ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವೈದ್ಯರು ಕಾಯಿಲೆ ಗುಣಪಡಿಸಿದರೆ ಸಾಲದು. ಸಮಾಜವನ್ನು ಸುಧಾರಿಸಬೇಕು. ಜಾತಿ, ಮತ, ಭಾಷೆ ಬೇಧಭಾವ ತೊಲಗಿಸುವ ಶಕ್ತಿ ವೈದ್ಯರಲ್ಲಿದೆ. ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ. ಅವರೆಡನ್ನೂ ಒಂದೇ ಆಗಿ ಸಮೀಕರಿಸಬೇಕು. ನಾವು ಓದಿದ ಕ್ಷೇತ್ರಗಳು ಬೇರೆಯಾಗಿದ್ದರೇನು ಅಭಿರುಚಿಯಿದ್ದ ವ್ಯಕ್ತಿ ಯಾವುದನ್ನೂ ಬರೆಯಬಲ್ಲ ಎಂದು ಹಿರಿಯ ಸಾಹಿತಿ ಡಾ.ಜಯಂತ ಕಾಯ್ಕಿಣಿ ಹೇಳಿದರು.ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಕೆಎಲ್ಇ ವಿಶ್ವವಿದ್ಯಾಲಯದ ಜೆಎನ್ಎಂಸಿ ಕನ್ನಡ ಬಳಗದ ಸಂಯುಕ್ತಾಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ 5ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕವಿ ಕಾದಂಬರಿಗಳು ನಮ್ಮ ಸಮಾಜದ ಹೃದಯದ ರಿಪೋರ್ಟ್ಗಳಿದ್ದಂತೆ, ರೋಗಿಯ ದೈಹಿಕ ಆರೋಗ್ಯಕಷ್ಟೇ ಚಿಕಿತ್ಸೆ ಕೊಡದೆ ಅವರ ಮಾನಸಿಕ ಆರೋಗ್ಯಕ್ಕೂ ಕೂಡ ಚಿಕಿತ್ಸೆ ನೀಡುವುದು ಮುಖ್ಯ. ವೈದ್ಯ ಬರಹಗಾರರು ಸಾಮಾಜಿಕ ಜವಾಬ್ದಾರಿ ಅರಿತು ಸಾಹಿತ್ಯ ರಚಿಸಿದರೆ ಅದ್ಭುತ ಕ್ರಾಂತಿಯಾಗುತ್ತದೆ. ವೈದ್ಯರ ತಲೆಯಲ್ಲಿ ಜಾತಿ ಧರ್ಮಗಳ ಲವಲೇಶವೂ ಸುಳಿಯಬಾರದು. ಮಾನವೀಯತೆ ಮುಖದ ಪ್ರತಿರೂಪವೇ ವೈದ್ಯ. ವೈದ್ಯ ಸಮಾಜದ ಇಸಿಜಿ ಇದ್ದಂತೆ. ರೋಗಿಯ ಹೃದಯದಲ್ಲಿರುವ ನೋವುಗಳನ್ನು ಆತ ಸದಾ ನಿವಾರಿಸಬೇಕು ಎಂದು ಹೇಳಿದರು.
ಕನ್ನಡ ಭವನ ನಿರ್ಮಾಣ: ಡಾ.ಪ್ರಭಾಕರ ಕೋರೆಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜವಾರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಕನ್ನಡ ಬಳಗ ಬೆಳಗಾವಿಯ ಪರಿಸರದಲ್ಲಿ ಕನ್ನಡ ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿದೆ. ಗಡಿಭಾಗದಲ್ಲಿ ಅದರ ಕೊಡುಗೆ ಅವಿಸ್ಮರಣೀಯ. ಖ್ಯಾತ ಸಾಹಿತಿಗಳನ್ನ ಬೆಳಗಾವಿಗೆ ಕರೆ ತಂದ ಹೆಗ್ಗಳಿಕೆ ಕನ್ನಡ ಬಳಗಕ್ಕಿದೆ. ಬೆಳಗಾವಿಯಲ್ಲಿ ಒಂದು ಸಂದರ್ಭದಲ್ಲಿ ಕನ್ನಡದಲ್ಲಿ ಉಸಿರಾಡುವುದು ಕಷ್ಟವಾಗಿತ್ತು. ಅಂತಹ ಘಳಿಗೆಯಲ್ಲಿ ರಾಜ್ಯೋತ್ಸವ ಮೆರವಣಿಗೆ ಸಂಘಟಿಸಿ ಕನ್ನಡ ಧ್ವನಿಯಾಗಿದ್ದು ಕನ್ನಡ ಬಳಗ. ಅದರ ರಚನಾತ್ಮಕ ಕೆಲಸಗಳು ದಾಖಲಾರ್ಹವೆನಿಸಿವೆ. ಬರುವ ವರ್ಷದೊಳಗೆ ಕನ್ನಡ ಭವನ ನಿರ್ಮಾಣ ಮಾಡಲಾಗುವುದೆಂದು ಘೋಷಿಸಿದರು.
