ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗ್ರಾಮಠಾಣಾ ಜಾಗದಲ್ಲಿ ಹಲವು ವರ್ಷದಿಂದ ವಾಸ ಇರುವ ಮನೆಗಳಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮಂಗಳವಾರ ರಾಮೇನಕೊಪ್ಪದ ಗ್ರಾಮದ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಧರಣಿ ನಡೆಸಿದರು. ಈ ವೇಳೆ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.ರಾಮೇನಕೊಪ್ಪ ಗ್ರಾಮಠಾಣಾ ಜಾಗದಲ್ಲಿ ಹಲವು ವರ್ಷಗಳಿಂದ ಪುಟ್ಟ ಮನೆ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ನಮಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡಿಲ್ಲ. ಕೂಡಲೇ ನಮಗೆ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಳೆದ 30 ವರ್ಷಗಳಿಂದ ನಾವು ಇಲ್ಲಿ ವಾಸ ಮಾಡುತ್ತಿದ್ದೇವೆ. ಹರಿಜನ ಜನಾಂಗಕ್ಕೆ ಸೇರಿದವರಾಗಿದ್ದೇವೆ. ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹಲವು ಬಾರಿ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು ಸರ್ವೆ ಮಾಡುವವರು ಬರ್ತಾರೆ, ಸರ್ವೆ ಮಾಡ್ತಾರೆ, ಹಕ್ಕು ಪತ್ತ ಕೊಡ್ತೀವಿ ಅಂತ ವಾಪಾಸ್ ಹೋಗ್ತಾರೆ, ಇಷ್ಟು ವರ್ಷ ಪರದಾಡಿದ್ದರೂ ಕೂಡಾ ನಮಗೆ ಯಾವುದೇ ಹಕ್ಕುಪತ್ರ ನೀಡಿಲ್ಲ. ತಾತ್ಕಾಲಿಕ ಹಕ್ಕುಪತ್ರ ನೀಡಿದ್ದರೂ ಇದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.2006ರಲ್ಲಿಯೇ ನಾವು ಪುಟ್ಟ ಗುಡಿಸಲು ಹಾಕಿಕೊಂಡಿದ್ದೇವೆ. ಕೆಲವರು ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ. ಗ್ರಾಮ ಠಾಣಾ ಜಾಗ ಇದು, ವಯಸ್ಸಾದವರು, ವೃದ್ಧರು, ಬಡ ಕಾರ್ಮಿಕರು, ಪರಿಶಿಷ್ಟ ವರ್ಗಕ್ಕೆ ಸೇರಿದವರು ಇಲ್ಲಿದ್ದಾರೆ. ಈ ಹಿಂದೆ ಸರ್ವೆ ಮಾಡಲೆಂದೇ 750 ರು.ಗಳನ್ನು ಪಡೆದಿದ್ದರು. ಅದೇನು ಸರ್ವೆ ಮಾಡಿದರೋ ನಮಗೆ ಗೊತ್ತಿಲ್ಲ. ಈಗಲಾದರೂ ನಮಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ ವಾಟಾಳ್ ಮಂಜುನಾಥ್, ಈ ಬಡ ಕಾರ್ಮಿಕರಿಗೆ, ಪರಿಶಿಷ್ಟರಿಗೆ ಮನೆ ಹಕ್ಕುಪತ್ರ ನೀಡಲು ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಸಚಿವ ಮಧು ಬಂಗಾರಪ್ಪರವರಿಗೆ ಮನವಿ ಕೊಟ್ಟಿದ್ದೇವೆ. ಅವರೇನೋ ಅಧಿಕಾರಿಗಳಿಗೆ ಹೇಳುತ್ತಾರೆ, ಆದರೆ ತಹಸೀಲ್ದಾರ್ ಆಗಲೀ ಸಂಬಂಧಪಟ್ಟ ಅಧಿಕಾರಿಗಳು ಈ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬದಲಾಗಿ ಅಸಡ್ಡೆ ದರ್ಪ ತೋರುತ್ತಾರೆ ಎಂದು ದೂರಿದರು.
ಅಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಹಕ್ಕುಪತ್ರ ಇಲ್ಲದೆ ಸಂಕಟ ಪಡುತ್ತಿದ್ದಾರೆ. ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಮೇನಕೊಪ್ಪ ಗ್ರಾಮದ ನಿವಾಸಿಗಳಾದ ಕಾಂತಮ್ಮ, ಮಂಜುಳಮ್ಮ, ಜೋಗಮ್ಮ, ಮಂಜಮ್ಮ, ಚಿಕ್ಕಮ್ಮ, ನಾಗರಾಜ್, ಶಮಾನಬಾನು, ಪರ್ವಿನ್ ಬೇಗಂ, ಬಾಷಾ ಸಾಬ್, ರವಿಕುಮಾರ್, ಶಿವಕುಮಾರ್ ಹಾಗೂ ವೇದಿಕೆಯ ಪದಾಧಿಕಾರಿಗಳಾದ ಲೋಕೇಶ್, ಅಕ್ಬರ್ ಬಾಷಾ, ಸಂಜು, ರಾಘವೇಂದ್ರ, ಮಾರುತಿ, ಸತೀಶ್ ಗೌಡ ಸೇರಿದಂತೆ ಹಲವರಿದ್ದರು.