ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಅನರ್ಹತೆ ಒಂದು ಪಾಠ : ಕೆ.ಎನ್.ಕೇಶವರೆಡ್ಡಿ

| Published : Mar 27 2025, 01:04 AM IST

ಸಾರಾಂಶ

ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಇದೊಂದು ಪಾಠ, ಪಕ್ಷಕ್ಕೆ ಸಂದ ಜಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಎಂಟು ಮಂದಿ ನಗರಸಭಾ ಸದಸ್ಯರಾದ ರತ್ನಮ್ಮ, ಸ್ವಾತಿ, ಸತೀಶ್, ಅಂಬಿಕಾ, ನೇತ್ರಾವತಿ, ನಿರ್ಮಲ ಪ್ರಭು ಮತ್ತು ಗೌರಿಬಿದನೂರು ನಗರಸಭೆಯ ಗಿರೀಶ್, ಮಂಜುಳಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿ ಪಕ್ಷದ ವಿಫ್ ಉಲ್ಲಂಘಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಎಂಟು ಮಂದಿ ನಗರಸಭಾ ಸದಸ್ಯರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಆರು ತಿಂಗಳ ಸುದೀರ್ಘ ವಿಚಾರಣೆ ನಂತರ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ಹೊರ ಬಂದಿದ್ದು, ಅಡ್ಡ ಮತದಾನ ಮಾಡಿದ್ದ ಎಂಟು ನಗರಸಭೆ ಸದಸ್ಯರನ್ನು ಅನರ್ಹಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಇದೊಂದು ಪಾಠ, ಪಕ್ಷಕ್ಕೆ ಸಂದ ಜಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ತಿಳಿಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಂಟು ಸದಸ್ಯರನ್ನು ಜಿಲ್ಲಾಧಿಕಾರಿ ನ್ಯಾಯಾಲಯ ಅನರ್ಹರೆಂದು ಆದೇಶ ಹೊರಡಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಟಿಕೆಟ್ ಪಡೆಯಲು ಅನೇಕರು ಅರ್ಜಿ ಸಲ್ಲಿಸುತ್ತಾರೆ. ಪಕ್ಷ ನಂಬಿಕೆ ಇಟ್ಟು ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತದೆ. ಆದರೆ ಗೆದ್ದ ಮೇಲೆ ಪಕ್ಷವನ್ನು ಬದಿಗಿಟ್ಟು, ವೈಯಕ್ತಿಕ ಲಾಭಕ್ಕೆ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ, ಪಕ್ಷ ಇದನ್ನು ಸಹಿಸುವುದಿಲ್ಲ, ಜಿಲ್ಲಾಧಿಕಾರಿ ನ್ಯಾಯಾಲಯ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಉತ್ತಮವಾದ ತೀರ್ಪು ನೀಡಿದೆ. ಇನ್ನು ಪಕ್ಷಕ್ಕೆ ದ್ರೋಹ ಬಗೆದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕಾನೂನು ತಿರಸ್ಕರಿಸಿದೆ. ಹಾಗೆಯೇ ಚುನಾವಣೆಗಳಲ್ಲಿ ಕೂಡ ಜನರು ತಿರಸ್ಕರಿಸಿ ತಕ್ಕ ಪಾಠ ಕಲಿಸುತ್ತಾರೆ. ನ್ಯಾಯಾಲಯದ ಆದೇಶವು ಪಕ್ಷ ವಿರೋಧಿಗಳಿಗೆ ಇದೊಂದು ಗುಣಪಾಠವಾಗಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಸಂದ ಜಯವಾಗಿದೆ ಎಂದರು.

ಇನ್ನು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲಿಸಿದ್ದ ಮೊಕದ್ದಮೆಯ ಪರ ವಾದ ಮಂಡಿಸಿದ್ದ ವಕೀಲ ಯಾಕುಬ್ ಶರೀಫ್ ಮಾತನಾಡಿ, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಂಬರೀಷ್ ರವರು ಮೊಕದ್ದಮೆ ದಾಖಲು ಮಾಡಿದ್ದು, ಮೊಕದ್ದಮೆಯನ್ನು ಜಿಲ್ಲಾಧಿಕಾರಿ ನ್ಯಾಯಾಲಯ ಕೂಲಂಕುಷವಾಗಿ ಪರಿಶೀಲಿಸಿ ಮಹತ್ತರ ತೀರ್ಪು ನೀಡಿದೆ. ಈ ತೀರ್ಪು ಪಕ್ಷಾಂತರ ಮಾಡುವವರಿಗೆ ಉತ್ತಮವಾದ ಸಂದೇಶ ನೀಡಿದೆ ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಕ್ಷಮೆ ಇಲ್ಲ. ಪಕ್ಷಾಂತರ ಮಾಡುವವರಿಗೆ ಒಂದು ಎಚ್ಚರಿಕೆಯ ಗಂಟೆ ಎಂದು ಸ್ಪಷ್ಟಪಡಿಸಿದೆ ಎಂದರು.

ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಮಾಜಿ ಕೆಪಿಸಿಸಿ ಸದಸ್ಯ ನಂದಿ .ಎಂ. ಆಂಜಿನಪ್ಪ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಸುರೇಶ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ನಗರಸಭೆ ಸದಸ್ಯರಾದ ಎಸ್.ಎಂ.ರಫೀಕ್, ಅಂಬರೀಶ್, ನರಸಿಂಹಮೂರ್ತಿ, ಅಫ್ಜಲ್, ಮುಖಂಡರಾದ ಪಟ್ರೇನಹಳ್ಳಿ ಕೃಷ್ಣ, ಲಕ್ಷ್ಮಣ್, ಸುಧಾ ವೆಂಕಟೇಶ್, ಯಲುವಳ್ಳಿ ಜನಾರ್ದನ್, ಪೆದ್ದನ್ನ, ಮಂಗಳಪ್ರಕಾಶ್, ಅಣ್ಣೆಮ್ಮ, ನಾರಾಯಣಮ್ಮ, ಹಮೀಮ್, ಶಾಹಿದ್ ಅಬ್ಬಾಸ್, ಉಮೇಶ್.ಜಿ, ಡ್ಯಾನ್ಸ್ ಶ್ರೀನಿವಾಸ್, ಹೆಚ್.ಎಂ.ಹರೀಶ್, ಮತ್ತಿತರರು ಇದ್ದರು.