ಜಿಂಕೆ ಮಾಂಸ ವಶ: ಮೂವರು ಆರೋಪಿಗಳ ಬಂಧನ

| Published : Sep 06 2025, 01:00 AM IST

ಸಾರಾಂಶ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು ಮಾಂಸವನ್ನು ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ಮಾಡಿ 3 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಬುಧವಾರ ರಾತ್ರಿ 10.30 ಗಂಟೆಗೆ ನಡೆದಿದೆ.

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು ಮಾಂಸವನ್ನು ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ಮಾಡಿ 3 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಬುಧವಾರ ರಾತ್ರಿ 10.30 ಗಂಟೆಗೆ ನಡೆದಿದೆ. ಸಯ್ಯದ್ ಮನ್ಸೂರ್, ಅಜತ್, ಗಿರೀಶ್ ಬಂಧಿತ ಆರೋಪಿಗಳು. ಮಹಮ್ಮದ್ ಆರೀಫ್, ಸಯ್ಯದ್ ಎಂಬವರು ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮುತ್ತಿನಕೊಪ್ಪ ಗ್ರಾಪಂ ಕುಸುಬೂರು ಗ್ರಾಮದ ದೊಡ್ಡಿನತಲೆ ಮೇಲ್ಬಾಗದ ಆರಂಬಳ್ಳಿ ಅರಣ್ಯದ ಸ.ನಂ.48 ರ ಜಾಗಕ್ಕೆ ಹೋಗಿ ನೋಡಿದಾಗ 5 ಜನ ಆರೋಪಿಗಳು ಜಿಂಕೆ ಮಾಂಸವನ್ನು ಬೆಂಕಿಯಿಂದ ಬೇಯಿಸುತ್ತಿರುವುದು ಕಂಡು ಬಂದಿದೆ. ಅರಣ್ಯಾಧಿಕಾರಿಗಳ ತಂಡದವರು ಆರೋಪಿಗಳನ್ನು ಹಿಡಿಯಲು ಹೋದಾಗ ಎಲ್ಲಾ ಆರೋಪಿಗಳು ಮುತ್ತಿನಕೊಪ್ಪ ಭಾಗದವರಾಗಿದ್ದಾರೆ. ಜೊತೆಗೆ ಜಿಂಕೆ ಕೊಲ್ಲಲು ಬಳಸಿದ್ದ ನಾಡ ಬಂದೂಕು ಹಾಗೂ ಜಿಂಕೆ ಮಾಂಸವನ್ನು ವಶಪಡಿಸಿ ಕೊಳ್ಳಲಾಯಿತು. ಬಂಧಿತ ಮೂರು ಆರೋಪಿಗಳನ್ನು ಗುರುವಾರ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು 14 ದಿನ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗೆ ಅರಣ್ಯ ಇಲಾಖೆಯವರು ಬಲೆ ಬೀಸಿದ್ದಾರೆ, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹಾಗೂ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಬು ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತು ಅರಣ್ಯ ಪಾಲಕರಾದ ಬಲರಾಮೇಗೌಡ, ಪ್ರವೀಣ್ ಕುಮಾರ್, ರಾಘವೇಂದ್ರ ಹಾಗೂ ವಾಹನ ಚಾಲಕ ಸುದೀಪ್ ಪಾಲ್ಗೊಂಡಿದ್ದರು.