ಸಾರಾಂಶ
ಶಿವಮೊಗ್ಗ: ರಕ್ತದ ಅಗತ್ಯ ಹೆಚ್ಚಾದಂತೆಲ್ಲ ಜಾಗೃತಿ, ಅರಿವು ಕಾರ್ಯವೂ ಹೆಚ್ಚಾಗುತ್ತಿದ್ದರೂ ಅಗತ್ಯವಿರುವ ರಕ್ತದ ಪೂರೈಕೆಯಲ್ಲಿ ಹಿನ್ನಡೆಯಾಗುತ್ತಲೇ ಇದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ದಿನಕ್ಕೆ 100ರಿಂದ 150 ಯೂನಿಟ್ ರಕ್ತ ಅಗತ್ಯವಿದ್ದರೆ ಪೂರೈಕೆಯಾಗುತ್ತಿರುವುದು 50ರಿಂದ 60 ಯೂನಿಟ್ ಮಾತ್ರ.
ಜಿಲ್ಲೆಗಳಲ್ಲಿ 25 ರಕ್ತನಿಧಿ ಕೇಂದ್ರಗಳಿವೆ. ರಕ್ತ ನಿಧಿ ಕೇಂದ್ರಗಳು ಎಷ್ಟೇ ಇದ್ದರೂ ದಾನಿಗಳ ಸಂಖ್ಯೆ ಹೆಚ್ಚಳವಾಗದಿದ್ದಲ್ಲಿ ಏನೂ ಲಾಭವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು, ರಕ್ತನಿಧಿ ಕೇಂದ್ರಗಳು ರಕ್ತದಾನದ ಬಗ್ಗೆ ಅರಿವು ಮೂಡಿಸುವ ಯತ್ನ ನಡೆಸುತ್ತಿವೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಹೀಗಾಗಿ ಹಾಗೂ ಹೀಗೂ ರಕ್ತ ಸಂಗ್ರಹಣೆ ಸ್ವಲ್ಪ ಹೆಚ್ಚುತ್ತಿದೆ.ಶಿವಮೊಗ್ಗ ನಗರ ಇತ್ತೀಚೆಗೆ ಹೆಲ್ತ್ಹಬ್ ಆಗುತ್ತಿದ್ದು, ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ. ಹೀಗಾಗಿ ಶಿವಮೊಗ್ಗ ನಗರದಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದೆ.
ನಗರದಲ್ಲಿ ಎಲ್ಲೇ ರಕ್ತದಾನ ಶಿಬಿರ ನಡೆದರೂ, ಆ ಶಿಬಿರದಿಂದ ಸಂಗ್ರಹವಾದ ರಕ್ತದ ಪ್ರಮಾಣದಲ್ಲಿ ಶೇ.25ರಷ್ಟು ರಕ್ತವನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಲಾಗುತ್ತಿದೆ. ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ರಕ್ತವನ್ನು ಒದಗಿಸಬೇಕಾದರೆ ರಕ್ತದಾನಿಗಳು ಹೆಚ್ಚು ರಕ್ತವನ್ನು ದಾನ ಮಾಡಬೇಕು.ಇತ್ತೀಚೆಗೆ ರಕ್ತದಾನದ ಕುರಿತು ಇದ್ದ ಕೆಲವು ತಪ್ಪು ಗ್ರಹಿಕೆಗಳು ದೂರವಾಗುತ್ತಿವೆ. ರಕ್ತದಾನ ಎನ್ನುವುದು ಅತ್ಯಂತ ಶ್ರೇಷ್ಠ ಎಂಬ ತಿಳುವಳಿಕೆ ಮೂಡುತ್ತಿದೆ. ವರ್ಷದಿಂದ ವರ್ಷಕ್ಕೆ ರಕ್ತ ನೀಡಲು ಮುಂದೆ ಬರುತ್ತಿರುವ ದಾನಿಗಳ ಸಂಖ್ಯೆ ಏರುತ್ತಿದೆ. ಆದರೆ ಏರುತ್ತಿರುವ ಬೇಡಿಕೆಯನ್ನು ಸರಿಗಟ್ಟಲು ಈ ಸಂಖ್ಯೆ ಸಾಕಾಗುತ್ತಿಲ್ಲ. ಪ್ರತಿ ವರ್ಷವೂ ಏಪ್ರಿಲ್ನಿಂದ ಜೂನ್ವರೆಗೆ ರಕ್ತದ ಸಂಗ್ರಹದ ಸಮಸ್ಯೆ ಅತ್ಯಧಿಕವಾಗಿರುತ್ತದೆ.