ಸಮ್ಮೇಳನಾಧ್ಯಕ್ಷ ಖ್ಯಾತ ವೈದ್ಯ ಬರಹಗಾರ ಡಾ.ನಾ.ಸೋಮೇಶ್ವರ ಅವರು,ಬದುಕಿನ ಆರೋಗ್ಯ ಮತ್ತು ಸೌಂದರ್ಯ ಸಮೀಕರಿಸುವ ಶಕ್ತಿ ವೈದ್ಯ ಬರಹಗಾರರಲ್ಲಿ ಇರಬೇಕು. ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಕುರಿತು ಅಧಿಕೃತವಾದ ಗ್ರಂಥಗಳ ಕೊರತೆ ಇದೆ. ವೈದ್ಯರೇ ಆರೋಗ್ಯ ಸಾಹಿತ್ಯ ಗ್ರಂಥಗಳನ್ನು ರಚಿಸಬೇಕು. ಆರೋಗ್ಯ ಸಾಹಿತ್ಯ ಕುರಿತು ಸರ್ಕಾರದ ವಲಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಜರುಗುತ್ತಿಲ್ಲ. ಪರಸ್ಪರ ಸಂವಹನವಿಲ್ಲ. ಒಂದೇ ವಿಷಯದ ಬಗ್ಗೆ ಹಲವು ಸಲ ಗ್ರಂಥಗಳು ಪ್ರಕಟವಾಗಿರುವುದನ್ನು ಗಮನಿಸಬಹುದು. ಆರೋಗ್ಯ ಸಾಹಿತ್ಯಕ್ಕೆ ಆದ್ಯತೆ ಕಡಿಮೆಯಾಗಿದೆ. ರಾಜ್ಯದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಸಂಘವಿರಬೇಕು. ಅದು ತನ್ನ ಪ್ರಾಸಾರಂಗದ ಮೂಲಕ ಪ್ರಸ್ತುತ ಆರೋಗ್ಯ ವಿಚಾರಗಳ ಗ್ರಂಥಗಳನ್ನು ಪ್ರಕಟಿಸುತ್ತಿರಬೇಕು. ವರ್ತಮಾನದ ವೈದ್ಯಕೀಯ ಸಂಶೋಧನೆಗಳನ್ನು ಕೂಡ ದಾಖಲಿಸುವ ಕೆಲಸ ನಡೆಯಬೇಕು. ಶಾಲಾ ಪಠ್ಯದಲ್ಲಿ ಆರೋಗ್ಯ ಪಠ್ಯಪುಸ್ತಕಗಳಿರಬೇಕು. ಆರೋಗ್ಯ ಪತ್ರಿಕೋದ್ಯಮ ಬರಬೇಕು. ಸಮ್ಮೇಳನಗಳಲ್ಲಿ ಆರೋಗ್ಯ ಸಾಹಿತ್ಯ ವಿಮರ್ಶೆ ಆಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಮ್ಮೇಳನಗಳಲ್ಲಿ ಆರೋಗ್ಯ ಗೋಷ್ಠಿ ಆಯೋಜಿಸಬೇಕು ಎಂದು ಆಗ್ರಹಿಸಿದರು.ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಧರ ಕೆ.ಆರ್ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್ ಎಸ್. ಅಧ್ಯಕ್ಷೀಯ ನುಡಿಗಳನ್ನಾಡಿದರು.
