ಸಾರಾಂಶ
ಶಿಡ್ಲಘಟ್ಟ : ಈ ವರ್ಷದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ 1000 ಕೆರೆ ಪುನಶ್ಚೇತನ ಮಾಡುವ ಗುರಿ ಹೊಂದಿರುವುದಾಗಿ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ ಹೇಳಿದರು.
ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗಂಜಿಗುಂಟೆ ವಲಯದ ಜಿ. ಕುರುಬರಹಳ್ಳಿ ಗ್ರಾಮದ ಕದರಿಪತ್ತಿನ ಕೆರೆಯನ್ನು ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆ ಹಸ್ತಾಂತರಿಸಿ ಮಾತನಾಡಿದರು.
ಯೋಜನೆಯು 6 ರಾಷ್ಟ್ರೀಯ ಬ್ಯಾಂಕುಗಳ ಬಿ.ಸಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೇ.14ರಷ್ಟು ಬಡ್ಡಿ ದರದಲ್ಲಿ ಸಂಘಗಳಿಗೆ ಹಣಕಾಸಿನ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು. ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಿರ್ಗತಿಕರಿಗೆ ಮಾಶಾಸನ, ಜನಮಂಗಳ ಕಾರ್ಯಕ್ರಮ, ಹಾಲಿನ ಡೇರಿ ಕಟ್ಟಡ ರಚನೆಗೆ ಸಹಾಯಧನ, ಸ್ವ ಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಸುಜ್ಞಾನನಿಧಿ ಶಿಷ್ಯವೇತನ ಹಾಗೂ ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆಸಿ ನಾರಾಯಣಸ್ವಾಮಿ ಮಾತನಾಡಿ, ಕೆರೆ ಹೂಳೆತ್ತುವುದರಿಂದ ಗ್ರಾಮದ ರೈತರಿಗೆ ಅನುಕೂಲವಾಗಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಜಿಲ್ಲಾ ನಿರ್ದೇಶಕ ಪ್ರಶಾಂತ್.ಸಿ.ಎಸ್, ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ.ಎಸ್, ವಕೀಲ ದ್ಯಾವಪ್ಪ, ಆರ್. ರವೀಂದ್ರ, ಗ್ರಾಪಂ ಸದಸ್ಯರಾದ ಬೈರಾರೆಡ್ಡಿ, ನಾಗರಾಜು, ವೆಂಕಟೇಶ್, ಕೃಷಿ ಮೇಲ್ವಿಚಾರಕ ರಂಗನಾಥ್, ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ್,ಮುಖಂಡರಾದ ಲೋಕೇಶ್, ಮಂಜುನಾಥ್, ಬಚ್ಚರೆಡ್ಡಿ, ಮುನಿಯಪ್ಪ,ಮುನಿರೆಡ್ಡಿ, ಪ್ರವೀಣ್, ದೇವರಾಜು, ವೆಂಕಟರೆಡ್ಡಿ, ಸೇವಾ ಪ್ರತಿನಿಧಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.