ಸಾರಾಂಶ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಗುರುವಾರ ವಿಶೇಷವಾಗಿ ತುಲಾಭಾರ ಸೇವೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಗುರುವಾರ ವಿಶೇಷವಾಗಿ ತುಲಾಭಾರ ಸೇವೆ ನಡೆಯಿತು.ಅಲ್ಲದೇ ಇಲ್ಲಿ ಪ್ರತಿನಿತ್ಯವೂ ಭಕ್ತರಿಂದ ಜೋಡಿ ಚಂಡಿಕಾಯಾಗ ಸಮರ್ಪಣೆಗೊಳ್ಳುತ್ತಿದೆ. ಈ ಚಂಡಿಕಾಯಾಗದಲ್ಲಿ ಪಂಚವರ್ಣಾತ್ಮಕವಾದ ಮಂಡಲ ರಚನೆಯನ್ನು ಮಾಡಿ, ಪೂರ್ಣಹುತಿಯಲ್ಲಿ ಪ್ರಮುಖವಾಗಿ ಸೀರೆ, ಕಬ್ಬು, ಎಳ್ಳು, ತಾವರೆ, ಮಾದ್ರಫಲ, ಬಿಲ್ವಪತ್ರೆ, ತುಪ್ಪ, ಮೊಸರು, ಹಾಲು, ಸಾಸಿವೆ, ತೆಂಗಿನಕಾಯಿ, ಅರಳು, ಕೇಸರಿ, ಗುಗ್ಗಳ, ಅಗರು, ಗಂಧ, ಬಾಳೆಹಣ್ಣು, ಅರಶಿನ, ಕುಂಕುಮ, ಸಿಂಗಾರದ ಹೂವು, ಕೇಪಳ ಹೂವು, ಗರಿಕೆ ಹುಲ್ಲು, ಪಚ್ಚ ಕರ್ಪೂರ ಸಮರ್ಪಿಸಲಾಗುತ್ತದೆ. ಗುರುವಾರ ನಾಲ್ಕನೇ ದಿನದಂದು ದೇವಿಯನ್ನು ಕೂಷ್ಮಾಂಡಿನಿ ದೇವಿಯಾಗಿ ಅಲಂಕರಿಸಿ ಪೂಜಿಸಲಾಯಿತು. ಜೋಡಿ ಚಂಡಿಕಾಯಾಗಗಳ ಜೊತೆಗೆ, ಜೋಡಿ ದುರ್ಗಾ ನಮಸ್ಕಾರ, ನೃತ್ಯಸೇವೆಗಳೂ ನಡೆದವು. ನಿತ್ಯದಂತೆ ಈ ದಿನವೂ ಸಾವಿರಾರು ಮಂದಿ ವಿಶೇಷ ಭಕ್ಷ್ಯಗಳ ಅನ್ನಪ್ರಸಾದವನ್ನು ಸ್ವೀಕರಿಸಿದರು. ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.