ಹೊಸಕೊಪ್ಪ ಗ್ರಾಮದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಶುಕ್ರವಾರ ದಿಢೀರ್ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಹೊಳೆಹೊನ್ನೂರು: ಹೊಸಕೊಪ್ಪ ಗ್ರಾಮದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಶುಕ್ರವಾರ ದಿಢೀರ್ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಹೊಸಕೊಪ್ಪ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಅನೇಕ ವರ್ಷಗಳೇ ಕಳೆದಿವೆ. ಆದರೆ ಈ ವರೆಗೂ ಸಮಯಕ್ಕೆ ಸರಿಯಾಗಿ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಆಗಿಲ್ಲ. ಇದರಿಂದ ಟ್ಯಾಂಕಿನ ಒಳಭಾಗದಲ್ಲಿ ಛಾವಣಿ ಬಿದ್ದು ಕಬ್ಬಿಣ ಕಾಣುತ್ತಿದ್ದು ತುಕ್ಕು ಹಿಡಿದಿದೆ. ಮಾತ್ರವಲ್ಲ ಟ್ಯಾಂಕಿನ ಪಿಲ್ಲರ್ಗಳು ಬಿರುಕು ಬಿಟ್ಟು ಅಪಾಯ ಸ್ಥಿತಿಯಲ್ಲಿವೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಕಚೇರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು. ತಕ್ಷಣ ಈ ಬಗ್ಗೆ ಗಮನ ಹರಿಸಿ ದುರಸ್ತಿ ಕಾರ್ಯ ಮಾಡಿ ಒಳ್ಳೆಯ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಅಮೃತ್ ಯೋಜನೆಯಡಿ ಬೃಹತ್ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ನೀಡಲಾಗುತ್ತದೆ. ಅಲ್ಲಿವರೆಗೆ ಹಾಲಿ ಇರುವ ಟ್ಯಾಂಕ್ ಅನ್ನು ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಆರ್.ಉಮೇಶ್, ಮಾಜಿ ಉಪಾಧ್ಯಕ್ಷ ನಾಗೇಶ್, ಸ್ಥಳೀಯ ಮುಖಂಡರಾದ ಇ.ರಮೇಶ್, ವಾಜೀದ್, ಎಚ್.ಬಿ.ಸಂದೇಶ್, ದೇವೇಂದ್ರ, ಎನ್.ಚರಣ್, ಎ.ಲೋಹಿತ್, ಜನಕರಾಜ್, ಪುನೀತ್, ಮಾರುತಿ, ಮತ್ತಿತರರು ಭಾಗವಹಿಸಿದ್ದರು.