ಡಾ.ಎಚ್ಚೆನ್‌ ಪ್ರಾಧಿಕಾರದ ಅಧ್ಯಕ್ಷಗೆ ಅದ್ಧೂರಿ ಸ್ವಾಗತ

| Published : May 16 2025, 01:58 AM IST / Updated: May 16 2025, 01:59 AM IST

ಸಾರಾಂಶ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು ನನಗೆ ರಾಜಕೀಯವಾಗಿ ಶಕ್ತಿ ನೀಡಲು ಈ ಅಧಿಕಾರವನ್ನು ನೀಡಿದ್ದಾರೆ, ಅವರ ಆಶಯದಂತೆ ಎಲ್ಲರ ನಿರೀಕ್ಷೆಯಂತೆ ನಾನು ತಾಲ್ಲೂಕಿನ ಮಿನಿವಿಧಾನಸೌಧದಲ್ಲಿ ಒಂದು ಕಚೇರಿ ಮಾಡಿ ಅಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಗೌರಿಬಿದನೂರು

ಡಾ.ಎಚ್. ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿಯವರನ್ನು ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಕ್ಷೇತ್ರದ ಗಡಿಭಾಗವಾದ ತಿಪ್ಪಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿದರು. ಸಾವಿರಾರುಮಂದಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾರು ಮತ್ತು ಬೈಕ್ ರ್‍ಯಾಲಿ ಮೂಲಕ ನಗರದತ್ತ ಸಾಗಿದರು. ದಾರಿ ಮಧ್ಯೆ ಬಂದಾರ್ಲಹಳ್ಳಿ, ಕಲ್ಲಿನಾಯಕನಹಳ್ಳಿ, ತೊಂಡೇಬಾವಿ, ಅಲಕಾಪುರ ಸೇರಿದಂತೆ ನಗರದ ಮುಖ್ಯದ್ವಾರದ ಬಳಿ ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ನೆಚ್ಚಿನ ನಾಯಕನಿಗೆ ಪುಷ್ಪಮಾಲೆ ಹಾಕಿ ಸಿಹಿ ತಿನ್ನಿಸಿ ಶುಭ ಕೋರಿದರು.ಕಾರ್ಯಕ್ರಮಗಳ ಅನುಷ್ಠಾನ

ನಗರದ ಮುಖ್ಯ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ನೊಂದಿಗೆ ರೋಡ್ ಷೋ ಮೂಲಕ ಸಾಗಿ ಅಂಬೇಡ್ಕರ್ ವೃತ್ತ ಮತ್ತು ಎನ್.ಸಿ.ನಾಗಯ್ಯರೆಡ್ಡಿ ವೃತ್ತ ದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ ರೆಡ್ಡಿ, ಸರ್ಕಾರವು ಎಚ್.ಎನ್.ಪ್ರಾಧಿಕಾರವನ್ನು ರಚನೆಮಾಡಿದ್ದು, ಬಜೆಟ್‌ನಲ್ಲಿ ಘೋಷಣೆಯಾದ ಎಲ್ಲ ಕಾರ್ಯಕ್ರಮಗಳು ಅನುಷ್ಠಾನವಾಗುವುದು ಎಂದರು.

ಜೂನ್ ತಿಂಗಳಿನಿಂದ ಆದರೆ ಅತಿಶೀಘ್ರದಲ್ಲಿ ರಚನೆ ಮಾಡಿ ಸಂಬಂಧಪಟ್ಟಂತಹ ಅಧಿಕಾರವನ್ನು ನನಗೆ ವಹಿಸಿದ್ದಾರೆ. ಅದರಂತೆ ತಾವು ಎಚ್.ಎನ್.ವಿಜ್ಞಾನ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದರು.

ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು ನನಗೆ ರಾಜಕೀಯವಾಗಿ ಶಕ್ತಿ ನೀಡಲು ಈ ಅಧಿಕಾರವನ್ನು ನೀಡಿದ್ದಾರೆ, ಅವರ ಆಶಯದಂತೆ ಎಲ್ಲರ ನಿರೀಕ್ಷೆಯಂತೆ ನಾನು ತಾಲ್ಲೂಕಿನ ಮಿನಿವಿಧಾನಸೌಧದಲ್ಲಿ ಒಂದು ಕಚೇರಿ ಮಾಡಿ ಅಲ್ಲಿಯೇ ಕುಳಿತುಕೊಳ್ಳುತ್ತೇನೆ, ನಾವೆಲ್ಲರೂ ಸೇರಿ ಮುಂಬರುವ ಪ್ರತಿ ಪಂಚಾಯಿತಿ ಚುನಾವಣೆಗೆ ಸಜ್ಜಾಗಿ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸೋಣ ಎಂದು ಹೇಳಿದರು.ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಕಳೆದ 25ವರ್ಷಗಳಿಂದ ಶಿವಶಂಕರ ರೆಡ್ಡಿ ಅವರು ಒಳ್ಳೆಯತನದಿಂದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ, ಇದರಿಂದಾಗಿ ಗೌರಿಬಿದನೂರು ಅಭಿವೃದ್ಧಿಯಾಗಿದೆ, ಉಸ್ತುವಾರಿ ಮಂತ್ರಿಗಳಾಗಿದ್ದಾಗ ಯಾವುದೇ ಎಸ್ಕಾಟ್ ಇಲ್ಲದೆ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದರು ಎಂದು ನೆನಪಿಸಿದರು.ಗೌರಿಬಿದನೂರು ಜನತೆಗೆ ಶಿವಶಂಕರರೆಡ್ಡಿ ಅವರ ಜೊತೆ ಗಟ್ಟಿಯಾಗಿ ನಿಲ್ಲಬೇಕು. ಇವರ ಹಿಂದೆ ನಾವಿದ್ದೇವೆ. ನಗರದಲ್ಲಿ ಹೊಸ ಆಸ್ಪತ್ರೆ, ಕೈಗಾರಿಕೆ, ಅಂಬೇಡ್ಕರ್ ಭವನ ಇವೆಲ್ಲವನ್ನು ತಂದವರು ಇವರೇ ಎಂದರು.ಈ ವೇಳೆ ಭಾರ್ಗವರೆಡ್ದಿ, ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ವೇಣು, ಅಶ್ವತ್ಥನಾರಾಯಣ, ಆರ್.ಪಿ.ಗೋಪಿನಾಥ್, ಮೈಲಾರಿ, ತಾರಾನಾಥ್, ಕಂಬಕ್ಕರ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಸೇರಿದಂತೆ ಮುಂತಾದವರ ಹಾಜರಿದ್ದರು.