ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಕಂಠೀರವ ಬಾಲ ಸರಸ್ವತಿ ಸೇವೆ ಅನನ್ಯವಾದುದೆಂದು ರೆಡ್ಡಿ ಜನಸಂಘದ ಅಧ್ಯಕ್ಷ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಣ್ಣಿಸಿದರು.ಅಗಲಿದ ಡಾ.ಕಂಠೀರವ ಬಾಲಸರಸ್ವತಿರವರಿಗೆ ಕುಟುಂಬ ವರ್ಗದವರು ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಕಾಲ ಅಮೇರಿಕಾದಲ್ಲಿ ಸೇವೆ ಸಲ್ಲಿಸಿದ ಡಾ.ಕಂಠೀರವ ಬಾಲ ಸರಸ್ವತಿಯವರು ಭಾರತಕ್ಕೆ ಮರಳಿ ಅನೇಕ ಹೊಸ ಮೆಡಿಕಲ್ ಕಾಲೇಜುಗಳಲ್ಲಿ ಆಡಳಿತಾತ್ಮಕವಾಗಿ ಸೂಕ್ತ ಸಲಹೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಬಾಲಸರಸ್ವತಿ ಹಾಗೂ ತಮಗೂ ಆರು ದಶಕಗಳ ಒಡನಾಟವಿದೆ. ಹಿರಿಯೂರು ತಾಲೂಕು ಕುಗ್ರಾಮ ಬಸಪ್ಪನಮಾಳಿಗೆಯಲ್ಲಿ ಜನಿಸಿದ ಡಾ.ಕಂಠೀರವ ಬಾಲಸರಸ್ವತಿರವರು ಮರಡಿಹಳ್ಳಿಯಲ್ಲಿ ಶಿಕ್ಷಣ ಪಡೆದು ನಂತರ ಬೇರೆ ಬೇರೆ ಕಡೆ ವಿದ್ಯಾಭ್ಯಾಸ ಮಾಡಿ ವೈದ್ಯರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದರು. ರೆಡ್ಡಿ ಜನಸಂಘದ ಸದಸ್ಯರಾಗಿ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಿದ್ದರು. ಅವರ ನಿಧನದಿಂದ ಸಂಘಕ್ಕೆ ಅಪಾರ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.ಡಾ.ಕಂಠೀರವ ಬಾಲಸರಸ್ವತಿರವರ ಜೊತೆ ಸಾಕಷ್ಟು ಬಾರಿ ಚರ್ಚೆ ನಡೆಸಿದ್ದೇನೆ. ಅವರು ನೀಡಿದ ಸಲಹೆಗಳನ್ನು ಪಾಲಿಸುತ್ತೇವೆ. ಐಮಂಗಲ ಭಾಗದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ ಮೃತರು ಅನೇಕ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಚರ್ಮ ತಜ್ಞ ಡಾ.ಆನಂದಪ್ಪ ಮಾತನಾಡಿ, ಡಾ.ಕಂಠೀರವ ಬಾಲಸರಸ್ವತಿರವರು ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿ ವೈದ್ಯಕೀಯ ಲೋಕದ ಬ್ರಹ್ಮ ಎನಿಸಿಕೊಂಡವರು. ಅವರೊಬ್ಬ ಕೇವಲ ವೈದ್ಯರಾಗಿರಲಿಲ್ಲ. ಶಕ್ತಿಯಾಗಿದ್ದರು. ವೃತ್ತಿ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟವರಲ್ಲ ಎಂದರು.
ಬಸವೇಶ್ವರ ಆಸ್ಪತ್ರೆಯ ಡಾ.ರಾಜೇಶ್,ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ, ರೆಡ್ಡಿ ಜನಸಂಘದ ನಿರ್ದೇಶಕರುಗಳಾದ ಆರ್.ವಿ.ಮಾರುತೇಶ್ರೆಡ್ಡಿ, ರಾಮಕೃಷ್ಣರೆಡ್ಡಿ ಹಾಗೂ ಪದಾಧಿಕಾರಿಗಳು ನುಡಿನಮನದಲ್ಲಿ ಭಾಗವಹಿಸಿದ್ದರು.