ಜಿಲ್ಲೆಯಲ್ಲಿ ಅಗತ್ಯವಿರುವುದಕ್ಕಿಂದ ಕಡಿಮೆ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗುತ್ತಿರುವುದರಿಂದ ಕೆಲವೊಮ್ಮೆ ಶಸ್ತ್ರ ಚಿಕಿತ್ಸೆಯನ್ನು ಕೂಡ ಮುಂದೂಡುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನೂ ವರ್ಷದಲ್ಲಿ ಮೂರು ತಿಂಗಳ ಕಾಲ ಬೇಡಿಕೆಗೆ ತಕ್ಕಷ್ಟು ರಕ್ತ ಸಿಗುವುದೇ ದುಸ್ತರ. ಮೇ ನಿಂದ ಜುಲೈವರೆಗೆ ಕಾಲೇಜುಗಳಿಗೆ ರಜೆ ಇರುವ ಕಾರಣ ಈ ಅವಧಿಯಲ್ಲಿ ತಕ್ಕಷ್ಟು ರಕ್ತ ಪೂರೈಕೆಯಾಗುವುದಿಲ್ಲ. ಬಳಿಕ ಕಾಲೇಜು ಆರಂಭವಾಗಿ ಎನ್ಎಸ್ಎಸ್, ಎನ್ಸಿಸಿ, ರೆಡ್ಕ್ರಾಸ್ ಘಟಕಗಳು ಆರಂಭವಾದ ಬಳಿಕ ರಕ್ತದಾನ ಶಿಬಿರಗಳು ನಿರಂತವಾಗಿ ನಡೆಯುತ್ತವೆ.ಕೊಟ್ಟವರೇ ಕೊಡಬೇಕು:
ರಕ್ತದಾನಿಗಳ ಸಂಖ್ಯೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳವಾಗದ ಕಾರಣ ರಕ್ತ ನೀಡಿದವರೇ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಅನಿವಾರ್ಯತೆ ಇದೆ. ಈ ರಕ್ತದಾನಿಗಳು ಇದನ್ನೊಂದು ಹೆಮ್ಮೆ ಮಾತ್ರವಲ್ಲ, ತಮ್ಮ ಆದ್ಯ ಕರ್ತವ್ಯ ಎಂದು ಕೂಡ ಭಾವಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ ಇಂತಹ ಸುಮಾರು 100 ಮಂದಿ ಸ್ವಯಂ ರಕ್ತದಾನಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ರಕ್ತದಾನಿಗಳ ಗುಂಪು, ವ್ಯಾಟ್ಸಪ್ ಗುಂಪು ಹೀಗೆ ಅನೇಕ ದಾನಿಗಳು ಸಂಘಟನೆಯ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಆರು ರಕ್ತನಿಧಿ ಕೇಂದ್ರಗಳಿವೆ. ಶಿಕಾರಿಪುರ, ಸೊರಬ ಮತ್ತು ಶಿರಾಳಕೊಪ್ಪದಲ್ಲಿ ಮೆಗ್ಗಾನ್ ಆಸ್ಪತ್ರೆಯ ರೆಫೆರಲ್ ಯೂನಿಟ್ಗಳಿವೆ.
