ಸಾರಾಂಶ
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮನವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕು ಆಡಳಿತ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನನ್ನು ಭೂರಹಿತ ದಲಿತರಿಗೆ ಕಾಯ್ದಿರಿಸಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮನವಿ ನೀಡಿ ಮಾತನಾಡಿ, ಎನ್.ಆರ್ ಪುರ ತಾಲೂಕಿನ ಕಸಬಾ ಹೋಬಳಿ ಸೂಸಲವಾನಿ ಗ್ರಾಮದ ಸರ್ವೇ ನಂ. 32/2 ರಲ್ಲಿ ಗೋಮಾಳ ಮತ್ತು ಕಾಫಿ ಖರಾಬು ಹೆಚ್ಚುವರಿ ಜಮೀನನ್ನು ಬಹು ಜಮೀನು ಒತ್ತುವರಿದಾರರಿಂದ ತೆರವುಗೊಳಿಸಿದ್ದು, ಈ ಜಮೀನು ಭೂರಹಿತ ದಲಿತರಿಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ ಎಂದರು. ಇದೇ ಸರ್ವೆ ನಂಬರ್ನಲ್ಲಿ 20 ಎಕರೆ 8 ಗುಂಟೆ ಸರ್ಕಾರಿ ಜಮೀನನ್ನು ಭೂಮಾಲೀಕರು ಅತಿಕ್ರಮವಾಗಿ ಸರ್ಕಾರಿ ಕಂದಾಯ ಭೂಮಿ ಹೊಂದಿರುವ ಬಗ್ಗೆ ಪರಿಶೀಲಿಸಿದ ತಾಲೂಕು ಆಡಳಿತ ತೆರವುಗೊಳಿಸಿದ್ದು, ಇದೇ ಭೂಮಿಯನ್ನು ಬಡ ಭೂ ರಹಿತ ದಲಿತರಿಗೆ ಕೃಷಿ ಸಾಗುವಳಿ ಮತ್ತು ನಿವೇಶನಕ್ಕೆ ಕಾಯ್ದಿರಿಸಿ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಎನ್.ಆರ್ ಪುರ ತಾಲೂಕಿನಾದ್ಯಂತ ಇಂತಹ ಭೂ ಕಬಳಿಕೆ ಸಮಸ್ಯೆಗಳಿದ್ದು, ಉಳ್ಳವರು ಭೂಕಬಳಿಕೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ತಾವು ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ತ್ವರಿತವಾಗಿ ಸ್ಥಳ ಪರಿಶೀಲಿಸಿ ಸರ್ವೆ ಮಾಡಿಸಿ ದಲಿತರಿಗೆ ಭೂ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ವಿ. ಭವಾನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜೇಶ್, ಮೃತ್ಯುಂಜಯ, ಅಬ್ದುಲ್ ರೆಹಮನ್, ತಾಲೂಕು ಸಂಘಟನಾ ಸಂಚಾಲಕ ಬಿ.ಆರ್ ಸಿದ್ದಪ್ಪ ಹಾಜರಿದ್ದರು.
21 ಕೆಸಿಕೆಎಂ 3ತೆರವುಗೊಳಿಸಿದ ಭೂಮಿಯನ್ನು ಭೂ ರಹಿತ ದಲಿತರಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಸಲ್ಲಿಸಿದರು.