಅವರಿಗೆ ಜಿಲ್ಲೆಯ ಜನರ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನೂ ಸಹ ಮಾಡದೆ ಗುಲಾಮರಂತೆ ಮೌನ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಸಂಬೋಧಿಸಿರುವುದು ಜಿಲ್ಲೆಯ ಜನರಿಗೆ ಅತೀವ ನೋವುಂಟುಮಾಡಿದೆ. ಹಾಗಾಗಿ ಮಾರ್ಚ್ ೨೪ರ ಸಂಜೆಯೊಳಗೆ ಡಿ.ಕೆ.ಶಿವಕುಮಾರ್‌ ಜಿಲ್ಲೆಯ ಜನರ ಕ್ಷಮೆ ಕೇಳಬೇಕೆಂದು ರೈತ ಸಂಘ ಏಕೀಕರಣ ಸಮಿತಿಯ ಸದಸ್ಯ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಜಿಲ್ಲೆಯ ಜನರು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಪ್ರಮುಖ ನೀರಾವರಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಹಾಗೆಯೇ ರಾಷ್ಟ್ರ ರಾಜಕಾರಣದಲ್ಲೂ ಭಾಗವಹಿಸಿ ಹೆಸರು ಮಾಡಿದ್ದಾರೆ. ಜಿಲ್ಲೆಯ ಜನರ ಬಗ್ಗೆ ಬೇರೆ ಜಿಲ್ಲೆಯ ಜನರಿಗೂ ಗೌರವವಿದೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಡಿ.ಕೆ.ಶಿವಕುಮಾರ್‌ ಆಡಿರುವ ಮಾತಿಗೆ ಒಂದು ಮಾತನ್ನು ಆಡದೆ ಸಮರ್ಥನೀಯ ಭಾವ ಪ್ರದರ್ಶಿಸಿರುವುದು ನಾಚಿಕೆಗೇಡಿನ ಸಂಗತಿ. ಶಿವಕುಮಾರ ಅವರಿಗೆ ಜಿಲ್ಲೆಯ ಜನರ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನೂ ಸಹ ಮಾಡದೆ ಗುಲಾಮರಂತೆ ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರದೇ ಛತ್ರಿ ಬುದ್ಧಿ ಎಂಬುದು ಸಾಬೀತಾಗಿದೆ. ಸೋಮವಾರದೊಳಗೆ ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.

ಮಾರ್ಚ್ ೨೫ ಕ್ಕೆ ಛತ್ರಿ ಮೆರವಣಿಗೆ:

ಮಾ.೨೪ ರ ಸೋಮವಾರ ಸಂಜೆಯೊಳಗೆ ಕ್ಷಮಾಪಣೆ ಕೇಳದಿದ್ದರೆ ಮಾ.೨೫ ರ ಬೆಳಗ್ಗೆ ೧೦ ಗಂಟೆಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್‌ವರೆಗೆ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳ ಮುಖಂಡರು ಛತ್ರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಶಂಭೂನಹಳ್ಳಿ ಸುರೇಶ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದಕ್ಕೆ ಜಿಲ್ಲೆಯ ಜನ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೋಸ್ಕರ ಈಗ ಈ ರೀತಿಯ ಗೇಲಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇವರ ಚರಿತ್ರೆ ಏನು ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. ಇವರಿಗೆ ಬುದ್ಧಿ ಕಲಿಸುವ ಕಾಲ ಬರುತ್ತದೆ ಎಂದು ನುಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಿವಳ್ಳಿ ಚಂದ್ರು, ಬೋರಲಿಂಗೇಗೌಡ ಪಣಕನಹಳ್ಳಿ, ಹಲ್ಲೆಗೆರೆ ಶಿವರಾಂ, ಹೊಳಲು ಸಂತೋಷ್,ಇಂಡುವಾಳು ಸಿದ್ದೇಗೌಡ ಮತ್ತಿತರರು ಹಾಜರಿದ್ದರು.