೯ ಗ್ರಂಥಗಳ ಲೋಕಾರ್ಪಣೆ: ವೈದ್ಯಸಂಗಮ ಸ್ಮರಣಸಂಚಿಕೆಯನ್ನು ಹಾಗೂ ೯ ವೈದ್ಯಕೀಯ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ೨೦೨೩-೨೪ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಯನ್ನು ಡಾ.ಸುರೇಶ ಸಗರದ, ಡಾ.ಸುನಂದಾ ಆರ್. ಕುಲಕರ್ಣಿಯವರಿಗೆ, ಹಸ್ತಪ್ರತಿ ಪ್ರಶಸ್ತಿಯನ್ನು ಡಾವೀಣಾ ಎಸ್.ಭಟ್, ಡಾ.ದಿವ್ಯಾ ಕೆ.ಎನ್. ಡಾ.ರಣಜಿತ ಬೀರಣ್ಣ ನಾಯ್ಕ ಕೆಂಚನ್, ಡಾ.ಸಲೀಮ್ ನದಾಫ್ ಅವರಿಗೆ ಪ್ರದಾನ ಮಾಡಲಾಯಿತು.ವೇದಿಕೆಯ ಮೇಲೆ ಡಾ.ಎಚ್.ಬಿ.ರಾಜಶೇಖರ, ಡಾ.ವಿ.ಡಿ. ಪಾಟೀಲ, ಕಾಹೇರ್ ಕುಲಪತಿ ಡಾ.ನೀತಿನ್ ಗಂಗಾನೆ, ಕುಲಸಚಿವ ಡಾ.ಎಂ.ಎಸ್. ಗಣಾಚಾರಿ, ಡಾ.ಕರುಣಾಕರಣ ಬಿ.ಪಿ, ಡಾ.ವೀಣಾ ಸುಳ್ಯ, ಜೆಎನ್ಎಂಸಿ ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ರವೀಂದ್ರ ಅನಿಗೋಳ ಉಪಸ್ಥಿತರಿದ್ದರು. ಡಾ.ಅವಿನಾಶ ಕವಿ ಸ್ವಾಗತಿಸಿದರು. ಡಾ.ಸುಶೃತ ಕಾಮೋಜಿ ಪ್ರಮಾಣವಚನ ಬೋಧಿಸಿದರು. ಡಾ.ಷಮಾ ಬೆಲ್ಲದ, ಡಾ.ನೇತ್ರಾವತಿ ಕವಿ ನಿರೂಪಿಸಿದರು.ಬದುಕಿನ ಪ್ರೀತಿಯ ಒಲುಮೆ ವಿಸ್ಮಯವನ್ನುಂಟು ಮಾಡುತ್ತದೆ. ನೂರಾರು ಭಾಷೆ, ಸಾವಿರಾರು ಜಾತಿ ಇದ್ದರೂ ಕೂಡ ನಾವು ನಂಬಿಕೆ ಮೇಲೆ ಬದುಕಿದ್ದೇವೆ. ರಾಜಕಾರಣ ನಮಗೆ ಜಾತಿಯ ವಿಷ ಕೂಡುತ್ತದೆ. ವೈದ್ಯಕೀಯ ಮನಸ್ಥಿತಿ ಮಾತ್ರ ಇದ್ಯಾವುದನ್ನೂ ಪರಿಗಣಿಸುವುದಿಲ್ಲ.ಒಂದು ವೇಳೆ ಆ ಮನಸ್ಥಿತಿ ಬಂದರೆ ತೀವ್ರ ತೊಂದರೆ ಹಾಗೂ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಯಾವುದೇ ಧರ್ಮ ಇದ್ದರೂ ಕೂಡ ದಯವೇ ಮೂಲವಾಗಿದೆ.
-ಡಾ.ಜಯಂತ ಕಾಯ್ಕಿಣಿ ಹಿರಿಯ ಸಾಹಿತಿ