ಧನಲಕ್ಷ್ಮೀ ಶುಗರ್‌ ಸಾಲಮುಕ್ತ ಸಕ್ಕರೆ ಕಾರ್ಖಾನೆ: ಮಹಾದೇವಪ್ಪ ಯಾದವಾಡ

| Published : Nov 14 2024, 12:54 AM IST

ಧನಲಕ್ಷ್ಮೀ ಶುಗರ್‌ ಸಾಲಮುಕ್ತ ಸಕ್ಕರೆ ಕಾರ್ಖಾನೆ: ಮಹಾದೇವಪ್ಪ ಯಾದವಾಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಹಕಾರಿ ರಂಗದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವಾಗ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲಮುಕ್ತ ಸಕ್ಕರೆ ಕಾರ್ಖಾನೆಯಾಗಿದ್ದು, ಈಗ ಸ್ವಂತ ಆಡಳಿತ ಭವನ ಹೊಂದಿದೆ ಎಂದು ಮಾಜಿ ಶಾಸಕ, ನಿರ್ದೇಶಕ ಮಹಾದೇವಪ್ಪ ಯಾದವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯದಲ್ಲಿ ಸಹಕಾರಿ ರಂಗದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವಾಗ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲಮುಕ್ತ ಸಕ್ಕರೆ ಕಾರ್ಖಾನೆಯಾಗಿದ್ದು, ಈಗ ಸ್ವಂತ ಆಡಳಿತ ಭವನ ಹೊಂದಿದೆ ಎಂದು ಮಾಜಿ ಶಾಸಕ, ನಿರ್ದೇಶಕ ಮಹಾದೇವಪ್ಪ ಯಾದವಾಡ ಹೇಳಿದರು.

ಬುಧವಾರ ಖಾನಪೇಠದಲ್ಲಿರುವ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಮಾರು ₹1 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯನ್ನು ಲೀಜ್ ಗೆ ನೀಡದ ನಂತರ ಆಡಳಿತ ಮಂಡಳಿ ಕಾರ್ಯನಿರ್ವಹಿಸಲು ಸೂಕ್ತ ಕಟ್ಟಡವಿಲ್ಲದೆ ನಿತ್ಯದ ಕೆಲಸಗಳ ನಿರ್ವಹಣೆಗೆ ತೊಂದರೆಯಾಗಿತ್ತು. ಸಾಲಮುಕ್ತವಾದ ಮೇಲೆ ಸರ್ಕಾರದ ಅನುಮತಿ ಪಡೆದು ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ದಿ.ಬಿ.ಬಿ. ಹಿರೇರಡ್ಡಿ ಮತ್ತು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಆಡಳಿತ ಮಂಡಳಿಯ ವಿಶ್ವಾಸದಿಂದ ಮಾಡಿರುವ ಕಾರ್ಯಗಳ ಫಲದಿಂದ ಇಂದು ಸಾಲಮುಕ್ತ ಕಾರ್ಖಾನೆಯಾಗಿದೆ. ಈಗಿನ ಆಡಳಿತ ಮಂಡಳಿಯ ಸದಸ್ಯರು ಸಹಕಾರದಿಂದ ರಾಜ್ಯದಲ್ಲಿ ಉತ್ತಮ ಸಕ್ಕರೆ ಕಾರ್ಖಾನೆಯಾಗಿದೆ ಎಂದು ಹೇಳಿದರು.

ಆಡಳಿತ ಮಂಡಳಿ ಸದಸ್ಯರು ಹಾಗೂ ರೈತರು ಕಾರ್ಖಾನೆಗೆ ಕೆಲಸದ ನಿಮಿತ್ತ ಬಂದರೆ ಅವರಿಗೆ ಸೂಕ್ತವಾದ ಸ್ಥಳ ಇರಲಿಲ್ಲ. ಈ ಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ರೈತರು ತಮ್ಮ ಯಾವುದೇ ಕಾರ್ಯವಿದ್ದರೂ ಬಂದು ಸಲಹೆ ಸೂಚನೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಿಲ್ಲಾತೊರಗಲ್‌ದ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಮಾದರಿ ಸಕ್ಕರೆ ಕಾರ್ಖಾನೆಯಾಗಲು ಹಿಂದಿನ ಮತ್ತು ಇಂದಿನ ಆಡಳತ ಮಂಡಳಿಯವರ ಶ್ರಮ ಇದ್ದು, ಮುಂದೆಯೂ ಸಹ ಇದೇ ರೀತಿ ಎಲ್ಲರೂ ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಬಸನಗೌಡ ಪಾಟೀಲ, ನಿರ್ದೇಶಕರಾದ ಬಿ.ಎಂ. ತುಪ್ಪದ, ಎಂ.ಎಂ. ಆತಾರ, ಅಡಿವೆಪ್ಪ ಸುರಗ, ದುಂಡಪ್ಪ ದೇವರಡ್ಡಿ, ನೀಲಪ್ಪ ಚಾಕಲಬ್ಬಿ, ಐ.ಎಸ್. ಹರನಟ್ಟಿ, ಚಂದು ಲಮಾಣಿ, ಶಶಿಕಲಾ ಸೋಮಗೊಂಡ, ಶಂಕರಗೌಡ ಪಾಟೀಲ ಸೇರಿದಂತೆ ಹಲವರಿದ್ದರು.