ಸಾರಾಂಶ
ಶಿರಸಿ: 7 ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಶಿರಸಿಯ ವತಿಯಿಂದ ನೂರಾರು ಸರ್ಕಾರಿ ನೌಕರರು ಶಾಸಕ ಭೀಮಣ್ಣ ನಾಯ್ಕ ಅವರನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಸರ್ಕಾರ ರಾಜ್ಯ ೭ನೇ ವೇತನ ಆಯೋಗಕ್ಕೆ ನಿಗದಿಪಡಿಸಿದ್ದ 6 ತಿಂಗಳ ಅವಧಿಯೊಳಗೆ ವರದಿಯನ್ನು ಪಡೆಯದೇ 2 ಬಾರಿ ಅವಧಿಯನ್ನು ವಿಸ್ತರಿಸಲಾಗಿದೆ. ನಂತರದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯೂ 7 ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಆ ಕಾರ್ಯ ಆಗಿಲ್ಲ. ಆದ್ದರಿಂದ ಶೀಘ್ರವಾಗಿ ವರದಿ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಾಸಕ ಭೀಮಣ್ಣ ಮನವಿ ಸ್ವೀಕರಿಸಿ, ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಸರ್ಕಾರಿ ನೌಕರರಿಗೆ ಭರವಸೆ ನೀಡಿದರು.
ಮನವಿ ಸಲ್ಲಿಸುವ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಶಿರಸಿಯ ಅಧ್ಯಕ್ಷ ಕಿರಣ ನಾಯ್ಕ, ವೃಂದ ಸಂಘದ ವಿಭಾಗದ ಅಧ್ಯಕ್ಷ ಹಾಗೂ ರಾಜ್ಯ ಪರಿಷತ್ ಸದಸ್ಯ ಅಶೋಕ ಪಡುವಳ್ಳಿ, ಖಜಾಂಚಿ ಜಯದೇವ ಮತ್ತೂರ, ಕಾರ್ಯದರ್ಶಿ ವಸಂತ, ಪ್ರಾಂಶುಪಾಲ ರಮೇಶ ಶೆಟ್ಟಿ, ಉಪಾಧ್ಯಕ್ಷ ಜೂಜೇ, ಕಂದಾಯ ಇಲಾಖೆ ಸಂಘದ ಅಧ್ಯಕ್ಷ ರಮೇಶ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ ಮತ್ತಿತರರು ಇದ್ದರು.