ರಾಜ್ಯ ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಕಚೇರಿಯ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಬದಲಾವಣೆ ಮಾಡುವ ಮೂಲಕ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅನುಕೂಲತೆ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು.

ಗದಗ: ಜಿಲ್ಲಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಯ ಸಮಯವನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಹಾಗೂ ಕಲಬುರಗಿ ವಿಭಾಗದ ವ್ಯಾಪ್ತಿಗಳ ಜಿಲ್ಲೆಗಳಲ್ಲಿ ಕಚೇರಿ ಸಮಯವನ್ನು ಬದಲಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮಾದರಿಯಲ್ಲಿಯೇ ಗದಗ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಗದಗ ಜಿಲ್ಲೆಯಲ್ಲಿ 39 ಡಿಗ್ರೆ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದಿನ ದಿನಕ್ಕೆ ಬಿಸಿಲಿನ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರು ಹಳ್ಳಿಗಳಿಗೆ ಕರ್ತವ್ಯವನ್ನು ನಿರ್ವಹಿಸುವಲ್ಲಿ ಆರೋಗ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಕಚೇರಿಯ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರ ವರೆಗೆ ಬದಲಾವಣೆ ಮಾಡುವ ಮೂಲಕ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅನುಕೂಲತೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮನವಿ ಸ್ವೀಕರಿಸಿದರು. ಈ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಎಂ.ಎಂ. ನಿಟ್ಟಾಲಿ, ಶ್ರೀಧರ ಚಿನ್ನಗುಂಡಿ, ಶಿಲ್ಪಾ, ಕುಮಾರ, ಜೋಷನಾ ಸೇರಿದಂತೆ ಇತರರು ಇದ್ದರು.ಜನಗಣತಿ ದೇಶದ ಅಭಿವೃದ್ಧಿಗೆ ಆಧಾರ

ನರೇಗಲ್ಲ: ಜನಗಣತಿ ದೇಶದ ಅಭಿವೃದ್ಧಿಗೆ ಆಧಾರವಾಗಿದ್ದು, ಸರ್ಕಾರದ ಯೋಜನೆಗಳ ರೂಪಿಸಲು ನಿಖರ ಮಾಹಿತಿ ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲಿ ಗಣತಿದಾರರು ಪ್ರಾಮಾಣಿಕತೆ ಮತ್ತು ಜವಾಬ್ದಾರಿತನದಿಂದ ಕೆಲಸ ನಿರ್ವಹಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಹಾಗೂ ಭಾರತೀಯ ಜನಗಣತಿ- 2027ರ ಪ್ರಭಾರಿ ಅಧಿಕಾರಿ ಮಲ್ಲೇಶ ಪಚ್ಚಿ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಸೋಮವಾರ ಭಾರತಿಯ ಜನಗಣತಿ- 2027ರ ಸಮೀಕ್ಷೆ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಬಾರಿ ಜನಗಣತಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯಲಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ಸಂಗ್ರಹಿಸಬೇಕಾಗಿದೆ. ಇದರಿಂದ ಮಾಹಿತಿ ಸಂಗ್ರಹಣೆ ವೇಗವಾಗಿ ಹಾಗೂ ನಿಖರವಾಗಿ ನಡೆಯಲಿದೆ ಎಂದರು.ಜಿಲ್ಲಾ ಭಾರತೀಯ ಜನಗಣತಿ ತರಬೇತಿದಾರ ಬಸವರಾಜ ಗಿರಿತಿಮ್ಮಣ್ಣವರ ಮಾತನಾಡಿ, ಪ್ರತಿ ಮನೆಗೂ ಭೇಟಿ ನೀಡಿ ಕುಟುಂಬದ ಸಂಪೂರ್ಣ ವಿವರಗಳನ್ನು ದಾಖಲಿಸುವುದು, ಮನೆ ಬೀಗ ಹಾಕಿರುವ ಸಂದರ್ಭಗಳಲ್ಲಿ ಮರುಭೇಟಿ ನೀಡುವುದು, ಜನರೊಂದಿಗೆ ವಿನಯಪೂರ್ವಕವಾಗಿ ವರ್ತಿಸುವುದು, ತಪ್ಪು ಮಾಹಿತಿ ದಾಖಲಿಸದಿರುವುದು ಹಾಗೂ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿ ಕಾಪಾಡುವುದು ಮುಖ್ಯ ಎಂದರು.

ಆರ್.ಎಸ್. ನರೇಗಲ್ಲ, ವಿ.ಎ. ಕುಂಬಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿವಾನಂದ ಗೋಗೆರಿ, ಬಿ.ಎಸ್. ಕಳಕಣ್ಣವರ ಜನಗಣತಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು. ಪಪಂ ಸಿಬ್ಬಂದಿಗಳಾದ ಎಂ.ಎಚ್. ಸೀತಿಮನಿ, ರಮೇಶ ಹಲಗಿಯವರ, ಎ.ಎಸ್. ಮೆಣಸಗಿ, ನಾಜೀಮಾ ಬೆಲೇರಿ, ಶಂಕ್ರಪ್ಪ ದೊಡ್ಡಣ್ಣವರ, ಆರೀಫಬೇಗ ಮಿರ್ಜಾ, ನೀಲಪ್ಪ ಚಳ್ಳಮರದ, ಉದಯ ಮುದೇನಗುಡಿ, ಮಣಿಕಂಠ ಹೂಗಾರ, ಕಾವ್ಯಾ ಅರವಟಗಿಮಠ, ಪೂರ್ಣಿಮಾ ಹೊಸಮನಿ, ರೇಣುಕಾ ಕಳಕಣ್ಣವರ, ಚಿದಂಬರ ಹುಣಶಿಮರದ ಸೇರಿದಂತೆ ಇತರರಿದ್ದರು.