ಸಾರಾಂಶ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಮತ್ತು ಪೆನ್ಡ್ರೈವ್ ಹಂಚಿಕೆಗೆ ಕಾರಣವಾದವರನ್ನು ಶೀಘ್ರ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು. ಜೊತೆಗೆ ಮಹಿಳೆಯರ ಬದುಕಿನ ಹಕ್ಕಿನ ರಕ್ಷಣೆಗಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ರೈತ ಸಂಘ ಹಾಗೂ ದಲಿತ ಸಂಘಟನೆಯೊಂದಿಗೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಜಮಾವಣೆಗೊಂಡು, ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ವಿರುದ್ಧ ಘೋಷಣೆ ಕೂಗಿ ಸಂತ್ರಸ್ತ ಮಹಿಳೆಯರು ಮತ್ತು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕೆಲವು ದಿನಗಳ ಹಿಂದೆ ಹಾಸನದಲ್ಲಿ ಪೆನ್ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹರಿ ಬಿಡಲಾಗಿದ್ದು, ಆ ಲೈಂಗಿಕ ಚಿತ್ರಗಳು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವುದು ಬೇಸರ ತರಿಸಿದೆ.ಈ ಚಿತ್ರಗಳು ಮತ್ತು ದೃಶ್ಯಗಳಿಂದ ಮಹಿಳೆಯರ ಘನತೆ ಮತ್ತು ಖಾಸಗಿ ಬದುಕಿನ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಹಾಸನದ ಸಂಸದರು ಪ್ರಜ್ವಲ್ ರೇವಣ್ಣ ಇದರ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಲೈಂಗಿಕ ಕಿರುಕುಳದ ದೂರಿನ ಪ್ರಕಾರ ಹೊಳೆನರಸೀಪುರದ ಶಾಸಕ ಎಚ್.ಡಿ ರೇವಣ್ಣ ಸಹ ಆರೋಪಿಯಾಗಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದ್ದು, ಜನಪ್ರತಿನಿಧಿಗಳಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತದೆ. ಸಾರ್ವಜನಿಕವಾಗಿ ಇಷ್ಟೆಲ್ಲಾ ಅನಾಹುತ ನಡೆದು ಆತಂಕ ಸೃಷ್ಟಿಸುತ್ತಿದ್ದಂತೆ ತಡವಾಗಿಯಾದರೂ ಇಡೀ ಪ್ರಕರಣವನ್ನು ವಿಶೇಷ ತನಿಖಾ ತಂಡ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಶ್ರೀರಂಗಪಟ್ಟಣ ತಾಲೂಕು ಪ್ರಗತಿ ಪರ ಚಳವಳಿಗಳ ಪರವಾಗಿ ನಾವು ಸ್ವಾಗತಿಸುತ್ತೇವೆ ಎಂದರು.
ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬೆತ್ತರಿಸುವುದು ಅತ್ಯಂತ ಹೀನ ಕೃತ್ಯ. ಹಾಗಾಗಿ ಇದನ್ನು ಬಹಿರಂಗಪಡಿದವರನ್ನು ಪತ್ತೆ ಹಚ್ಚಿ, ಸತ್ಯವನ್ನು ಬಹಿರಂಗಪಡಿಸಬೇಕು. ಜೊತೆಗೆ ಇಂತಹ ಕೃತ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದವರನ್ನೂ ಸಹ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅಧಿಕಾರ ಮತ್ತು ಪ್ರಭಾವ ಬಳಸಿ ದೌರ್ಜನ್ಯ ನಡೆಸಿದವರನ್ನು ಸೂಕ್ತ ಶಿಕ್ಷೆಗೆ ಗುರಿಪಡಿಸುವಂತೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಈ ವೇಳೆ ದಲಿತ ಸಂಘಟನೆ ಮುಖಂಡರಾದ ರವಿಚಂದ್ರ, ಹೊನ್ನಯ್ಯ, ರೈತ ಸಂಘದ ಚಂದ್ರು, ಕೃಷ್ಣಪ್ಪ, ಕರವೇ ಚಂದಗಾಲು ಶಂಕರ್, ಉಗಮ ಟ್ರಸ್ಟ್ನ ಪ್ರಿಯಾ ರಮೇಶ್, ಬಾಬುರಾಯನಕೊಪ್ಪಲು ರಮೇಶ್, ರೈತ ಮುಖಂಡ ಬಾಲ ಕೃಷ್ಣ, ಪುರುಷೋತ್ತಮ್. ದಲಿತ ಸಂಘಟನೆಯ ಕುಮಾರ್, ಅಪ್ಪಾಜಿ, ಮುಂಡುಗದೊರೆ ಮೋಹನ್, ರೈತ ಸಂಘ ಕೃಷ್ಣಪ್ಪ ಸೇರಿದಂತೆ ಇತತೆ ಸಂಘಟನೆಗಳ ಮುಖಂಡರು ಇದ್ದರು.