ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಯುವಜನರೇ ದೇಶದ ಸಂಪತ್ತು ಎಂದಿದ್ದ ಸ್ವಾಮಿ ವಿವೇಕಾನಂದರ ಆಶಯಗಳಿಗೆ ತಕ್ಕಂತೆ ಯುವ ಸಮುದಾಯ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕಿ ಡಾ.ಎಂ.ಬಿ.ಪ್ರಮೀಳಾ ಕರೆ ನೀಡಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಎನ್ ಎಸ್ ಎಸ್ ಘಟಕಗಳು ಮತ್ತು ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿನ ಯುವಜನರು ವಿವೇಕಾನಂದರ ನಂಬಿಕೆಯನ್ನು ಉಳಿಸಿ ಅವರ ಕನಸು ನನಸಾಗಿಸಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಹಾಗೂ ಬದಲಾವಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.ಯುವ ಸಬಲೀಕರಣ ಇಲಾಖೆ ಯುವ ಜನತೆಯ ಪ್ರತಿಭೆ ಅನಾವರಣಗೊಳಿಸಲು ಅನೇಕ ಅವಕಾಶಗಳನ್ನು ಕಲ್ಪಿಸುತ್ತಿದೆ. ಯುವಕರು ಅವಕಾಶ ಸದುಪಯೋಗ ಪಡೆದುಕೊಂಡು ತಮ್ಮ ಪ್ರತಿಭೆಗಳ ಮೂಲಕ ಜಿಲ್ಲೆಗೆ ಹೆಸರು ತರಬೇಕು ಎಂದರು.
ಕಲೆ, ಸಾಹಿತ್ಯ, ರಂಗಭೂಮಿ, ಜನಪದ ಹಾಗೂ ನಾಟಕ ಎಂಬಂತೆ ಜಿಲ್ಲೆಯು ಎಲ್ಲಾ ಕ್ಷೇತ್ರಗಳಲ್ಲೂ ಮಹತ್ವ ಹೊಂದಿದೆ. ಅನೇಕ ಪ್ರತಿಭಾನ್ವಿತರು ಎಲೆಮರೆ ಕಾಯಿಯಂತೆ ಉಳಿದು ಹೋಗದೆ ಇಲಾಖೆಗಳು ಒದಗಿಸುವ ಸವಲತ್ತು ಮತ್ತು ಅವಕಾಶ ಪಡೆಯಿರಿ ಎಂದು ತಿಳಿಹೇಳಿದರು.ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ನಾಗರಾಜು ಮಾತನಾಡಿ, ಯುವಜನೋತ್ಸವ ಜಿಲ್ಲೆಗೆ ಹೆಸರು ತರುವ ಒಂದು ಭಾಗವಾಗಿದೆ. ಯುವ ಜನೋತ್ಸವ ಯಶಸ್ಸಿಗೆ ಸರ್ಕಾರ ಮತ್ತು ಇಲಾಖೆಗಳು ಶ್ರಮಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಯುವಕರಲ್ಲಿ ಅಡಗಿರುವ ಸಾಂಸ್ಕೃತಿಕ ಪ್ರತಿಭೆಗೆ ಒಂದು ವೇದಿಕೆಯನ್ನು ಸರ್ಕಾರ ಒದಗಿಸಿದೆ, ಇದರ ಸದುಪಯೋಗಪಡೆದುಕೊಂಡು ರಾಜ್ಯ ಮತ್ತು ರಾಷ್ಟಮಟ್ಟದವರೆಗೆ ಹೆಸರು ಮಾಡಿ ಎಂದು ಕರೆ ನೀಡಿದರು.
ಯುವಕರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸುವುದರಿಂದ ವಿದ್ಯಾವಂತಿಕೆ ಜತೆಗೆ ಪ್ರತಿಭಾನ್ವಿತರಾಗಿ ಬೆಳೆಯಬಹುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಹವ್ಯಾಸಿಯನ್ನಾಗಿಸಿಕೊಳ್ಳಬೇಕು. ಅದು ಜೀವನದ ವೃತ್ತಿಯಾಗಿ ಬದುಕು ಬೆಳಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದ ವಿಜೇತರನ್ನು ಸನ್ಮಾನಿಸಲಾಯಿತು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಎಂ.ಯೋಗೀಶ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪನಿರ್ದೇಶಕ ಓಂ ಪ್ರಕಾಶ್. ಮೈ ಭಾರತ್ ಕೇಂದ್ರದ ಅಧಿಕಾರಿ ಶೃತಿ, ಯುವ ಪ್ರಶಸ್ತಿ ಪುರಸ್ಕೃತ ಅನಿಲ್ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.