ದೇಶ ರಕ್ಷಣೆಯಲ್ಲಿ ಬಾಬೂಜಿ ಪ್ರಮುಖ ಪಾತ್ರ

| Published : Apr 06 2025, 01:46 AM IST

ಸಾರಾಂಶ

ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಬದುಕು ಹಸನಾಗಲು ಅವರ ಆರ್ಥಿಕ, ಸಾಮಾಜಿಕ, ಸ್ಥಾನಮಾನಗಳು ಹೆಚ್ಚಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ದೇಶದವರು ಹೊಟ್ಟೆ ಹಸಿವಿನಿಂದ ಸಾಯಬಾರದು, ನಮ್ಮ ಭಾರತ ಪ್ರಜೆಗಳಿಗೋಸ್ಕರ ಅಂದು ಬಾಬು ಜಗಜೀವನ್ ರಾಮ್ ಮಾಡಿದಂತಹ ಹಸಿರು ಕ್ರಾಂತಿಯಿಂದ ಇವತ್ತು ನಾವು ಹೊರ ದೇಶಕ್ಕೆ ಆಹಾರ ಪದಾರ್ಥಗಳನ್ನು ರಪ್ತು ಮಾಡುವ ರೀತಿಯಲ್ಲಿ ನಾವು ಬೆಳೆದಿದ್ದೇವೆ. ಜೊತೆಗೆ ರಕ್ಷಣಾ ಮಂತ್ರಿಗಳಾಗಿ ಅವರು ನಮ್ಮ ದೇಶವನ್ನು ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾವ್ ಅವರ 118ನೇ ಜನ್ಮ ದಿನಾಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಬದುಕು ಹಸನಾಗಲು ಅವರ ಆರ್ಥಿಕ, ಸಾಮಾಜಿಕ, ಸ್ಥಾನಮಾನಗಳು ಹೆಚ್ಚಾಗಬೇಕು. ವಿದ್ಯಾರ್ಥಿಗಳಿಗೆ ಇಂತಹ ಮಹಾನ್ ವ್ಯಕ್ತಿಗಳು ಇದ್ದರೂ, ಅವರು ಮಾಡಿರುವಂತಹ ಕೆಲಸ ಕಾರ್ಯಗಳನ್ನು ತಿಳಿಸಬೇಕು. ಹಾಗೂ ಬಾಬೂಜಿ ಅಂತಹ ವ್ಯಕ್ತಿಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.ನಾವು ಯಾವಾಗ ಸಬಲರಾಗಿ, ಬಲಿಷ್ಠರಾಗಬೇಕು ಎಂದರೆ ಇಂತಹ ಮಹಾನ್ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಆಗ ನಾವು ಇಂತಹ ವ್ಯಕ್ತಿಗಳ ಹಾದಿಯಲ್ಲಿ ನಡೆದುಕೊಂಡು ಬರುತ್ತೇವೆ. ಅವರ ಯೋಜನೆಗಳು, ಕೆಲಸಗಳು ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, 50 ಸಾವಿರ ಜನ ಕಾರ್ಮಿಕರನ್ನು ಸೇರಿಸಿ ಕಾರ್ಮಿಕರ ಕಷ್ಟ, ಅವರಿಗೆ ಅವಕಾಶಗಳು ಏನೆಲ್ಲ ಇದೆ ಎಂಬುದನ್ನು ಚರ್ಚಿಸಿ ಸರ್ಕಾರಕ್ಕೆ ಮೊದಲು ಮನವಿ ಮಾಡಿದವರು ಡಾ. ಬಾಬು ಜಗಜೀವನ್ ರಾಮ್. 1946 ಕಾರ್ಮಿಕ ಸಚಿವರಾಗಿ ನೇಮಕವಾದಾಗ ಕಾರ್ಮಿಕರ ಪರವಾಗಿ ಇಎಸ್ಐ ಆಕ್ಟ್ ಅನ್ನು ಜಾರಿಗೆ ತಂದಿದ್ದೂ ಈಗಲೂ ಜಾರಿಯಲ್ಲಿದೆ ಎಂದು ತಿಳಿಸಿದರು.ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಮಕ್ಕಳಿಗೆ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಸಾಕಷ್ಟು ರೀತಿಯಲ್ಲಿ ಅರಿವು ಮೂಡಿಸಬೇಕು. ಇಂತಹ ವ್ಯಕ್ತಿಗಳ ರೀತಿ ಆಗದಿದ್ದರೂ ಅವರು ಮಾಡಿರುವಂತಹ ಕೆಲಸಗಳನ್ನಾದರೂ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಡಾ. ಬಾಬು ಜಗಜೀವನ್ ರಾಮ್ ಅವರ ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಹೇಗೆ ಸವಾಲನ್ನು ಮಾಡಿದರು ಎಂದರೆ ಅವರು ಹುಟ್ಟಿದಾಗ ಅಸ್ಪೃಶ್ಯತೆಯನ್ನು ಅನುಭವಿಸಿರುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಅವರನ್ನು ತುಳಿತಕ್ಕೆ ಉಂಟು ಮಾಡುವವರು ಹೆಚ್ಚಾಗಿ ಇರುತ್ತಾರೆ. ಅವನ್ನೆಲ್ಲಾ ಅವರು ಮೆಟ್ಟಿಲಾಗಿ ಏರುತ್ತಾ ಇರುವ ಸವಾಲನ್ನು ಸ್ವೀಕರಿಸುತ್ತಾ ಸಾಧನೆಯ ಶಿಖರವನ್ನು ಏರುತ್ತಾರೆ ಎಂದು ವಿವರಿಸಿದರು.ನಿವೃತ್ತ ಪ್ರಾಧ್ಯಾಪಕ ಡಾ.ಎಂ. ನರಸಿಂಹಮೂರ್ತಿ ಮಾತನಾಡಿ, ಬಾಬು ಜಗಜೀವನ್ ರಾಂ ಅವರು ರಾಷ್ಟ್ರದ ನಿರ್ಮಾಣಕ್ಕಾಗಿ ತಮ್ಮದೇ ಆದಂತಹ ಹಲವಾರು ಕೊಡುಗೆ ನೀಡಿದ್ದಾರೆ. ರಾಷ್ಟ್ರ ನಿರ್ಮಾಣ ಎಂದರೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಸದೃಢವಾಗಿ ಕಟ್ಟುವಂತಹ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಸಹಾಯಕ ನಿರ್ದೇಶಕ ಎ.ಎನ್. ಜನಾರ್ಧನ ಹಾಗೂ ಸಮುದಾಯಗಳ ಮುಖಂಡರು ಇದ್ದರು.----ಕೋಟ್...ಜೀವನದಲ್ಲಿ ಯಾರು ಕಷ್ಟ ಪಡುತ್ತಾರೋ, ಯಾರು ಜೀವನದಲ್ಲಿ ತಳ ಸಮುದಾಯದಿಂದ ಬಂದಿರುತ್ತಾರೋ, ಅವರು ಮೊದಲು ಅವಮಾನಗಳನ್ನು ಅನುಭವಿಸಿ ನಂತರ ಸನ್ಮಾನಗಳನ್ನು ಸ್ವೀಕರಿಸುತ್ತಾ ಬರುತ್ತಾರೆ. ಅಂತಹವರಲ್ಲಿ ಹೆಚ್ಚಾಗಿ ಗಟ್ಟಿತನವನ್ನು ಕಾಣಬಹುದು.- ಡಾ.ಪಿ. ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