ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಅಗತ್ಯವಿರುವ ಅನುದಾನ, ನೇಮಕಾತಿ, ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ ಏ. 6ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಹಾವೇರಿ ವಿಶ್ವವಿದ್ಯಾಲಯ ಹೋರಾಟ ಸಮಿತಿಯು ಆಗ್ರಹಿಸಿದೆ. ಇಲ್ಲಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ಪ್ರತಿರೋಧ ಸಭೆ ನಡೆಸಿದ ವಿವಿ ಉಳಿಸಿ ಹೋರಾಟ ಸಮಿತಿ ಸದಸ್ಯರು, ವಿವಿ ಪ್ರಥಮ ಘಟಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಸಮಸ್ಯೆಗಳಿವೆ ಎಂಬುದನ್ನು ವಿಶ್ವ ವಿದ್ಯಾಲಯದ ಕುಲಪತಿಗಳು ಹಾಗೂ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಳಿಸಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಹಾಗೂ ಹಾವೇರಿ ಜಿಲ್ಲೆಯ ದಾನಿಗಳು ಮತ್ತು ಸಾರ್ವಜನಿಕರ ಸಹಕಾರವನ್ನು ಪಡೆದುಕೊಂಡಿದ್ದರೆ ಕಂಡಿತವಾಗಿಯೂ ಜರ್ಮನ್ ಟೆಂಟ್ ಹಾಕಲು ಬೇಕಿರುವ ಹಣವನ್ನು ದಾನಿಗಳಿಂದ ಸಂಗ್ರಹಿಸಲು ಸಾಧ್ಯವಾಗುತಿತ್ತು. ಅಲ್ಲದೇ ಕೆಇಬಿ ಅಧಿಕಾರಿಗಳ ಮೂಲಕ ಅಡೆತಡೆಯಾಗಿರುವ ವಿದ್ಯುತ್ ಕಂಬ ಮತ್ತು ಲೈನ್ ಗಳನ್ನು ಬೇರೆ ಕಡೆ ಹಾಕಿಸಲು ಕೂಡ ಸಾಧ್ಯವಾಗುತ್ತಿತ್ತು. ಹಾಗೆ ಮಾಡುವ ಬದಲು ಘಟಿಕೋತ್ಸವದ ದಿನಾಂಕ ತೀರಾ ಹತ್ತಿರ ಬಂದಾಗ ಈ ರೀತಿ ಸಮಸ್ಯೆಗಳಿವೆ ಎಂದು ಬಿಂಬಿಸುತ್ತಿರುವುದು ಮತ್ತು ಏಕಪಕ್ಷೀಯವಾಗಿ ಘಟಿಕೋತ್ಸವವನ್ನು ಕ್ಯಾಂಪಸ್‌ನಿಂದ ಹೊರಗಡೆ ಮಾಡುತ್ತಿರುವುದು ಸರಿಯಲ್ಲ ಎಂದರು.

ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸದಿದ್ದರೆ ಏ.6ರಂದು ಘಟಿಕೋತ್ಸವ ಕಾರ್ಯಕ್ರಮ ವೇಳೆ ವಿವಿ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದು. ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವುದು ಖಂಡನೀಯಾವುದು, ವಿಶ್ವವಿದ್ಯಾಲಯದ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲೇಬೇಕು ಎಂದು ವಿವಿ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ ಪೂಜಾರ, ಪರಿಮಳ ಜೈನ್, ಎಂ ಆಂಜನೇಯ, ಬಸವರಾಜ್ ಎಸ್, ಶಿವಬಸಪ್ಪ ಗೋವಿ, ಉಡಚಪ್ಪ ಮಾಳಗಿ, ಮಂಜುಳಾ ಎಕ್ಕಿ, ಡಾ. ತಿಪ್ಪೇಸ್ವಾಮಿ ಹೊಸಮನಿ, ಮಕಬುಲ್ ಎಂ.ಕೆ, ಅರುಣ ನಾಗಾವತ್, ಖಲಂದರ್ ಅಲ್ಲಿಗೌಡ್ರ, ಚೈತ್ರಾ ಕೊರವರ, ಎಸ್.ಎ.ಪಾಣಿಗಟ್ಟಿ, ಶಶಿಕಲಾ ಅಕ್ಕಿ, ಪುಟ್ಟಪ್ಪ ಹರವಿ, ಎಸ್.ಎಸ್.ಹಿರೇಮಠ, ರಾಜು ಉಪ್ಪಾರ, ಸುಮಾ ಪುರದ, ಶಾರದಾ ಹಿರೇಮಠ, ಗೌರಮ್ಮ ಕುಲಕರ್ಣಿ ಒತ್ತಾಯಿಸಿದ್ದಾರೆ.