ಕನ್ನಡಪ್ರಭ ವಾರ್ತೆ ಭದ್ರಾವತಿ

ಕ್ಷೇತ್ರದಲ್ಲಿ ೪ ಬಾರಿ ಗೆಲುವು ಸಾಧಿಸಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಹೆಚ್ಚಾಗುತ್ತಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ನಡುವೆ ಕೆಲವು ಸಂಘ-ಸಂಸ್ಥೆಗಳು, ಮುಖಂಡರು ನೇರವಾಗಿ ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳ ಮೂಲಕ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

ಸಂಗಮೇಶ್ವರ್ ಜಿಲ್ಲೆಯಲ್ಲಿ ೪ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪಕ್ಷದ ಹಿರಿಯ ಶಾಸಕರಾಗಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ. ವಿಶೇಷವಾಗಿ ಕ್ಷೇತ್ರದಲ್ಲಿ ಸರ್ವ ಜನಾಂಗದ ನಾಯಕರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಹೊಂದುವ ಹಕ್ಕಿದೆ. ಈ ಬಾರಿ ಸಚಿವ ಸ್ಥಾನಬೇಕೆಂದು ಪೋಸ್ಟ್‌ಗಳಲ್ಲಿ ಆಗ್ರಹಿಸಲಾಗಿದೆ.

ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷ: ಕಳೆದ ಎರಡು ಅವಧಿಯಿಂದ ಮಂತ್ರಿ ಸ್ಥಾನ ನೀಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ಮಂತ್ರಿ ಸ್ಥಾನ ನೀಡುವ ಬದಲು ಎರಡು ಬಾರಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. ಈ ಬಾರಿ ಮಂತ್ರಿಯಾಗುತ್ತಾರೆಂಬ ನಿರೀಕ್ಷೆ ಕ್ಷೇತ್ರದ ಜನರು ಹೊಂದಿದ್ದಾರೆ. ಅಲ್ಲದೆ ಸಂಗಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ರ ಬಿ.ಎಸ್ ಗಣೇಶ್ ಅವರಿಗೆ ಅನುವು ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂತ್ರಿ ಸ್ಥಾನ ಲಭಿಸಲೇಬೇಕೆಂಬುದು ಅಭಿಮಾನಿಗಳು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರ ಆಗ್ರಹವಾಗಿದೆ.

ರಾಜ್ಯ ಬಂಜಾರ ರೈತ ಸಂಘದಿಂದ ಮಂತ್ರಿ ಸ್ಥಾನಕ್ಕೆ ಆಗ್ರಹ: ಕ್ಷೇತ್ರ ಸರ್ವತೋಮುಖ ಬೆಳವಣಿಗೆ ಹಿನ್ನೆಲೆಯಲ್ಲಿ ಹಾಗೂ ೪ ಬಾರಿ ಶಾಸಕರಾಗಿ ಹೆಚ್ಚಿನ ಅನುಭವ ಹೊಂದಿರುವ ಬಿ.ಕೆ ಸಂಗಮೇಶ್ವರ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯ ಬಂಜಾರ ರೈತ ಸಂಘ ಆಗ್ರಹಿಸಿದೆ. ಮಂತ್ರಿ ಸ್ಥಾನ ನೀಡುವುದರಿಂದ ಜಿಲ್ಲೆಯ ಸರ್ವತೋರ್ಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಅದರಲ್ಲೂ ವಿಶೇಷವಾಗಿ ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಆ ಮೂಲಕ ಕ್ಷೇತ್ರದಲ್ಲಿ ಪುನಃ ಇತಿಹಾಸದ ವೈಭವ ಮರಳಲಿದೆ. ಸಂಗಮೇಶ್ವರ್ ಅವರು ಸರ್ವ ಧರ್ಮ, ಸಮುದಾಯ, ಜಾತಿ-ಜನಾಂಗಗಳನ್ನು ಪ್ರೀತಿಸುವ ಜಿಲ್ಲೆಯಲ್ಲಿರುವ ಏಕೈಕ ನಾಯಕರಾಗಿದ್ದಾರೆ. ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕೆಂದು ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಆಗ್ರಹಿಸಿದ್ದಾರೆ.