ಮೊಬೈಲ್ ರಿಚಾರ್ಜ್ ಬೆಲೆ ಹೆಚ್ಚಳ ಹಿಂಪಡೆಯಲು ಆಗ್ರಹ

| Published : Jul 03 2024, 12:15 AM IST

ಸಾರಾಂಶ

ಮೊಬೈಲ್ ರಿಚಾರ್ಜ್‌ಗಳ ಬೆಲೆ ಹೆಚ್ಚಳ ಖಂಡಿಸಿ, ತಕ್ಷಣವೇ ದರ ಏರಿಕೆ ಹಿಂಪಡೆಯಲು ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಅಖಿಲ ಭಾರತ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಯ ಕಾರ್ಯಾಲಯದ ಮೂಲಕ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಸಚಿವರಿಗೆ ಹಾಗೂ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರಿಚಾರ್ಜ್‌ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ತಕ್ಷಣವೇ ದರ ಏರಿಕೆ ಹಿಂಪಡೆಯಲು ಆಗ್ರಹಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಅಖಿಲ ಭಾರತ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಯ ಕಾರ್ಯಾಲಯದ ಮೂಲಕ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಸಚಿವರಿಗೆ ಹಾಗೂ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರ ದೇವರಾಜ್ ಹೊಸಮನಿ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲ ಸೇವೆಗಳನ್ನು ಸರ್ಕಾರಗಳು ಡಿಜಿಟಲೀಕರಣಗೊಳಿಸಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ, ಯುವಕರು ಆನ್‌ಲೈನ್ ಅರ್ಜಿ ನಮೂನೆ ಮತ್ತು ಸಾರ್ವಜನಿಕ ಸೇವಾ ಪರೀಕ್ಷೆಗಳಿಗೆ, ಆನ್‌ಲೈನ್ ವಹಿವಾಟಿಗೆ ಬೀದಿ ವ್ಯಾಪಾರಿಗಳು ಮತ್ತು ವೈದ್ಯಕೀಯ ಸೇವೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಸಾಮಾನ್ಯ ಜನರು ಸೇರಿದಂತೆ ಪ್ರತಿಯೊಂದು ವಿಭಾಗದ ಜನರು ಅಂತರ್ಜಾಲದ ಮೇಲೆ ಅವಲಂಬಿತರಾಗಿದ್ದಾರೆ. ಇಂದು ಇಂಟರ್ನೆಟ್ ಮೊಬೈಲ್ ಡೇಟಾ ಮತ್ತು ರೀಚಾರ್ಜ್ ಜನರ ಜೀವನದ ಅನಿವಾರ್ಯ ಭಾಗವಾಗಿದೆ. ಮತ್ತೊಂದೆಡೆ, ನಿರುದ್ಯೋಗ ಮತ್ತು ಹಣದುಬ್ಬರದಿಂದಾಗಿ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಜನಸಾಮಾನ್ಯರು ಪರದಾಡುವಂತಾಗಿದೆ. ಹಾಗಾಗಿ ಮೊಬೈಲ್ ಡೇಟಾ ಇಂದು ಎಷ್ಟು ಅವಶ್ಯಕವಾಗಿದೆ ಎಂದರೆ ಮೊಬೈಲ್ ರಿಚಾರ್ಜ್‌ಗಾಗಿ ಹಣ ಉಳಿಸಲು ಹಸಿವಿನಿಂದ ಇರುವ ಅನಿವಾರ್ಯತೆಗೆ ಅವರು ಒಳಗಾಗಿದ್ದಾರೆ.

ಸಾಮಾನ್ಯ ಜನರ ಇಂತಹ ಶೋಚನೀಯ ಮತ್ತು ಅಸಹಾಯಕ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ನಿರಂಕುಶ, ಅಮಾನವೀಯವಾಗಿ ಪ್ರಿಪೇಯ್ಡ್ ಮೊಬೈಲ್ ಮತ್ತು ಡೇಟಾ ಸೇವೆಗಳ ಶುಲ್ಕವನ್ನು ಮತ್ತೊಮ್ಮೆ ಹೆಚ್ಚಿಸಿವೆ. ಕೊರೋನಾ ಅವಧಿಯಿಂದಲೂ, ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ವ್ಯವಹಾರಗಳು ಭಾರೀ ನಷ್ಟ ಎದುರಿಸುತ್ತಿರುವಾಗ, ಈ ಖಾಸಗಿ ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸುವ ಮತ್ತು ಗರಿಷ್ಠ ಲಾಭವನ್ನು ಪಡೆಯಲು ಎಲ್ಲ ಅವಕಾಶಗಳನ್ನು ಹುಡುಕುತ್ತಿವೆ. ಇಂತಹ ಸಂದರ್ಭದಲ್ಲಿ ಮೊಬೈಲ್ ಗ್ರಾಹಕರ ಹಿತದೃಷ್ಟಿಯಿಂದ ನ್ಯಾಯಯುತ ಮತ್ತು ಪಾರದರ್ಶಕ ನೀತಿ ಜಾರಿಗೊಳಿಸಬೇಕಾದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಖಾಸಗಿ ಕಂಪನಿಗಳನ್ನು ನಿಯಂತ್ರಿಸುವ ಬದಲು, ಮೂಕ ಪ್ರೇಕ್ಷಕನಾಗಿ ಉಳಿದಿರುವುದು ಖಂಡನೀಯ ಸಂಗತಿಯಾಗಿದೆ.

ಈ ಕೂಡಲೇ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಟ್ರಾಯ್ ತಕ್ಷಣವೇ ಮಧ್ಯಪ್ರವೇಶಿಸಿ, ರೀಚಾರ್ಜ್‌ಗಳ ಮತ್ತು ಡೇಟಾ ಶುಲ್ಕಗಳಲ್ಲಿನ ಅನ್ಯಾಯಯುತವಾದ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂಪಡೆಯಲು ಖಾಸಗಿ ಟೆಲಿಕಾಂ ಕಂಪನಿಗಳ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ.ಎಸ್.ಎನ್.ಎಲ್ ಅನ್ನು ಪುನರುಜ್ಜೀವನಗೊಳಿಸಲು ಮತ್ತು ಸಂವಹನ ಸೇವೆಗಳು ಕೈಗೆಟುಕುವ ದರದಲ್ಲಿ ದೊರೆಯುವಂತಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.

ಎಐಡಿವೈಓ ರಾಜ್ಯ ನಾಯಕ ಶರಣು ಗಡ್ಡಿ, ಜಿಲ್ಲಾ ಸಂಘಟನಾಕಾರ ಮೌನೇಶ್ ಹಲಗೇರಿ, ಸದಸ್ಯರಾದ ನಾಗರಾಜ, ಬಾಬಣ್ಣ ನವಲಿ ಇತರರಿದ್ದರು.