ಅಂಗನವಾಡಿ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹ

| Published : Jan 31 2025, 12:48 AM IST

ಸಾರಾಂಶ

ಪ್ರಸಕ್ತ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಪ್ರಿಯಾಂಕಗಾಂಧಿ ಘೋಷಿಸಿದ ಆರನೇ ಗ್ಯಾರಂಟಿಯಂತೆ) ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಫೆಬ್ರವರಿ ೩ರಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಫೆಡರೇಷನ್ ಕಾರ್ಯಾಧ್ಯಕ್ಷೆ ಲೀನಾ ಡಯಾಸ್ ತಿಳಿಸಿದರು. ಪ್ರಿಯಾಂಕ ಗಾಂಧಿಯವರು ಘೋಷಿಸಿದ ಆರನೇ ಗ್ಯಾರಂಟಿಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರು.೧೫,೦೦೦ ಹಾಗೂ ಸಹಾಯಕಿಯರಿಗೆ ರು.೧೦,೦೦೦ ಗೌರವಧನ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರಸಕ್ತ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಪ್ರಿಯಾಂಕಗಾಂಧಿ ಘೋಷಿಸಿದ ಆರನೇ ಗ್ಯಾರಂಟಿಯಂತೆ) ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಫೆಬ್ರವರಿ ೩ರಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಫೆಡರೇಷನ್ ಕಾರ್ಯಾಧ್ಯಕ್ಷೆ ಲೀನಾ ಡಯಾಸ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ೧೯೭೫ರಲ್ಲಿ ರೂಪಿಸಿರುವ ಸಮಗ್ರ ಶಿಶು ಅಭಿವೃದ್ಧಿಯೋಜನೆಯು ೫೦ ವರ್ಷ ಸಾಗಿ "ಸುವರ್ಣಸಂಭ್ರಮ " ದತ್ತಮುಂದಡಿ ಇಡುತ್ತಿದೆ. ರಾಜ್ಯದ ಒಂದು ಲಕ್ಷದ ನಲವತ್ತು ಸಾವಿರ ಅಂಗನವಾಡಿ ಮಹಿಳಾ ನೌಕರರು ಸೇರಿದಂತೆ ದೇಶದಲ್ಲಿ ೨೮ ಲಕ್ಷದಷ್ಟು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದೀನ-ದುರ್ಬಲವರ್ಗದ ಮಕ್ಕಳ ಪೌಷ್ಠಿಕ ಆಹಾರ, ಲಾಲನೆ-ಪಾಲನೆ, ಆರೋಗ್ಯ, ಶಾಲಾಪೂರ್ವ ಶಿಕ್ಷಣ ನೀಡುವುದು ಸೇರಿದಂತೆ ಗರ್ಭಿಣಿ-ಬಾಣಂತಿಯರ ಪೂರಕ ಪೌಷ್ಠಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸುವ ಮೂಲಕ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಠಿಕತೆ ಹಾಗೂ ರಕ್ತ ಹೀನತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸೈನಿಕರಂತೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಿಸ್ವಾರ್ಥತೆಯಿಂದ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂದು ದೂರಿದರು.

ಕನಿಷ್ಠ ಪ್ರಮಾಣದ ಗೌರವಧನ ನೀಡುವ ಮೂಲಕ ಸರ್ಕಾರಗಳು ಅವರ ಕೆಲಸವನ್ನು ಕೇವಲ ಗೌರವ ಸೇವೆ ಎಂದು ಪರಿಭಾವಿಸಿ ಬದುಕಲು ಬೇಕಾದಷ್ಟು ಸಂಭಾವನೆ ನೀಡದೆ ಶೋಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಗುಜರಾತ್ ಉಚ್ಚನ್ಯಾಯಾಲಯ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಗೊಳಿಸಿ ಜಾರಿಗೊಳಿಸಬೇಕೆಂದು ನಿರ್ದೇಶಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಾಗೂ ಖಾನಾಪುರದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ ಆರನೇ ಗ್ಯಾರಂಟಿಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರು.೧೫,೦೦೦ ಹಾಗೂ ಸಹಾಯಕಿಯರಿಗೆ ರು.೧೦,೦೦೦ ಗೌರವಧನ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

೨೦೨೨ರಲ್ಲಿ ಸುಪ್ರೀಂಕೋರ್ಟ್ ಕೈಗೊಂಡಿರುವ ತೀರ್ಪಿನಂತೆ ನಿವೃತ್ತರಾದ ಎಲ್ಲಾ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕು. ಹಾಗೂ ಗುಜರಾತಿನ ಉಚ್ಚನ್ಯಾಯಾಲಯ ತನ್ನ ಇತ್ತೀಚಿನ ತೀರ್ಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು "ನಾಗರಿಕ ಸೇವೆಗೆ " ಸಮಾನವಾಗಿ ಪರಿಗಣಿಸಬೇಕೆಂಬ ನಿರ್ದೇಶನದ ಹಿನ್ನೆಲೆಯಲ್ಲಿ ಕ್ರಮವಾಗಿ ಸಿ ಮತ್ತು ಡಿ ದರ್ಜೆ ನೌಕರರ ಸ್ಥಾನಮಾನ ನೀಡುವ ಮೂಲಕ ಖಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಒತ್ತಾಯಿಸುತ್ತದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಿಸಿ ಗ್ರಾಚ್ಯುಟಿ ಸೌಲಭ್ಯವನ್ನು ನಿವೃತ್ತರಾದ ಎಲ್ಲರಿಗೂ ಅನ್ವಯಿಸುವಂತೆ ಜಾರಿಗೊಳಿಸಬೇಕೆಂದು ಕೋರುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಎಸ್.ಎನ್. ಜಯಲಕ್ಷ್ಮಿ, ಖಜಾಂಚಿ ಪಿ.ಡಿ. ನಾಗರತ್ನ, ಲತಾ, ವಿಜಯ, ತುಳಸಿ, ಇತರರು ಉಪಸ್ಥಿತರಿದ್ದರು.