ಮಕ್ಕಳಿಗೆ ಪೌಷ್ಟಿಕಾಂಶ ನೀಡಿ ವಿಕಲಚೇತನ ಆಗದಂತೆ ತಡೆಯುವುದು, ಅವರಿಗೆ ಪಿಜಿಯೋಥೇರೆಪಿ ಮೂಲಕ ಮತ್ತು ಸಾಧನ ಸಲಕರಣೆ ಕೊಡಿಸಿ ಮುಖ್ಯವಾಹಿನಿಯ ಒಂದು ಭಾಗವಾಗಲು ಪ್ರಯತ್ನಿಸಬೇಕು.

ಧಾರವಾಡ:

ಮಕ್ಕಳ ಅಪೌಷ್ಟಿಕತೆ ಹಾಗೂ ನೂನ್ಯತೆ ಆರಂಭದಲ್ಲಿಯೇ ಪತ್ತೆ ಹಚ್ಚಿ ಉಪಯುಕ್ತ ಸಾಧನ ಸಲಕರಣೆ ಕೊಡಿಸುವುದು ಮತ್ತು ಮುಖ್ಯವಾಹಿನಿಗೆ ತರುವುದೇ ನಮ್ಮ ಕರ್ತವ್ಯ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಬಸವರಾಜ ಮ್ಯಾಗೇರಿ ಹೇಳಿದರು.

ಇಲ್ಲಿಯ ಟಿಸಿಡಬ್ಲ್ಯೂದಲ್ಲಿ ಬೆಂಗಳೂರಿನ ಎಪಿಡಿ ಸಂಸ್ಥೆ ಮತ್ತು ಜನಮುಖಿ ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ 0-8 ವರ್ಷದ ಒಳಗಿನ ನೂನ್ಯತೆ ಇರುವ ಮಕ್ಕಳಿಗೆ ಉಚಿತ ಸಾಧನ ಸಲಕರಣೆಗಳ ಮಾಪನದ ಶಿಬಿರದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಪೌಷ್ಟಿಕಾಂಶ ನೀಡಿ ವಿಕಲಚೇತನ ಆಗದಂತೆ ತಡೆಯುವುದು, ಅವರಿಗೆ ಪಿಜಿಯೋಥೇರೆಪಿ ಮೂಲಕ ಮತ್ತು ಸಾಧನ ಸಲಕರಣೆ ಕೊಡಿಸಿ ಮುಖ್ಯವಾಹಿನಿಯ ಒಂದು ಭಾಗವಾಗಲು ಪ್ರಯತ್ನಿಸಬೇಕು ಎಂದರು.

ಟಿಸಿಡಬ್ಲ್ಯೂ ಮತ್ತು ಕಲಘಟಗಿಯಲ್ಲಿ ಫೀಜಿಯೋಥೇರಪಿ ಕೇಂದ್ರ ಸ್ಥಾಪಿಸಿ 100 ಮಕ್ಕಳಿಗೆ ಮಾಪನ ಶಿಬಿರ ನಡೆಸಲಾಗಿದೆ, ಈ ಮಕ್ಕಳಿಗೆ ಉಪಯುಕ್ತ ಸಾಧನ ಸಲಕರಣೆ ಉಚಿತವಾಗಿ ಕೊಡಲು ಎಪಿಡಿ ಸಂಸ್ಥೆ ಮುಂದೆ ಬಂದಿದೆ. ಮಕ್ಕಳಿಗೆ ಫೆ. 20ರೊಳಗೆ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದೆಂದು ತಿಳಿಸಿದರು. ಎಪಿಡಿ ಸಂಸ್ಥೆಯ ಚೇತನ್‌ ಎಸ್‌.ಟಿ. ಮಾತನಾಡಿ, ಸಂಸ್ಥೆಯು ಹಲವಾರು ದಶಕಗಳಿಂದ ವಿಕಲಚೇತನರಿಗೆ ಉಪಯುಕ್ತ ಕಾರ್ಯ ಮಾಡುತ್ತಿದೆ. ಶಿಬಿರ ಹೊರತುಪಡಿಸಿ ವಿಕಲಚೇತನರಿಗೆ ಅಗತ್ಯ ಸಹಾಯ ಬೇಕಿದ್ದರೆ, ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ (9972977789) ಸಂಪರ್ಕಿಸಲು ತಿಳಿಸಿದರು.

ಈ ವೇಳೆ ವಿದ್ಯಾ ಮ್ಯಾಗೇರಿ, ಡಾ. ಸುಜಾತಾ ನಾಯಕ, ಪುಷ್ಪಾ ಮಾನೆ ಹಾಗೂ ಅಕ್ಷತಾ ಪೂಜಾರಿ ಇದ್ದರು.