ಪಂಚಾಯಿತಿ ಸದಸ್ಯರ ಕಾರ್ಯವೈಖರಿ ಬಗ್ಗೆ ಅಸಮಾಧಾನ, ಪ್ರತಿಭಟನೆ ಎಚ್ಚರಿಕೆ

| Published : May 05 2024, 02:08 AM IST

ಸಾರಾಂಶ

ಜನಪ್ರತಿನಿಧಿಗಳು ಜನರ ಅಗತ್ಯ ಮೂಲಭೂತ ಅಗತ್ಯಗಳನ್ನು ಕಡೆಗಣಿಸಿದ್ದಾರೆ. ಸಿದ್ದಾಪುರದ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಪ್ರಮುಖ ಅನಿಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಚುನಾಯಿತ ಸದಸ್ಯರ ಬೇಜವಾಬ್ದಾರಿ ವರ್ತನೆಯಿಂದಾಗಿ ಸಿದ್ದಾಪುರದಲ್ಲಿ ಕಸ ವಿಲೇವಾರಿ ಇನ್ನೂ ಸಮಸ್ಯೆಯಾಗಿಯೇ ಉಳಿದಿದ್ದು ಜನಪ್ರತಿನಿಧಿಗಳು ಜನರ ಮೂಲಭೂತ ಅಗತ್ಯಗಳನ್ನು ಕಡೆಗಣಿಸಿದ್ದಾದೆ. ಇವರಿಂದ ಸಿದ್ದಾಪುರದ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಸಿಪಿಐಎಂ ಪಕ್ಷದ ಗ್ರಾಮ ಸಮಿತಿ ಪ್ರಮುಖ ಅನಿಲ್ ಆರೋಪಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದಾಪುರ ಗ್ರಾ.ಪಂ. ಕೊಡಗಿನಲ್ಲಿ ಅತ್ಯಂತ ದೊಡ್ಡ ಪಂಚಾಯಿತಿಯಾಗಿದ್ದು ಅತ್ಯಂತ ಹೆಚ್ಚು ಆದಾಯ ಹೊಂದಿರುವ ಪಂಚಾಯಿತಿ ಕೂಡ ಆಗಿದೆ. ಗ್ರಾಮ ಪಂಚಾಯಿತಿ ಸದಸ್ಯರಾಗಿರುವವರು ಅಧಿಕಾರಕ್ಕೆ ಬರಲು ಜಾತಿ, ಧರ್ಮಗಳ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಅದರಿಂದ ಹೊಮ್ಮುವ ದುರ್ವಾಸನೆಯಿಂದ ಜನರು ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹಲವು ಕಡೆಗಳಲ್ಲಿ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದು ಅದರಿಂದ ಹುಳಗಳು ಹೊರಬರುತ್ತಿರುತ್ತವೆ. ಇದರಿಂದಾಗಿ ಸಿದ್ದಾಪುರದಲ್ಲಿ ಡೆಂಘಿಯಂತಹಾ ಸಾಂಕ್ರಾಮಿಕ ರೋಗಗಳಿಗೆ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಶಾಸಕರ ಜನಸಂಪರ್ಕ ಸಭೆಯಲ್ಲಿ ಸದಸ್ಯರು 9 /11 ನಮೂನೆ ಮಾಡಿ ಕೊಡಲು ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದಾಗ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯಾವುದೇ ಪ್ರಯೋಜನವಾಗಲಿಲ್ಲ. ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ನೀರಿನ ಟ್ಯಾಂಕ್ ಹಳೆಯದಾಗಿದೆ. ವೈಜ್ಞಾನಿಕವಾಗಿ ನೂತನ ನೀರಿನ ಟ್ಯಾಂಕ್ ನಿರ್ಮಿಸಬೇಕು ಎಂದು ಆಗ್ರಹಿಸಿದ ಅವರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಸದ ಸಮಸ್ಯೆಯನ್ನು ಬಗೆಹರಿಸಲು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಇತರೆ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿಯೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಮತ್ತು ಜನರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು

ಈ ಸಂದರ್ಭ ಗ್ರಾಮ ಸಮಿತಿ ಪ್ರಮುಖ ಬೈಜು ಇದ್ದರು.