ಅರೇಪುರ ಗೇಟ್‌ನಿಂದ ಹಿರೀಕಾಟಿ ಗಡಿ ತನಕ ದೂಳು ಮಯ

| Published : Oct 27 2025, 12:00 AM IST

ಸಾರಾಂಶ

ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಬೇಗೂರು ಬಳಿಯ ಅರೇಪುರ ಗೇಟ್ ನಿಂದ ಹಿರೀಕಾಟಿ ಗಡಿ ತನಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ದೂಳಿನ ಪ್ರಮಾಣ ಹೆಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಬೇಗೂರು ಬಳಿಯ ಅರೇಪುರ ಗೇಟ್ ನಿಂದ ಹಿರೀಕಾಟಿ ಗಡಿ ತನಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ದೂಳಿನ ಪ್ರಮಾಣ ಹೆಚ್ಚಳವಾಗಿದೆ.

ಮೈಸೂರು-ಊಟಿ ಹೆದ್ದಾರಿಯಲ್ಲಿ ಗುಂಡ್ಲುಪೇಟೆ ಕಡೆಯಿಂದ ಕ್ವಾರಿಯ ಬಿಳಿ ಕಲ್ಲು ಹಾಗೂ ಕ್ರಸರ್‌ನ ಉಪ ಖನಿಜಗಳ ತುಂಬಿದ ಟಿಪ್ಪರ್‌ಗಳ ಸಂಚಾರ ಹಾಗೂ ಕ್ವಾರಿಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬಳಿ ಮಣ್ಣಿನ ದೂಳು . ಬೈಕ್, ಸೈಕಲ್, ಎತ್ತಿನಗಾಡಿ, ಗೂಡ್ಸ್ ಆಟೋ, ಬಸ್, ಲಾರಿ, ಟೆಂಪೋ ಹಾಗೂ ಪಾದಚಾರಿಗಳಿಗೆ ಮೆತ್ತಿಕೊಳ್ಳುತ್ತಿದೆ.

ಅಲ್ಲದೆ ಗುಂಡ್ಲುಪೇಟೆ ಕಡೆಯಿಂದ ಬರುವ ಬಿಳಿ ಕಲ್ಲು ಹಾಗೂ ಕ್ರಸರ್‌ನ ಉಪ ಖನಿಜ ತುಂಬಿದ ಟಿಪ್ಪರ್‌ಗಳಲ್ಲಿ ಹೊದಿಕೆ ಮತ್ತು ನೀರನ್ನು ಬಹುತೇಕರು ಹಾಕುವುದಿಲ್ಲ. ಜೊತೆಗೆ ಮಿತಿ ಮೀರಿದ ಭಾರದದೊಂದಿಗೆ ಅತೀ ವೇಗವಾಗಿ ಸಂಚರಿಸುವ ಕಾರಣ ದೂಳು ಬರುತ್ತಿದೆ. ಕ್ರಸರ್‌ನ ಉಪ ಖನಿಜಗಳು ಟಿಪ್ಪರ್‌ಗಳಲ್ಲಿ ಓವರ್ ಲೋಡ್ ತುಂಬಿ ಸಾಗುವಾಗ ಹಿಂದೆ ಬರುವ ಬೈಕ್ ಹಾಗೂ ಜನರ ಕಣ್ಣಿಗೆ ದೂಳು ತುಂಬುತ್ತದೆ.

ಮಿತಿ ಮೀರಿದ ಭಾರ ಹಾಗೂ ಹೊದಿಕೆ ಇಲ್ಲದೆ ಹೆದ್ದಾರಿಯಲ್ಲಿ ಸಂಚರಿಸುವ ಟಿಪ್ಪರ್‌ಗಳ ತಡೆದು ಪರಿಶೀಲನೆ ನಡೆಸುವ ಕೆಲಸವನ್ನೂ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸರು, ಪರಿಸರ ಇಲಾಖೆ ಅಧಿಕಾರಿಗಳು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪತ್ರಿಕೆಗಳಲ್ಲಿ ಅಥವಾ ಸಾರ್ವಜನಿಕರ ದೂರು ಬಂದಾಗ ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರು ತಪಾಸಣೆ ನಡೆಸಿ ಕೈ ತೊಳೆದುಕೊಳ್ಳುತ್ತಾರೆ.ಟಿಪ್ಪರ್‌ಗಳ ಮೇಲೋದಿಕೆ, ನೀರು ಹಾಕಿ ಸಂಚರಿಸುವಂತೆ ಅಧಿಕಾರಿಗಳು ಹೇಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ:

ಮೈಸೂರು-ಊಟಿ ಹೆದ್ದಾರಿಯಲ್ಲಿ ಸಂಚರಿಸುವ ನೆರೆ ರಾಜ್ಯಗಳ ಪ್ರವಾಸಿಗರು ಬಂದು ಹೋಗುವ ಹೆದ್ದಾರಿಯಲ್ಲಿ ದೂಳಿನ ಸಿಂಚನ ಕಂಡು ಜಿಲ್ಲಾಡಳಿತದ ವಿರುದ್ಧ ಅಸಮದಾನ ಹೊರ ಹಾಕಿದ್ದಾರೆ. ತಮಿಳುನಾಡಿನ ಸೆಂದಿಲ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ವಿಶ್ವ ವಿಖ್ಯಾತ ದಸರಾಗೆ ಸಹಸ್ರಾರು ಪ್ರವಾಸಿಗರು ಬರುವ ಹೆದ್ದಾರಿಯಲ್ಲಿ ಈ ರೀತಿಯಲ್ಲಿ ದೂಳು ಬರುತ್ತಿದೆ. ಇದನ್ನು ನಿಲ್ಲಿಸುವ ಕೆಲಸ ತಾಲೂಕು ಆಡಳಿತ ಮಾಡಲಿ ಎಂದು ಸಲಹೆ ನೀಡಿದ್ದಾರೆ.