ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಘ ಸಂಸ್ಥೆಗಳಿಗೆ ಕಾರ್ಯ ಚಟುವಟಿಕೆ ನಡೆಸಲು ತೊಂದರೆ
ಕುಷ್ಟಗಿ: ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಕುಷ್ಟಗಿ ಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಡಾ.ರಾಜ್ ಕುಮಾರ ಕಲ್ಯಾಣ ಮಂಟಪ ದುರಸ್ತಿಗೊಳಿಸಿ ಪರಿಷತ್ತಿಗೆ ಹಸ್ತಾಂತರಿಸುವಂತೆ ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳಗೆ ಮನವಿ ಸಲ್ಲಿಸಿದರು.
ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಕುಷ್ಟಗಿ ಪಟ್ಟಣದಲ್ಲಿ ಸಾಹಿತ್ಯಿಕ ಚಟುವಟಿಕೆ ನಡೆಸಲು ಸಭೆ ಸಮಾರಂಭ ಮಾಡಲು ಸರ್ಕಾರಿ ಭವನ ಇರಲಾರದ ಕಾರಣದಿಂದ ಖಾಸಗಿ ಕಲ್ಯಾಣ ಮಂಟಪಗಳಿಗೆ ಸಾವಿರಾರು ಖರ್ಚು ಮಾಡಿ ಸಭೆ ಸಮಾರಂಭ ಮಾಡುವ ಅನಿವಾರ್ಯತೆ ಎದುರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಘ ಸಂಸ್ಥೆಗಳಿಗೆ ಕಾರ್ಯ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದ್ದು, ಸದ್ಯ ಕುಷ್ಟಗಿ ಪಟ್ಟಣದ ವಿದ್ಯಾನಗರದಲ್ಲಿರುವ ಡಾ. ರಾಜ್ ಕುಮಾರ ಕಲ್ಯಾಣ ಮಂಟಪ ಹಲವು ವರ್ಷಗಳಿಂದ ಯಾವುದೇ ಕಾರ್ಯ ಚಟುವಟಿಕೆ ಮಾಡದ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಗೆ ಬಂದಿದೆ. ಇದರ ಜತೆಗೆ ಕಲ್ಯಾಣ ಮಂಟಪದ ಮುಂದೆ ಕುಡುಕರು ಮತ್ತು ಪುಂಡಪೋಕರ ಹಾವಳಿ ಹೆಚ್ಚಾಗಿದ್ದು ಪುರಸಭೆಯಿಂದ ದುರಸ್ತಿಗೊಳಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಿದರೆ ಅನೂಕೂಲವಾಗಲಿದೆ ಎಂದರು.ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ರವೀಂದ್ರ ಬಾಕಳೆ ಮಾತನಾಡಿ, ಪಟ್ಟಣದಲ್ಲಿ ಕುಡುಕರ ಹಾವಳಿಗೆ ತುತ್ತಾಗುತ್ತಿರುವ ಡಾ. ರಾಜಕುಮಾರ ಕಲ್ಯಾಣ ಮಂಟಪ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸುವಂತೆ ಕೆಲವು ತಿಂಗಳ ಹಿಂದೆ ಪುರಸಭೆಗೆ ಮನವಿ ಸಲ್ಲಿಸಲಾಗಿದ್ದು ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಡಾ.ರಾಜಕುಮಾರ ಕಲ್ಯಾಣ ಮಂಟಪಕ್ಕೆ ಜೀವಕಳೆ ನೀಡಬೇಕು ಕಸಾಪ ಹಾಗೂ ಇತರೆ ಸಂಘ ಸಂಸ್ಥೆಗಳ ಸಾಂಸ್ಕೃತೀಕ ಮತ್ತು ಸಾಹಿತ್ಯಿಕ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಇಟ್ನಾಳ ಭರವಸೆ: ಕುಷ್ಟಗಿ ಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಡಾ. ರಾಜ್ ಕುಮಾರ ಕಲ್ಯಾಣ ಮಂಟಪವನ್ನು ದುರಸ್ತಿ ಕೈಗೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲ ಷರತ್ತುಗಳೊಂದಿಗೆ ಹಸ್ತಾಂತರಿಸುವಂತೆ ಪುರಸಭೆ ಆಡಳಿತಾಧಿಕಾರಿ,ಮುಖ್ಯಾಧಿಕಾರಿಗಳಿಗೆ ಸಲಹೆ ಸೂಚನೆ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಿಕ ಚಟುವಟಿಕೆಗಳಿಗೆ, ಸಾಂಸ್ಕೃತೀಕ ಕಾರ್ಯಕ್ರಮಗಳಿಗೆ ಅನೂಕೂಲ ಕಲ್ಪಿಸಿಕೊಡಲಾಗುವದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ, ಕಸಾಪ ಪದಾಧಿಕಾರಿ ಮಂಜುನಾಥ ಗುಳೇದಗುಡ್ಡ, ಪರಶಿವಮೂರ್ತಿ ಮಾಟಲದಿನ್ನಿ, ಮೈಲಾರಪ್ಪ ಗೋನಾಳ ಸೇರಿದಂತೆ ಅನೇಕರು ಇದ್ದರು.