ರಕ್ತದ ಪರಿಸ್ಥಿತಿ ಕಠಿಣವಾಗಿಯೇ ಇದೆ. ಆದರೆ, ಸಾರ್ವಜನಿಕರಿಗೆ ಇದು ಗೊತ್ತಾಗುವುದೇ ಇಲ್ಲ. ಅಂಗಡಿಗೆ ಹೋಗಿ ಸಾಮಾನು ಖರೀದಿಸಿದಂತೆ ರಕ್ತನಿಧಿ ಕೇಂದ್ರಕ್ಕೆ ಹೋಗಿ ರಕ್ತಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಇಲ್ಲ ಎಂದರೆ ಗಲಾಟೆಯನ್ನೂ ಮಾಡುತ್ತಾರೆ. ಆದರೆ ರಕ್ತ ನೀಡುವುದು ನಮ್ಮ ಜವಾಬ್ದಾರಿ ಕೂಡ ಎಂಬ ಅರಿವು ಬಹುತೇಕರಿಗೆ ಇಲ್ಲ ಎನ್ನುತ್ತಾರೆ ರೋಟರಿ ಬ್ಲಡ್ ಬ್ಯಾಂಕ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಕೆ.ಸತೀಶ್."ರಕ್ತ ನೀಡಿ ಭರವಸೆ ನೀಡಿ ಜೊತೆಯಾಗಿ ನಾವು ಜೀವ ಉಳಿಸೋಣ " ಎಂಬುದು ಈ ವರ್ಷದ ಘೋಷಣೆ. ರಕ್ತ ಪೂರೈಕೆ ಕೊರತೆ ನೀಗಬೇಕಾದರೆ ಮುಖ್ಯವಾಗಿ ಶಾಲಾ- ಕಾಲೇಜುಗಳಿಂದಲೇ ರಕ್ತದಾನ ಬಗ್ಗೆ ಪ್ರೇರೆಪಣೆ ನೀಡಬೇಕಾದ ಅಗತ್ಯವಿದೆ. ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಪೋಷಕರಲ್ಲಿ ರಕ್ತದಾನ ಮಹತ್ವವನ್ನು ತಿಳಿಸುವುದು ಅವಶ್ಯವಾಗಿದೆ.
- ಎಸ್.ಕೆ.ಸತೀಶ್, ಸಾರ್ವಜನಿಕ ಸಂಪರ್ಕಾಧಿಕಾರಿ, ರೋಟರಿ ಬ್ಲಡ್ ಬ್ಯಾಂಕ್
*ಮನುಷ್ಯರ ರಕ್ತವನ್ನು ಎ, ಬಿ, ಓ ಮತ್ತು ಎಬಿ ಎಂದು ನಾಲ್ಕು ಗುಂಪುಗಳಾಗಿ ಅಲ್ಲದೇ Rh+ve ಮತ್ತು Rh-ve ಎಂದು ವಿಂಗಡಿಸಲಾಗಿದೆ.
*ಹೆಣ್ಣು-ಗಂಡು ಎಂಬ ಭೇದವಿಲ್ಲದೆ 18ರಿಂದ 60 ವರ್ಷದೊಳಗಿನ ವಯಸ್ಸಿನವರು 50 ಕೆ.ಜಿ.ಗಿಂತ ಹೆಚ್ಚಿನ ತೂಕವಿರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.* ರಕ್ತದಾನ ಮಾಡಿದ ಕೆಲವೇ ಕ್ಷಣದಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗೆ ದಾನ ಮಾಡಿದ ಪ್ರಮಾಣದಷ್ಟು ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.
* ಹೊಸ ರಕ್ತ ಉತ್ಪತ್ತಿಯಿಂದ ಕಾರ್ಯತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.* ರಕ್ತದಾನವು ರಕ್ತದಲ್ಲಿನ ಕೊಬ್ಬಿನಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ.
* ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.