ಮದ್ಯಪಾನ, ಮಾದಕವಸ್ತು ಸೇವನೆ ದೇಹಕ್ಕೆ ಹಾನಿಕರ: ಜಿಲ್ಲಾಧಿಕಾರಿ ಡಾ.ಸುಶೀಲಾ

| Published : Jun 28 2025, 12:18 AM IST

ಸಾರಾಂಶ

ಮಾದಕವಸ್ತುಗಳ ಹಾಗೂ ಮದ್ಯಪಾನ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಹಾನಿಯಾಗುವ ಜತೆಗೆ ದೇಶದ ಹಿತದೃಷ್ಟಿಯಿಂದಲೂ ಇದು ಹಾನಿಕಾರಕ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.

ಮಾದಕವಸ್ತು ವಿರೋಧಿ ದಿನ । ವ್ಯಸನ ಮುಕ್ತ ಸಮಾಜ, ನಶೆ ಮುಕ್ತ ಯಾದಗಿರಿ ಕಾರ್ಯಕ್ರಮ । ಯೋಗ ಪ್ರದರ್ಶನ

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾದಕವಸ್ತುಗಳ ಹಾಗೂ ಮದ್ಯಪಾನ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಹಾನಿಯಾಗುವ ಜತೆಗೆ ದೇಶದ ಹಿತದೃಷ್ಟಿಯಿಂದಲೂ ಇದು ಹಾನಿಕಾರಕ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.

ನಗರದ ಲುಂಬಿನಿ ಉದ್ಯಾದಲ್ಲಿ ಶುಕ್ರವಾರ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನಾಚರಣೆ ಹಾಗೂ ವ್ಯಸನ ಮುಕ್ತ ಸಮಾಜ -ನಶೆ ಮುಕ್ತ ಯಾದಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದದರು.

ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳು ಬಹುಮುಖ್ಯ. ಮಾದಕವಸ್ತುಗಳ ಸೇವನೆಯಿಂದ ವ್ಯಕ್ತಿಯು ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುವ ಜತೆಗೆ ಇದು ದೇಶಕ್ಕೂ ಹಾನಿಕಾರಕವಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಪ್ರತಿ ತಿಂಗಳ ಸಮನ್ವಯ ಸಮಿತಿ ಸಭೆಗಳ ಮೂಲಕ ತಂಬಾಕು, ಮದ್ಯಪಾನ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇತ್ತೀಚೆಗೆ ಜಿಲ್ಲಾ ಪೋಲಿಸ್ ಇಲಾಖೆಯಿಂದಲೂ ಕೂಡ ಜಿಲ್ಲೆಯಲ್ಲಿ ಗಾಂಜಾ ಅಕ್ರಮ ಸಾಗಾಣಿಕೆ ವಿರುದ್ಧ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕರು ಕೂಡ ಮದ್ಯಪಾನ ಹಾಗೂ ಮಾದಕವಸ್ತುಗಳ ಸೇವನೆಯಿಂದ ದೂರು ಉಳಿಯುವ ಜೊತೆಗೆ, ಇದನ್ನು ತಕ್ಷಣ ತ್ಯಜಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಅತಿಯಾದ ಸಿಗರೇಟ್, ಗುಟ್ಕಾ, ನಶೆ ಪದಾರ್ಥಗಳ ಸೇವನೆ. ಮದ್ಯಪಾನ ಮಾಡುವ ವ್ಯಕ್ತಿಗಳು ಸಮಾಜ ಹಾಗೂ ಕುಟುಂಬದಿಂದ ದೂರ ಉಳಿಯುತ್ತಾರೆ. ಅಂತಹ ವ್ಯಕ್ತಿಗಳಿಗೆ ಬಗ್ಗೆ ಕುಟುಂಬದಿಂದ ಸಹಾನುಭೂತಿಯಿಂದ ನೋಡದೆ ನಿರಂತರ ನಿಗಾ ಇಡುವ ಮೂಲಕ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಇತ್ತೀಚೆಗೆ ಸಭ್ಯ ಕುಟುಂಬಸ್ಥರೂ ಕೂಡ ಒತ್ತಡ ನಿವಾರಣೆ, ಕ್ಷಣಿಕ ಸುಖಕ್ಕಾಗಿ ಡ್ರಗ್ಸ್, ಕೊಕೇನ್ ಹಾಗೂ ಇತರೆ ಮಾದಕವಸ್ತುಗಳ ಹಾಗೂ ಮದ್ಯಪಾನದ ದಾಸರಾಗುತ್ತಿರುವುದು ಆತ್ಮಹತ್ಯೆ ಮನಸ್ಥಿತಿಗೆ ಕಾರಣವಾಗುತ್ತಿದೆ. ಅದರಂತೆ ಅಪಘಾತಗಳು, ಅತ್ಯಾಚಾರ, ಕೊಲೆ, ಕಳ್ಳತನ, ,ದರೋಡೆಗಳಿಗೂ ಕಾರಣವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ, ಡಾ. ಜಾಕಾ ಮಾತನಾಡಿದರು. ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಕುಮಾರಿ ಶಿಲ್ಪಾ ಯೋಗ ಪ್ರದರ್ಶಿಸಿದರು. ಗಿರಿನಗರ ಸಾಂಸ್ಕೃತಿಕ ಕಲಾ ತಂಡದಿಂದ ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತಂಡದಿಂದ ರೂಪಕ ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು. ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಿಂದ ಲುಂಬಿನಿ ಉದ್ಯಾನರೆಗಿನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ ಚಾಲನೆ ನೀಡಿದರು.

ಡಿವೈಎಸ್ಪಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್ಪಿ ಜಾವೇದ್ ವಂದಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಇತರ ಅಧಿಕಾರಿಗಳು ಇದ್ದರು.