ಸಾರಾಂಶ
ಪರಿಸರ ಸ್ನೇಹಿ ಪಕ್ಷಿಕೆರೆಯ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್ ಅವರು ಕಳೆದ ಹಲವಾರು ವರ್ಷಗಳಿಂದ ಪರಿಸರ ಸ್ನೇಹಿ ಹಾಗೂ ಮರು ಬಳಕೆಯ ರಾಖಿ, ಸ್ವಾತಂತ್ರ್ಯೋತ್ಸವ ಸಂದರ್ಭ ಪರಿಸರ ಸ್ನೇಜಿ ಪ್ಲಾಗ್ ಸೇರಿದಂತೆ ವಿನೂತನ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.
ಮೂಲ್ಕಿ: ಸದಾ ನೂತನ ಆವಿಷ್ಕಾರ ಮಾಡುತ್ತಿರುವ ಪರಿಸರ ಸ್ನೇಹಿ ಪಕ್ಷಿಕೆರೆಯ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್ ಅವರು ಕಳೆದ ಹಲವಾರು ವರ್ಷಗಳಿಂದ ಪರಿಸರ ಸ್ನೇಹಿ ಹಾಗೂ ಮರು ಬಳಕೆಯ ರಾಖಿ, ಸ್ವಾತಂತ್ರ್ಯೋತ್ಸವ ಸಂದರ್ಭ ಪರಿಸರ ಸ್ನೇಜಿ ಪ್ಲಾಗ್ ಸೇರಿದಂತೆ ವಿನೂತನ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮರು ಬಳಕೆಯ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಇವರು ತಯಾರಿಸಿದ ವಸ್ತುಗಳು ಆನ್ಲೈನ್ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿದೆ. ಈ ಬಾರಿ ತೆಂಗಿನ ಸಿಪ್ಪೆಯ ನಾರಿನಿಂದ (ಕೋಕೋ ಪೀಟ್) ರಾಖಿ ತಯಾರಿಸಿದ್ದು, ಅದರೊಳಗೆ ಟೊಮೆಟೋ, ಸೌತೆಕಾಯಿ, ಮೆಣಸಿನ ಕಾಯಿ, ತುಳಸಿ ಮತ್ತಿತರ ತರಕಾರಿಗಳ ಬೀಜಗಳನ್ನು ಅಳವಡಿಸಿದ್ದಾರೆ. ಟೆರಾಕೋಟ್ ಬಳಸಿ ರಾಖಿಯನ್ನು ನಿರ್ಮಿಸಿದ್ದು, ಉಪಯೋಗಿಸಿದ ಬಳಿಕ ಮಣ್ಣಿನಡಿಯಲ್ಲಿ ಹಾಕಿದಲ್ಲಿ ತೆಂಗಿನ ಸಿಪ್ಪೆಯ ನಾರು (ಕೋಕೋ ಪೀಟ್) ನೀರಿನೊಂದಿಗೆ ಸೇರಿ ಅದರಲ್ಲಿರುವ ತರಕಾರಿ ಬೀಜಗಳ ಮೂಲಕ ಬೇಗನೆ ಗಿಡಗಳು ಬೆಳೆಯಲು ಸಹಕರಿಸುತ್ತದೆ.ಈಗಾಗಲೇ ಹೆಚ್ಚಿನ ಬೇಡಿಕೆಯಿದ್ದು, ನಿತಿನ್ ವಾಸ್ ಅವರು ಉದ್ಯೋಗಕ್ಕೆ ಪಕ್ಷಿಕೆರೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ.ಗಿಡಗಳ ಬೀಜವನ್ನು ಹಾಕುವುದರಿಂದ ರಕ್ಷಾ ಬಂಧನದ ಅಣ್ಣ ತಮ್ಮಂದಿರ ಸಂಬಂಧವು ಗಿಡ ಬೆಳೆಯುವ ಮೂಲಕ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಹಬ್ಬಗಳು ಪರಿಸರ ಸ್ನೇಹಿಯಾಗಿ ಉಳಿಯಬೇಕೆಂಬ ಹಾಗೂ ಪ್ರಕೃತಿ, ಪರಿಸರವನ್ನು ಉಳಿಸುವ ಉದ್ದೇಶವನ್ನು ಹೊಂದಿದ್ದೇವೆ. ದೇಶದ ಮೂಲೆ, ಮೂಲೆಗೆ ಉತ್ಪನ್ನವನ್ನು ಕಳುಹಿಸುತ್ತಿದೆ. ಕಾಶ್ಮೀರ, ಬಂಗಾಳದಿಂದ ಹಿಡಿದು ಎಲ್ಲ ಕಡೆ ನಮ್ಮ ಗ್ರಾಹಕರಿದ್ದು, ಉತ್ತಮ ಬೆಂಬಲ ದೊರೆಯುತ್ತಿದೆ.
। ನಿತಿನ್ ವಾಸ್