(ಮಿಡ್ಲ್)
ಕನ್ನಡಪ್ರಭ ವಾರ್ತೆ ಬೆಂಗಳೂರುಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಈವರೆಗೆ 32 ದೇವರ ಗುಡಿಗಳು ಹಾಗೂ 36 ಬಾವಿಗಳನ್ನು ಪತ್ತೆ ಮಾಡಿದ್ದು, ಇನ್ನೂ 68 ಗುಡಿಗಳು ಮತ್ತು 64 ಬಾವಿಗಳನ್ನು ಉತ್ಖನನ ಮಾಡಬೇಕಿದೆ. ಆ ಉತ್ಖನನ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುತ್ತಿದ್ದು, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಉತ್ಖನನ ಕಾರ್ಯ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್, ಲಕ್ಕುಂಡಿಯನ್ನು 100 ದೇವರ ಗುಡಿಗಳು ಮತ್ತು 100 ಬಾವಿಗಳಿರುವ ಸ್ಥಳ ಎಂದು ಕರೆಯಲಾಗುತ್ತದೆ. ಅವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕಳೆದೆರಡು ವರ್ಷಗಳಿಂದೀಚೆಗೆ ಉತ್ಖನನ ಕಾರ್ಯ ನಡೆಸಲಾಗುತ್ತಿದ್ದು, ಈವರೆಗೆ 32 ದೇವರ ಗುಡಿಗಳು ಹಾಗೂ 36 ಬಾವಿಗಳನ್ನು ಪತ್ತೆ ಮಾಡಲಾಗಿದೆ. ಉಳಿದವುಗಳ ಪತ್ತೆಗೆ ಉತ್ಖನನ ಕಾರ್ಯ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು.ಲಕ್ಕುಂಡಿಯಲ್ಲಿ ಕಳೆದೊಂದು ವರ್ಷದಿಂದ 3 ಸಾವಿರಕ್ಕೂ ಹೆಚ್ಚಿನ ಪ್ರಾಚ್ಯಾವಶೇಷಗಳು ಸಂಗ್ರಹವಾಗಿವೆ. ಅದರಲ್ಲೂ ಕಳೆದ 12 ದಿನಗಳಲ್ಲಿಯೇ 1500 ಪ್ರಾಚ್ಯಾವಶೇಷಗಳು ಪತ್ತೆಯಾಗಿ, ಅವನ್ನು ಸಂಸ್ಕರಿಸಲಾಗಿದೆ. ಇನ್ನು, ಲಕ್ಕುಂಡಿ ಗ್ರಾಮಸ್ಥರೇ 1500ಕ್ಕೂ ಹೆಚ್ಚಿನ ಪ್ರಾಚ್ಯಾವಶೇಷಗಳನ್ನು ನಮಗೆ ನೀಡಿದ್ದಾರೆ. ಮತ್ತಷ್ಟು ಉತ್ಖನನ ನಡೆಸಿ ಪ್ರಾಚ್ಯವಸ್ತುಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.
ಲಕ್ಕುಂಡಿಯಲ್ಲಿ ಹೊಯ್ಸಳ, ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ಅವಶೇಷಗಳು, ವಾಸ್ತುಶಿಲ್ಪಗಳಿವೆ. ಅವುಗಳನ್ನು ಪತ್ತೆ ಮಾಡಲಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ತೆರೆದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ಅದಕ್ಕೆ ಅಗತ್ಯ ಭೂಮಿಯನ್ನು ನಿಗದಿ ಮಾಡಲಾಗಿದೆ. ಹಾಗೆಯೇ, ಲಕ್ಕುಂಡಿಯನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸುವ ಸಲುವಾಗಿ ಯುನೆಸ್ಕೋಗೆ ಪ್ರಸ್ತಾವನೆಯನ್ನೂ ಕಳುಹಿಸಲಾಗುವುದು ಎಂದು ವಿವರಿಸಿದರು.
