ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅಗತ್ಯ ಮಾಹಿತಿ ನೀಡುವ ಮೂಲಕ ರೈತರ ಸಮಗ್ರ ಅಭಿವೃದ್ಧಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳು ಕೆಲಸ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ರೈತರಿಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನೂತನವಾಗಿ ಸಂಶೋಧಿಸಲಾದ ಕೆ.ಎಂ.ಆರ್-316 ರಾಗಿ ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ವಿತರಿಸಿ, ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಿ ಮಾತನಾಡಿದರು.ಇಲಾಖೆಗಳ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಿದರೆ ರೈತರು ಅಭಿವೃದ್ದಿಯತ್ತ ಸಾಗುವುದು ಸುಲಭವಾಗುತ್ತದೆ. ಕೋಲಾರ ಭಾಗದ ರೈತರು ಕಡಿಮೆ ನೀರು, ಕಡಿಮೆ ಭೂಮಿಯಲ್ಲಿ ಗ್ರಾಪಂ ಮೂಲಕ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅತ್ಯುತ್ತಮ ಬೇಸಾಯ ಮಾಡಿ ತರಕಾರಿ, ಸೊಪ್ಪು, ಹೂವುಗಳನ್ನು ಬೆಳೆದು ಕಡಿಮೆ ವೆಚ್ಚದಲ್ಲಿ ವಾರ್ಷಿಕ ಲಕ್ಷಾಂತರ ರು. ಲಾಭ ಗಳಿಸುತ್ತಿದ್ದಾರೆ ಎಂದರು.
ಜಿಲ್ಲೆಯ ರೈತರು ಹೆಚ್ಚು ನೀರು ಬಳಕೆ ಮಾಡುವ ಭತ್ತ, ಕಬ್ಬು ಬೇಸಾಯ ಮಾಡುವ ಜೊತೆ ಜೊತೆಗೆ ಕುರಿ, ಮೇಕೆ ಸಾಕಾಣಿಕೆ, ಹೈನುಗಾರಿಕೆ, ಬಾಳೆ, ರೇಷ್ಮೆ, ಮೀನು ಸಾಕಾಣಿಕೆ ಸೇರಿದಂತೆ ಸಮಗ್ರ ಕೃಷಿಯನ್ನು ಕೈಗೊಳ್ಳಬೇಕು ಎಂದರು.ರಾಸಾಯನಿಕ ಗೊಬ್ಬರ ಪದ್ದತಿಯಿಂದ ಭೂಮಿಯು ಬಂಜರಾಗುತ್ತಿದೆ. ಭೂಮಿ ತಾಯಿಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ರಾಸಾಯನಿಕ ಗೊಬ್ಬರ ಮುಕ್ತ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಎನ್.ಎಸ್.ಗಂಗಾಧರ್, ಕೃಷಿ ವಿಜ್ಞಾನಿಗಳಾದ ಕೇಶವಯ್ಯ, ವೆಂಕಟೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ತಾಂತ್ರಿಕ ಕೃಷಿ ಅಧಿಕಾರಿ ಶ್ರೀಧರ್, ಕೃಷಿಕ ಸಮಾಜದ ನಿರ್ದೇಶಕರಾದ ಅಕ್ಕಿಹೆಬ್ಬಾಳು ಎ.ಆರ್.ರಘು, ಮರಿಸ್ವಾಮೀಗೌಡ, ಎಸ್.ಆರ್.ನವೀನ್ ಕುಮಾರ್, ನಾರಾಯಣಗೌಡ, ಆರ್.ಕೆ.ಜಗದೀಶ್, ಭೈರಾಪುರ ಹರೀಶ್, ನೀತಿಮಂಗಲ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಹರೀಶ್, ದಕ್ಷ ಸಂಸ್ಥೆ ಮನೋಜ್, ಪ್ರಗತಿಪರ ರೈತರಾದ ಅಗ್ರಹಾರಬಾಚಹಳ್ಳಿ ಜಬೀಉಲ್ಲಾ, ಹೆಚ್.ಎನ್.ಸತ್ಯನಾರಾಯಣ್, ರಂಗನಾಥ್, ಬಿ.ರಾಮಲಿಂಗಯ್ಯ, ಹರಿರಾಯನಹಳ್ಳಿ ಎಸ್.ಧರ್ಮೇಗೌಡ, ಗಣೇಶ್, ನವೀನ್, ರವಿ, ಚಂದ್ರೇಗೌಡ, ರಂಗಸ್ವಾಮಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.