ಪ್ರತಿನಿತ್ಯ ನಗರ ಸ್ವಚ್ಛತೆ ಕಾಯಕ ಮಾಡುವ ಪೌರಕಾರ್ಮಿಕರ ಹಿತ ಕಾಪಾಡಲು ನಗರಸಭೆ ಬದ್ಧವಾಗಿರಬೇಕು. ಪೌರಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯಲ್ಲಿ ಸಮರ್ಪಕವಾಗಿ ತಲುಪಿಸಲು ಮುಂದಾಗುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಅಂಬೇಡ್ಕರ್ ಭವನದ ಮಿನಿ ಸಭಾಂಗಣದಲ್ಲಿ ನಡೆದ ಪೌರಕಾರ್ಮಿಕರೊಡನೆ ನೇರ ಸಂವಾದ ಮತ್ತು ಅಧಿಕಾರಿಗಳೊಡನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ವಯ ಪೌರಕಾರ್ಮಿಕರಿಗೆ ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಆಯೋಗದಿಂದ ಕ್ರಮ ವಹಿಸಲಾಗುವುದು ಎಂದು ತಾಕೀತು ಮಾಡಿದರು.

ಪ್ರತಿನಿತ್ಯ ನಗರ ಸ್ವಚ್ಛತೆ ಕಾಯಕ ಮಾಡುವ ಪೌರಕಾರ್ಮಿಕರ ಹಿತ ಕಾಪಾಡಲು ನಗರಸಭೆ ಬದ್ಧವಾಗಿರಬೇಕು. ಪೌರಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕು. ಸಮವಸ್ತ್ರ, ಕೈಗೌಸ್, ಗಮ್‌ಬೂಟ್, ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು. ಹೊರಗುತ್ತಿಗೆ ನೇಮಕದಲ್ಲಿನ ಮಾನದಂಡಗಳನ್ನು ಏಜೆನ್ಸಿದಾರರು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಏಜೆನ್ಸಿದಾರರಿಗೆ ನೋಟಿಸ್ ಜಾರಿಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರಿಗೆ ಗುಣಮಟ್ಟದ ಬೆಳಗಿನ ಉಪಾಹಾರ ನೀಡಬೇಕು. ಗುರುತಿನ ಚೀಟಿ ನೀಡಬೇಕು. ಇಎಸ್ಐ ಮತ್ತು ಪಿಎಫ್ ಕ್ರಮಬದ್ಧವಾಗಿ ಕಟಾವಾಗಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ರವರು ಹಲಹಳ್ಳಿ ಸ್ಲಮ್ ಬೋರ್ಡ್ ಮತ್ತು ಪಿ.ಕೆ. ಕಾಲೋನಿ(ಪೂರ್ಣ ಕಾರ್ಮಿಕರ ಕಾಲೋನಿ)ಗಳಿಗೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಆಲಿಸಿದರು.

ನೆಹರು ನಗರಕ್ಕೆ ಭೇಟಿ ನೀಡಿ ಪೌರಾಕಾರ್ಮಿಕರಿಗೆ ಹಕ್ಕು ಪತ್ರ ವಿತರಣೆ ಕುರಿತು ಸಮಸ್ಯೆಗಳನ್ನು ಪರಿಶೀಲಿಸಲಾಯಿತು ಹಾಗೂ ಪೌರಾಕಾರ್ಮಿಕರಿಗಾಗಿ ಸಮುದಾಯ ಭವನವನ್ನು ನಿರ್ಮಾಣದ ಲೋಪದೋಷಗಳನ್ನು ಹಾಗೂ ಹಲಹಳ್ಳಿಯಲ್ಲಿ ಸ್ಲಮ್ ಬೋರ್ಡ್ ನಲ್ಲಿ ಕಾರ್ಮಿಕರಿಗಾಗಿ ಮನೆಗಳನ್ನು ನಿರ್ಮಿಸಲಾಗಿದ್ದು ಮನೆಗಳನ್ನು ಕಳಪೆ ಕಾಮಗಾರಿ ಕುರಿತು ಪರಿಶೀಲನೆ ಮಾಡಲಾಯಿತು ಎಂದರು. ಕಾರ್ಯಕ್ರಮದಲ್ಲಿ ನಗರಸಭೆಯ ಪೌರಯುಕ್ತೆ ಯು.ಪಿ.ಪಂಪಾಶ್ರೀ, ಸಿ. ಶಂಕರ್, ರುದ್ರೇಗೌಡ ಮತ್ತು ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.