ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಒಂದು ಊರಿಂದ, ಒಂದು ಊರಿಗೆ ಹೊರಟರೆ ಸಾಕು, ಸಾವಿರಾರು ಜನರು ಸಿದ್ಧೇಶ್ವರ ಅಪ್ಪನವರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಕಾರಣ ಅವರು ಬುದ್ಧನ ಸ್ವರೂಪಿಯಾಗಿದ್ದರು ಎಂದು ಗದುಗಿನ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಒಂದು ಊರಿಂದ, ಒಂದು ಊರಿಗೆ ಹೊರಟರೆ ಸಾಕು, ಸಾವಿರಾರು ಜನರು ಸಿದ್ಧೇಶ್ವರ ಅಪ್ಪನವರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಕಾರಣ ಅವರು ಬುದ್ಧನ ಸ್ವರೂಪಿಯಾಗಿದ್ದರು ಎಂದು ಗದುಗಿನ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗತಿಕ ತಾತ್ವಿಕ ಚಿಂತನೆಗಳು ೬ನೇ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಸಿದ್ದೇಶ್ವರ ಅಪ್ಪಾಜಿಯವರಿಗೆ ಹಿರಿಯರೆಂದರೆ, ಜನಸಾಮನ್ಯರೆಂದರೆ, ರೈತರೆಂದರೆ ಅಪಾರ ಪ್ರೀತಿ. ದೊಡ್ಡ-ದೊಡ್ಡ ವ್ಯಕ್ತಿಗಳಿಗಿಂತ ಸಾಮಾನ್ಯ ಜನರು ಬಂದರೆ ಸಾಕು ಅಪ್ಪನವರ ಮನಸ್ಸು ಅರಳುತ್ತಿತ್ತು. ಅಂತಹ ವ್ಯಕ್ತಿತ್ವ ಅಪ್ಪನವರದ್ದು. ಜಗತ್ತಿನ ಎಷ್ಟು ಜನ ತತ್ವಜ್ಞಾನಿಗಳು ಆಗಿ ಹೋಗಿದ್ದಾರೋ ಅವರ ಹೆಸರುಗಳೆಲ್ಲ ಅಪ್ಪನರ ನಾಲಿಗೆ ತುದಿಯಲ್ಲಿಯೇ ಇರುತ್ತಿದ್ದವು. ಸಾಕ್ರೇಟಿಸ್, ಪ್ಲೆಟೋ ಸೇರಿದಂತೆ ಹಲವಾರು ತತ್ವಜ್ಞಾನಿಗಳ ಸಾಧನೆ ಬಗ್ಗೆ ಅವರಲ್ಲಿ ಆಳವಾದ ಜ್ಞಾನ ಇತ್ತು. ಜಾಗತಿಕ ತತ್ವ ಚಿಂತನೆಗಳನ್ನು ಒಟ್ಟಾಗಿ ದೇಹ ರೂಪದಲ್ಲಿ ನೋಡಬೇಕಾದರೆ ಅದು ಸಿದ್ಧೇಶ್ವರ ಶ್ರೀಗಳು ಎಂದರು.
ಹೈಕೋರ್ಟ್ನ ನ್ಯಾ. ಕೃಷ್ಣ ದಿಕ್ಷೀತ್ ಮಾತನಾಡಿ, ನಾನು ಪ್ರಥಮ ಬಾರಿಗೆ ಸಿದ್ದೇಶ್ವರ ಸ್ವಾಮೀಜಿಯವರ ಪಕ್ಕದಲ್ಲಿ ಕುಳಿತಾಗ ನಾನು ಸಾಕ್ಷಾತ ರಾಮಕೃಷ್ಣ ಪರಮ ಹಂಸರ ಪಕ್ಕದಲ್ಲಿಯೇ ಕುಳಿತಿದ್ದೇನೆ ಎಂಬ ಭಾಸವಾಯಿತು. ಮತ್ತು ಅಪೂರ್ಣವಾಗಿದ್ದ ನಾನು ಪೂರ್ಣಗೊಂಡ ಅನುಭವವಾಯಿತು ಎಂದು ಹೇಳಿದರು.ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಶ್ರೀಗಳು ಆಶೀರ್ವಚನ ನೀಡಿ, ನಾನು ಈ ಮಾರ್ಗಕ್ಕೆ ಬಂದಿದ್ದೆ ಅಪ್ಪಾಜಿಯವರ ಪ್ರವಚನ, ಮಾತುಗಳನ್ನು ಕೇಳಿ. ಒಬ್ಬ ಯೋಗಿ ಹೇಗೆ ಇರುತ್ತಾನೆ ಎಂಬುವುದಕ್ಕೆ ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ನನ್ನ ಜೀವನದಲ್ಲಿ ಇಷ್ಟು ಸರಳವಾಗಿ ಬದುಕುತ್ತಿದ್ದರೆ, ಏನಾದರೂ ಬದಲಾವಣೆ ಕಂಡಿದ್ದರೆ ಅದು ಶ್ರೀ ಸಿದ್ದೇಶ್ವರ ಅಪ್ಪನವರೇ ಕಾರಣ ಎಂದರು.ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿದರು. ವಿಜಯಪುರದ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧರೂಢ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ರೈತರು, ನಾಯಕರು, ನೂರಾರು ಭಕ್ತರು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಚಿನ್ನದ ಪದಕ ಪಡೆದಂತಹ ಜ್ಯೋತಿರ್ಲಿಂಗ ಹೊನಕಟ್ಟಿ ಜಾನಪದ ಗೀತೆ ಹಾಡಿದರು. ವಿಜಯಪುರದ ಚಾಣಕ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಟಿ.ಮೇರವಾಡೆ ಸ್ವಾಗತಿಸಿದರು, ಸಂಗಮೇಶ ಬಾಬು ನಿರೂಪಿಸಿದರು.