ಸಾರಾಂಶ
ಜಿಲ್ಲಾದ್ಯಂತ ಜೂ. 3ರ ಸಂಜೆ 6ರಿಂದ ಜೂ. 4ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿ
ಕನ್ನಡಪ್ರಭ ವಾರ್ತೆ ಕೊಪ್ಪಳಲೋಕಸಭಾ ಚುನಾವಣೆ-2024ರ ಮತ ಏಣಿಕೆ ಕಾರ್ಯ ಜೂನ್ 4ರಂದು ನಡೆಯಲಿರುವ ಪ್ರಯುಕ್ತ ಶಾಂತಿ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಕೊಪ್ಪಳ ಜಿಲ್ಲಾದ್ಯಂತ ಜೂನ್ 3ರ ಸಂಜೆ 6ರಿಂದ ಜೂನ್ 4ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಧ್ವನಿವರ್ಧಕಗಳನ್ನು ಹಾಕುವುದು, ಮೆರವಣಿಗೆ, ಸಭೆ, ಪಟಾಕಿಗಳನ್ನು ಸಿಡಿಸುವುದು ಹಾಗೂ ವಿಜಯೋತ್ಸವ ಆಚರಿಸುವ ಸಾಧ್ಯತೆಗಳಿದ್ದು, ಚುನಾವಣೆಯ ಫಲಿತಾಂಶದಿಂದಾಗಿ ಯಾವುದೇ ಘರ್ಷಣೆಗಳು ಉಂಟಾಗದಂತೆ ಹಾಗೂ ಸಾರ್ವಜನಿಕ ಶಾಂತಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಆದೇಶದನ್ವಯ ಮತ ಏಣಿಕಾ ಕೇಂದ್ರವಾದ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಆವರಣ ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿರುತ್ತದೆ. ಚುನಾವಣಾ ಕರ್ತವ್ಯದಲ್ಲಿ ನಿರತರಾದ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಚುನಾವಣಾ ಅಭ್ಯರ್ಥಿಗಳು, ಏಣಿಕಾ ಏಜೆಂಟರು ಹಾಗೂ ಪಾಸ್ ಹೊಂದಿರುವ ಮಾಧ್ಯಮದವರಿಗೆ ಮಾತ್ರ ಮತ ಎಣಿಕಾ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶವಿರುತ್ತದೆ. ಈ ಸಮಯದಲ್ಲಿ ಜಿಲ್ಲಾದ್ಯಂತ ವಿಜಯೋತ್ಸವ ಆಚರಣೆ, ದ್ವನಿವರ್ಧಕಗಳನ್ನು ಬಳಸುವುದು, ಮೆರವಣಿಗೆ ಮಾಡುವುದು, ಪಟಾಕಿಗಳನ್ನು ಸಿಡಿಸುವುದನ್ನು ನಿರ್ಬಂಧಿಸಲಾಗಿದೆ.
ಆದೇಶ ಮದುವೆ, ಶವ ಸಂಸ್ಕಾರ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.