ಮುಸ್ಲಿಂ ಯುವಕರಿಂದ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ

| Published : Aug 09 2024, 12:34 AM IST

ಮುಸ್ಲಿಂ ಯುವಕರಿಂದ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿಯ ಸುಮಾರು 16 ಜನ ಸಮಾನ ಮನಸ್ಕ ಮುಸ್ಲಿಂ ಯುವಕರು ಸೇರಿ ಯೂನಿಟಿ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡು ತನ್ಮೂಲಕ ಕಡು ಬಡವರಿಗೆ ಉಚಿತ ಆಂಬ್ಯುಲೆನ್ಸ್ ಮತ್ತು ಶವ ಸಂರಕ್ಷಣೆ ಪೆಟ್ಟಿಗೆ ಸೇವೆ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿರುವುದು ಸಂತೋಷ ಸಂಗತಿ ಎಂದು ಮುಸ್ಲಿಂ ಸಮಾಜದ ಮೌಲ್ವಿ ಅಕೀಲ್ ರಾಜಾ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇಲ್ಲಿನ ಸುಮಾರು 16 ಜನ ಸಮಾನ ಮನಸ್ಕ ಮುಸ್ಲಿಂ ಯುವಕರು ಸೇರಿ ಯೂನಿಟಿ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡು ತನ್ಮೂಲಕ ಕಡು ಬಡವರಿಗೆ ಉಚಿತ ಆಂಬ್ಯುಲೆನ್ಸ್ ಮತ್ತು ಶವ ಸಂರಕ್ಷಣೆ ಪೆಟ್ಟಿಗೆ ಸೇವೆ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿರುವುದು ಸಂತೋಷ ಸಂಗತಿ ಎಂದು ಮುಸ್ಲಿಂ ಸಮಾಜದ ಮೌಲ್ವಿ ಅಕೀಲ್ ರಾಜಾ ಹೇಳಿದರು.

ಪಟ್ಟಣದ ಜಾಮೀಯಾ ಮಸೀದಿ ಆವರಣದಲ್ಲಿ ನಡೆದ ಯೂನಿಟಿ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಆಂಬ್ಯುಲೆನ್ಸ್ ಸೇವೆ ಚಾಲನೆಗೊಳಿಸಿ ಮಾತನಾಡಿ, ಸಮಾಜಮುಖಿ ಸೇವೆಗಳಿಗೆ ಯಾವುದೇ ಧರ್ಮ, ಜಾತಿಗಳ ಬೇಧ-ಭಾವವಿರುವುದಿಲ್ಲ ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎನ್ನುವ ತತ್ವದಡಿ ಈ ಚಾರಿಟೇಬಲ್ ಸೇವೆ ನೀಡಲಿದ್ದು ಕಡು ಬಡವರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಹಾಗೂ ಇತರರಿಗೆ ಮಾದರಿಯಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಮುಜಾಮಿಲ್ ಅಹಮ್ಮದ್ ಖಾನ್ ಮಾತನಾಡಿ, ಸಾಮಾನ್ಯವಾಗಿ ಸರ್ಕಾರ ಸಾಕಷ್ಟು ಸೇವೆ ಸಾರ್ವಜನಿಕರಿಗೆ ನೀಡುತ್ತದೆಯಾದರೂ ಕೆಲವೊಂದು ಸಂದರ್ಭಗಳಲ್ಲಿ ತುರ್ತು ಆರೋಗ್ಯ ಸೇವೆ ಭಾಗವಾಗಿರುವ ಆಂಬ್ಯುಲೆನ್ಸ್ ಸೇವೆ ತತ್‌ಕ್ಷಣಕ್ಕೆ ಸಿಗುವುದು ಕಷ್ಟವಾಗುತ್ತದೆ. ಇತ್ತೀಚಿನ ಅನೇಕ ಪ್ರಾಕೃತಿಕ ಘಟನೆ ಗಮನಿಸಿದರೆ ಸಮಾಜಕ್ಕೆ ಆಂಬ್ಯುಲೆನ್ಸೆ ಸೇವೆ ಅದರಲ್ಲೂ ತೀರಾ ಕಡು ಬಡಕುಟುಂಬಗಳಿಗೆ ಅಗತ್ಯವಿದೆ ಎಂದರು.

ಈ ಟ್ರಸ್ಟ್ ಸೇವೆ ಧರ್ಮ, ಜಾತಿ ಬೇಧವಿಲ್ಲದೆ ಎಲ್ಲಾ ಸಮಾಜದವರಿಗೆ ಮುಕ್ತವಾಗಿದೆ. ತೀರಾ ಕಡು ಬಡ, ಏನೂ ಕೊಡಲಾಗದ ಕುಟುಂಬಗಳಿಗೆ ದೂರದ ಊರುಗಳ ಆಸ್ಪತ್ರೆಗಳಿಗೆ ರೋಗಿಗಳನ್ನು ಸಕಾಲದಲ್ಲಿ ಸಾಗಿಸಲು ಸಂಪೂರ್ಣ ಉಚಿತ ಸೇವೆ ನೀಡಲಾಗುವುದು. ಮದ್ಯಮ ವರ್ಗದವರು ಬಾಡಿಗೆ ರೂಪದಲ್ಲಿ ಅಲ್ಲದಿದ್ದರೂ ಕೊನೆ ಪಕ್ಷ ವಾಹನದ ಇಂಧನ ಮತ್ತು ಚಾಲಕನ ಖರ್ಚು ನೀಡುವ ಶಕ್ತಿಯಿದ್ದವರು ತಮ್ಮ ಕೈಯಿಂದಾದ ಹಣ ಪಾವತಿ ಮಾಡಿ ಸೇವೆ ಪಡೆಯಬಹುದಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ವ್ಯವಸ್ಥೆ ಕೂಡ ಇದ್ದು, ಜೊತೆಗೆ ಫ್ರೀಜರ್ ವ್ಯವಸ್ಥೆ ಕೂಡ ಇದೆ ಎಂದು ತಿಳಿಸಿದರು.

ಆಂಬ್ಯುಲೆನ್ಸ ಸೇವೆಗೆ 9686393788 ಹಾಗೂ 7204439118 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಹಗಲುರಾತ್ರಿ ಸೇವೆ ಪಡೆಯಬಹುದಾಗಿದೆ ಎಂದರು.

ಟ್ರಸ್ಟ್ ಸದಸ್ಯರಾದ ಸರ್ವರ್ ಖಾನ್, ಮಹಮ್ಮದ್ ಆಶ್ರಫ್ ವುಲ್ಲಾ, ಆಲಿಅಕ್ಬರ್, ಮಹಮ್ಮದ್ ಮುಜಾಮಿಲ್, ಅಸದ್ ವುಲ್ಲಾ ಖಾನ್, ಇಮ್ತಿಯಾಜ್, ಜಾಮೀರ್ ಬಾಷಾ, ಹಿದಾಯತ್ ವುಲ್ಲಾ ಖಾನ್, ಅಫ್ಸರ್ ಅಹಮ್ಮದ್, ಇನಾಯತ್ ವುಲ್ಲಾ, ಮುಜ್ಮಿಲ್ ಖಾನ್, ಶಹಬಾಜ್, ಅದ್ನಾನ್, ತೌಶೀಪ್ ಅಹಮ್ಮದ್, ಫೈರೋಜ್ ಖಾನ್, ತನ್ವಿರ್. ಝಡ್, (ಚಾಲಕ) ಇದ್ದರು