ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಬಸವಣ್ಣ ಮಾನವತಾವಾದಿ. ಜಾತಿ, ವರ್ಗ, ಲಿಂಗಬೇಧ ನಿರಾಕರಿಸಿ ಸಮಸಮಾಜ ನೆಲೆಗೊಳಿಸಿದವರು. ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎನ್ನುವುದಕ್ಕೆ ನನ್ನ ವೈಯಕ್ತಿಕ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಗೃಹಕಚೇರಿ ಕೃಷ್ಣಾದಲ್ಲಿ ವಿವಿಧ ಸಮುದಾಯಗಳ ಮಠಾಧೀಶರು ಮತ್ತು ಪ್ರಗತಿಪರ ಚಿಂತಕರ ಅಭಿಪ್ರಾಯವನ್ನು ಆಲಿಸಿ ಪ್ರತಿಕ್ರಿಯಿಸಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಬೇಕೆಂಬ ಮಠಾಧೀಶರ ಹಾಗೂ ವಿವಿಧ ಚಿಂತಕರ ಅಭಿಪ್ರಾಯ ಆಲಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಚರ್ಚಿಸಿ ಸೂಕ್ತ ತೀರ್ಮಾನ ಕೈಕೊಳ್ಳಲಾಗುವುದು ಎಂದರು.
ಬಸವ ಚಳುವಳಿಯ ಆಶಯಗಳೇ ನಮ್ಮ ಸಂವಿಧಾನದ ಧ್ಯೇಯೋದ್ದೇಶಗಳಾಗಿವೆ. ಮಾನವ ಕುಲದ ಸಮಗ್ರ ಏಳಿಗೆಗೆ ಅವರು ನೀಡಿರುವ ತತ್ವಾದರ್ಶಗಳು ಸಾರ್ವಕಾಲಿಕವಾದವುಗಳಾಗಿವೆ. ಮನುಷ್ಯತ್ವ ಪ್ರತಿಪಾದಿಸುವ ಬಸವಣ್ಣನವರು ಸರ್ವ ಜನಾಂಗದ ನಾಯಕ. ಅವರ ಆಶಯಗಳು ಜನಕಲ್ಯಾಣ, ಲೋಕಕಲ್ಯಾಣಕ್ಜೆ ಪುರಕವಾಗಿವೆ ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಭಾಲ್ಕಿ ಬಸವಲಿಂಗ ಪಟ್ಟದದೇವರು, ಬಸವಣ್ಣ ಒಂದೇ ಸಮುದಾಯದ ನಾಯಕರಲ್ಲ. ಎಲ್ಲ ಸಮುದಾಯದವರ ನಾಯಕ. ಬಸವ ಚಳುವಳಿಯ ಆಶಯಗಳನ್ನು ಅನುಸರಿಸುವಲ್ಲಿ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿದ್ದಾರೆ.
ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿರುವ ಸಿದ್ದರಾಮಯ್ಯನವರಿಂದ ಮಾತ್ರ ಬಸವಣ್ಣ ಸಾಂಸ್ಕೃತಿಕ ನಾಯಕನೆಂದು ಘೋಸಿಸಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಆಶಯ ನುಡಿಗಳನ್ನಾಡಿದ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಜಿ, ಬಸವಣ್ಣ ಮನುಕುಲದ ತಂದೆ, ತಾಯಿ, ಬಂಧು, ಬಳಗವಾಗಿದ್ದಾರೆ. ತಳಸಮುದಾಯದವರಲ್ಲಿ ಆತ್ಮವಿಶ್ವಾಸ ಮೂಡಿಸಿ ಲಿಂಗಸಮಾನತೆ ಜಾರಿಯಲ್ಲಿ ತಂದವರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
ಎಲ್ಲ ವರ್ಗದವರಿಗೆ ಪ್ರೀತಿಯ ಬೆಳಕು ಚೆಲ್ಲಿದವರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವ ಅವಕಾಶ ಸಿದ್ದರಾಮಯ್ಯನವರಿಗೆ ದೊರೆತಿದೆ. ಹಾಗೆ ಘೋಷಿಸಿದರೆ ಅದೊಂದು ಐತಿಹಾಸಿಕ ದಾಖಲೆಯಾಗುತ್ತದೆ ಮತ್ತು ಬೇರಿಲ್ಲದೆ ಬೆಳೆಯುತ್ತಿರುವ ಯುವಶಕ್ತಿಗೆ ಚೈತನ್ಯ ತುಂಬುತ್ತದೆ. ಆದ್ದರಿಂದ ಮುಂಬರುವ ಬಸವಜಯಂತಿಯೊಳಗೆ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಒತ್ತಾಯಪಡಿಸಿದರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಿವಮೊಗ್ಗದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಗದುಗಿನ ಸಿದ್ದರಾಮ ಸ್ವಾಮೀಜಿ ಮತ್ತು ರೆವರೆಂಡ್ ಫಾದರ್ ಮಾತನಾಡಿ ಮನವಿಯ ಅನುಷ್ಠಾನಕ್ಕೆ ಒತ್ತಾಯಿಸಿದರು.
ಪ್ರಗತಿಪರ ಚಿಂತಕರಾದ ಎಸ್ ಜಿ ಸಿದ್ಧರಾಮಯ್ಯ, ಅರವಿಂದ ಜತ್ತಿ, ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ್, ಮುಕುಂದರಾಜ್, ಸಿದ್ಧನಗೌಡ ಪಾಟೀಲ, ಎಚ್ ಎಲ್ ಪುಷ್ಪ, ಅಖಿಲಾ, ಶರಿಫಾ ಮತ್ತಿತರರು ಮಾತನಾಡಿ, 12ನೆಯ ಶತಮಾನದ ಸಮಸನಾಜದ ವಚನ ಚಳವಳಿಯ ನಾಯಕ ಬಸವಣ್ಣನವರು ಕೈಗೊಂಡ ಬಹುಮುಖಿ ಕಾರ್ಯಗಳನ್ನು ನೆನಪಿಸಿ ಸ್ವಾಮೀಜಿವರ ಅಭಿಪ್ರಾಯದಂತೆ ಸರ್ಕಾರ ಘೋಷಿಸಬೇಕೆಂದರು.
ಸಚಿವರಾದ ಎಂ ಬಿ ಪಾಟೀಲ ಮತ್ತು ಈಶ್ವರ ಖಂಡ್ರೆ ಉಪಸ್ಥಿತರಿದ್ದು ಮಠಾಧೀಶರು, ಚಿಂತಕರೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.