ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಎಲ್ಲ ಚಳವಳಿಗಳು ಅಂಕುರಗೊಂಡು, ಮೊಳಕೆಯೊಡೆದು ಹೆಮ್ಮರವಾಗಲು ಧಾರವಾಡದ ಪರಿಸರ ಪ್ರಮುಖ ಕಾರಣ. ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಕರ್ನಾಟಕ ಏಕೀಕರಣ ಚಳವಳಿ ಆರಂಭವಾಗಿದ್ದು ಇಲ್ಲಿಂದ.
ಧಾರವಾಡ:
ಹೋರಾಟದ ಇತಿಹಾಸ ಕೆದಕಿ ನೋಡಿದಾಗ ಧಾರವಾಡದಿಂದ ಆರಂಭವಾಗುವ ಚಳವಳಿ ಕುರಿತು ಹೆಚ್ಚಿನ ಭರವಸೆ ಇರುತ್ತದೆ ಎಂದು ಸಹ ಪ್ರಾಧ್ಯಾಪಕ ಡಾ. ರಂಗನಾಥ ಕಂಟನಕುಂಟೆ ಹೇಳಿದರು.ಇಲ್ಲಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಮತ್ತು ಗಣಕರಂಗ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಏಕೀಕರಣ ; ಧಾರವಾಡ ಪರಿಸರ ವಿಷಯದ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿ, ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಎಲ್ಲ ಚಳವಳಿಗಳು ಅಂಕುರಗೊಂಡು, ಮೊಳಕೆಯೊಡೆದು ಹೆಮ್ಮರವಾಗಲು ಧಾರವಾಡದ ಪರಿಸರ ಪ್ರಮುಖ ಕಾರಣ. ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಕರ್ನಾಟಕ ಏಕೀಕರಣ ಚಳವಳಿ ಆರಂಭವಾಗಿದ್ದು ಇಲ್ಲಿಂದ. ಇಂದಿಗೂ ನೆಲ-ಜಲದ ವಿಷಯ ಬಂದಾಗ ಧಾರವಾಡ ಪರಿಸರದಿಂದ ಮೊಳಕೆಯೊಡೆಯುವ ಹೋರಾಟಗಳು ಎಲ್ಲವೂ ಯಶಸ್ವಿಯಾಗಿವೆ ಎಂದರು.
ಗಣಕರಂಗದ ಸಂಸ್ಥೆಯ ಮುಖ್ಯಸ್ಥ ಸಿದ್ಧರಾಮ ಹಿಪ್ಪರಗಿ ಮಾತನಾಡಿ, ಕರ್ನಾಟಕ ಎಂದು ನಮ್ಮ ರಾಜ್ಯಕ್ಕೆ ನಾಮಕರಣವಾಗುವುದಕ್ಕಿಂತ ಹಲವಾರು ದಶಕಗಳ ಮೊದಲು ಧಾರವಾಡದ ಪರಿಸರದಲ್ಲಿ ಕರ್ನಾಟಕ ಹೆಸರಿನ ಹಲವಾರು ಸಂಘ-ಸಂಸ್ಥೆ, ಶಾಲೆ-ಕಾಲೇಜು, ವಿಶ್ವವಿದ್ಯಾಲಯ, ವೃತ್ತ, ಹೊಟೇಲು, ಅಂಗಡಿ-ಮುಂಗಟ್ಟುಗಳಿದ್ದವು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ಏಕೀಕರಣಗೊಂಡ ಕರ್ನಾಟಕ, ನಾಮಾಂಕಿತಗೊಂಡ ಕರ್ನಾಟಕ, ಸಮಕಾಲೀನ ಕರ್ನಾಟಕ ಮುಂತಾದ ಸಂಗತಿಗಳನ್ನು ಗಮನಿಸಿದಾಗ 70ರ ಸಂಭ್ರಮದ ರಾಜ್ಯೋತ್ಸವದ ಆಚರಣೆ ಒಂದೆಡೆಯಾದರೆ, ಕನ್ನಡ ಶಾಲೆಗಳನ್ನು ವಿವಿಧ ಕಾರಣ, ಸಬೂಬು ಹೇಳುತ್ತಾ ಮುಚ್ಚುತ್ತಿರುವುದು ಬೇಸರದ ಸಂಗತಿ. ಉರ್ದು, ಮರಾಠಿ, ತೆಲುಗು ಭಾಷೆಯ ಶಾಲೆಗಳು ಕರ್ನಾಟಕದ ಎಲ್ಲ ಭಾಗಗಳಲ್ಲಿ ಆರಂಭಿಸಲಾಗುತ್ತಿದೆ. ಅದರಂತೆ ಕನ್ನಡ ಶಾಲೆಗಳನ್ನು ಪಕ್ಕದ ರಾಜ್ಯದ ಮಧ್ಯಭಾಗ ಬಿಡಿ, ಗಡಿಭಾಗದಲ್ಲಿ ಆರಂಭಿಸಲು ಸಾಧ್ಯವೇ ಇಲ್ಲದಷ್ಟು ಅಲ್ಲಿನ ಮಾತೃಭಾಷಾಭಿಮಾನದ ವಾತಾವರಣ ತೀವ್ರವಾಗಿದೆ. ಆದರೆ, ಮಾತೃಭಾಷಾಭಿಮಾನ ಮಾತ್ರ ಉದಾಸೀನತೆಗೊಳ್ಳುತ್ತಿದೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ 30ಕ್ಕಿಂತ ಹೆಚ್ಚು ಕವಿಗಳು ಕವನ ವಾಚಿಸಿದರು. ಸಂಚಾಲಕ ಎಂ. ಮಂಜುನಾಥ ನಿರೂಪಿಸಿದರು.