ಸಾರಾಂಶ
ಮೈಕ್ರೋ ಫೈನಾನ್ಸ್ ಕಂಪನಿ, ಬಡ್ಡಿ ದಂಧೆಕೋರರ ಹಾವಳಿ ತಡೆಯಬೇಕಾಗಿದ್ದು, ಈಗಾಗಲೇ ಸುಗ್ರೀವಾಜ್ಞೆ ಮಸೂದೆ ಸಿದ್ಧಪಡಿಸಿ ಮುಖ್ಯಮಂತ್ರಿಗೆ ಕಳುಹಿಸಿಕೊಡಲಾಗಿದೆ. ಓಂಬುಡ್ಸ್ಮನ್ ನೇಮಕ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಹುಬ್ಬಳ್ಳಿ : ಮೈಕ್ರೋ ಫೈನಾನ್ಸ್ ಕಂಪನಿ, ಬಡ್ಡಿ ದಂಧೆಕೋರರ ಹಾವಳಿ ತಡೆಯಬೇಕಾಗಿದ್ದು, ಈಗಾಗಲೇ ಸುಗ್ರೀವಾಜ್ಞೆ ಮಸೂದೆ ಸಿದ್ಧಪಡಿಸಿ ಮುಖ್ಯಮಂತ್ರಿಗೆ ಕಳುಹಿಸಿಕೊಡಲಾಗಿದೆ. ಓಂಬುಡ್ಸ್ಮನ್ ನೇಮಕ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಈ ಸಂಬಂಧ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲದ ಹೆಸರಿನಲ್ಲಿ ಬಡವರು, ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿ, ಬಡ್ಡಿ ದಂಧೆಕೋರರಿಂದ ರಕ್ಷಣೆ ಮಾಡಬೇಕಾಗಿದೆ. ಬಡವರನ್ನು ಮನಬಂದಂತೆ ಥಳಿಸಿ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ ಇವರಿಗೆ ಲಗಾಮು ಹಾಕಬೇಕಾಗಿರುವುದರಿಂದ ಸುಗ್ರಿವಾಜ್ಞೆ ಸಿದ್ಧಪಡಿಸಿದ್ದು, ಒಂಬುಡ್ಸ್ಮನ್ ನೇಮಕ ಮಾಡಲಾಗುತ್ತಿದೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಜನರ ಭಾವನೆ ಹಾಗೂ ಬದುಕಿನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆಗೆ ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದರು.
ಈ ಮಸೂದೆ ಜಾರಿಗೆ ಎಲ್ಲ ಬಗೆಯ ಸಿದ್ಧತೆ ಆಗಿದ್ದು, ಮುಖ್ಯಮಂತ್ರಿಗಳಿಗೂ ಕಳುಹಿಸಿ ಕೊಡಲಾಗಿದೆ. ಮುಖ್ಯಮಂತ್ರಿ ಸುಗ್ರೀವಾಜ್ಞೆಯ ಪರಿಶೀಲನೆ ಮಾಡಬೇಕಾಗುತ್ತದೆ. ಇದರ ಪರಮಾಧಿಕಾರವನ್ನು ನಾವು ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದೇವೆ. ಇನ್ನು ರಾಜ್ಯಪಾಲರಿಗೆ ಕಳುಹಿಸುವ ಮುನ್ನ ಮುಖ್ಯಮಂತ್ರಿ ಪರಿಶೀಲನೆ ಮಾಡಬೇಕಾಗುತ್ತದೆ. ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿ ಮಾಡಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾಗುವವರಿಗೆ ರಕ್ಷಣೆ ನೀಡಲಾಗುವುದು ಎಂದರು.