ಸಮರ್ಪಕ ಬೀಜ, ರಸಗೊಬ್ಬರ ವಿತರಿಸಿ

| Published : Jun 01 2025, 01:31 AM IST

ಸಾರಾಂಶ

ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ಜಲಾಶಯ ಆದಷ್ಟು ಬೇಗ ತುಂಬುವ ಸಾಧ್ಯತೆಯಿದೆ. ಇದು ರೈತರಿಗೆ ವರದಾನವಾಗಲಿದೆ. ರೈತರು ಹೀಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು.

ಕಾರಟಗಿ:

ಮುಂಗಾರು ಬಿತ್ತನೆ ಹಾಗೂ ಭತ್ತ ನಾಟಿಗೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆಯಾಗದಂತೆ ವಿತರಣೆಗೆ ಕ್ರಮ ವಹಿಸಿ ಎಂದು ತಾಲೂಕಿನ ಕ್ರಿಮಿನಾಶಕ, ರಸಗೊಬ್ಬರ ಹಾಗೂ ಬೀಜ ಮಾರಾಟಗಾರರಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲು ಸೂಚಿಸಿದರು.

ಪಟ್ಟಣದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಹಂಚಿಕೆಗೆ ಕೈಗೊಂಡಿರುವ ಕ್ರಮಗಳ ಕುರಿತು ತಾಲೂಕಿನ ಕ್ರಿಮಿನಾಶಕ, ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿದರು.

ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ಜಲಾಶಯ ಆದಷ್ಟು ಬೇಗ ತುಂಬುವ ಸಾಧ್ಯತೆಯಿದೆ. ಇದು ರೈತರಿಗೆ ವರದಾನವಾಗಲಿದೆ. ರೈತರು ಹೀಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಒಟ್ಟು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಭತ್ತ ನಾಟಿ ಗುರಿ ಹೊಂದಲಾಗಿದೆ ಎಂದರು.

31ನೇ ವಿತರಣಾ ನಾಲೆಯ ಕೊನೆ ಭಾಗದ ಟೇಲೆಂಡ್ ಪ್ರದೇಶದಲ್ಲಿ ಮೆಕ್ಕೆಜೋಳ, ತೊಗರಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲು ರೈತರು ಸಿದ್ಧತೆ ಕೈಗೊಳ್ಳಿ. ಕಾರಟಗಿ ಹಾಗೂ ಸಿದ್ದಾಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತಾಲೂಕು ಕ್ರಿಮಿನಾಶಕ, ರಸಗೊಬ್ಬರ ಹಾಗೂ ಬೀಜ ಮಾರಾಟಗಾರ ಡೀಲರ್ಸ್‌ಗಳ ಅಸೋಸಿಯೇಶನ್ ಅಧ್ಯಕ್ಷ ಸಂಗಮೇಶಗೌಡ ಬೂದಗುಂಪಾ ಮಾತನಾಡಿ, ರೈತರಿಗೆ ಮೋಸವಾಗಬಾರದು ಎನ್ನುವ ಉದ್ದೇಶದಿಂದ ಏಕರೂಪದ ಗೊಬ್ಬರ ದಾಸ್ತಾನು ಪುಸ್ತಕ, ಕ್ರಿಮಿನಾಶಕ ದಾಸ್ತಾನು ಪುಸ್ತಕ, ಬಿತ್ತನೆ ಬೀಜದ ದಾಸ್ತಾನು ಪುಸ್ತಕ ಇಡಲಾಗಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ವೀರನಗೌಡ, ಪ್ರಧಾನ ಕಾರ್ಯದರ್ಶಿ ಪಂಪನಗೌಡ, ರುದ್ರಗೌಡ ಸೇರಿದಂತೆ ವಿತರಕರು ಇದ್ದರು.