ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದ ದಲಿತರ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತುತ ಮಂಡಿಸಲಿರುವ 2024-2025ನೇ ಸಾಲಿನ ಬಜೆಟ್ನಲ್ಲಿ 60,000 ಕೋಟಿ ರು. ಅನುದಾನ ಘೋಷಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 34293 ಕೋಟಿ ರು. ಒದಗಿಸಲಾಗಿತ್ತು. ಕಳೆದ 2014-2015ರಿಂದ 2023-2024ರ ವರೆಗೆ ದಲಿತರಿಗೆ ನೀಡಲಾಗಿದ್ದ ಅನುದಾನವನ್ನು ಎಸ್ಸಿ, ಎಸ್ಟಿ ಕಾಯ್ದೆಯ ನ್ಯೂನ್ಯತೆಯಿಂದಾಗಿ ಸುಮಾರು ಹಣವನ್ನು ಇತರೆ ಉದ್ದೇಶಗಳಿಗಾಗಿ ಬಳಸಲಾಗಿದೆ. ಇದರಿಂದ ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳಿಗೆ ಹೊಡೆತ ಬಿದ್ದಿದೆ. ಆದಾಗ್ಯೂ, ಎಸ್ಸಿ, ಎಸ್ಟಿ ಕಾಯ್ದೆಯ ಕಲಂ 72ಡಿ ರದ್ದು ಮಾಡುವ ಮೂಲಕ ದಲಿತರ ಹಣವನ್ನು ಇತರೆ ಉದ್ದೇಶಗಳಿಗೆ ಬಳಸದಂತೆ ಕಾಯ್ದೆ ಜಾರಿಗೆ ತರುವ ಮೂಲಕ ಅನ್ಯಾಯ ಸರಿಪಡಿಸಲಾಗಿದೆ ಎಂದರು.
ಭೂ ಒಡೆತನ ಯೋಜನೆ ಕೂಡಲೇ ಜಾರಿಯಾಗುವಂತೆ, ಜವಳಿ ಇಲಾಖೆಯಿಂದ ದಲಿತ ಉದ್ಯಮಿದಾರರಿಗೆ ಅನ್ಯಾಯವಾಗುತ್ತಿದ್ದು, ಕಳೆದ ಎರಡು ವರ್ಷದಿಂದ ಗುರಿ ನೆಪದಲ್ಲಿ ಅರ್ಜಿ ಸ್ವೀಕರಿಸಿಲ್ಲ. ಯಾರು ಅರ್ಹರಿದ್ದಾರೆ ಎಲ್ಲರಿಗೂ ಅನುದಾನ ಕೊಡುವಂತೆ, ರಾಜ್ಯಾದ್ಯಂತ ವಸತಿ ರಹಿತ ದಲಿತರಿಗೆ ಶೀಘ್ರ ಮನೆ ಮಂಜೂರಿ ಮಾಡುವಂತೆ, ಎಲ್ಲ ಇಲಾಖೆಯಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ, ಕೆಐಎಡಿಬಿ ಮೂಲಕ ದಲಿತ ಉದ್ದಿಮೆದಾರರಿಗೆ ನೀಡಲಾಗುತ್ತಿರುವ ಭೂಮಿಗೆ ಸಹಾಯಧನವನ್ನು ಶೇಕಡಾ 80ರಷ್ಟಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಾರ್ಷಿಕ ಹತ್ತು ಸಾವಿರ ಕೋಟಿ ರೂ.ಗಳನ್ನು ಕೊಡುವಂತೆ, ರಾಜ್ಯಾದ್ಯಂತ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ನಿಗಮಗಳಲ್ಲಿ ಮಂಜೂರಾಗಬೇಕಾದ ಸಾಲದ ಅರ್ಜಿಗಳನ್ನು ಶೀಘ್ರ ಮಂಜೂರು ಮಾಡುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಡಿ. ದೇವೆಂದ್ರಕರ್, ಮರಿಯಪ್ಪಾ ಬನಹಟ್ಟಿ, ಮಲ್ಲಿಕಾರ್ಜುನ್ ಶೆಳ್ಳಗಿ, ಪಾಂಡುರಂಗ್ ಮದನಕರ್ ಉಪಸ್ಥಿತರಿದ್ದರು.