ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯುವಸಮೂಹ ವಿಷಯಾಂತರದ ಆಕರ್ಷಣೆಗಳಿಗೆ ಒಳಗಾಗದೆಯೇ, ವಿದ್ಯಾರ್ಜನೆ ಒಂದೇ ಮೂಲಭೂತ ಕರ್ತವ್ಯವಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ಕುಮಾರ್ ಭೂಮರೆಡ್ಡಿ ಹೇಳಿದರು.ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕೋಟೆ ಪೊಲೀಸ್ ಠಾಣೆ ಆಶ್ರಯದಲ್ಲಿ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹದಲ್ಲಿನ ಸಕಾರಾತ್ಮಕ ಯೋಚನೆಗಳು ಕಲುಷಿತಗೊಂಡಾಗ ದೇಶ ಅಧೋಗತಿಗೆ ತಲುಪುತ್ತದೆ. ಕೋಮುಗಲಭೆಗಳಿಗೆ ಯುವಸಮೂಹದ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇಂತಹ ಅಂಧತ್ವಕ್ಕೆ ಒಳಗಾಗದೇ ಸಮಾಜಮುಖಿ ಸಕಾರಾತ್ಮಕ ಆಲೊಚನೆಗಳತ್ತ ಚಿತ್ತಹರಿಸಿ ಎಂದು ಸಲಹೆ ನೀಡಿದರು.ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುವಾಗ ಮೂಲಭೂತ ಕರ್ತವ್ಯಗಳು ನಮ್ಮ ಮುಂದಿದೆ ಎನ್ನುವುದನ್ನು ಸದಾ ನೆನಪಿನಲ್ಲಿಡಿ. ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುವ ಪ್ರತಿಯೊಂದು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸೈಬರ್ ಕ್ರೈಮ್ ಪ್ರತಿದಿನದ ದೈನಂದಿನ ಪ್ರಕರಣಗಳಾಗಿದ್ದು, ತಂತ್ರಜ್ಞಾನವನ್ನು ಸಮಾಜದ ಅಭ್ಯುದಯಕ್ಕೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.
ನಮಗೆ ಬರುವ ಒಟಿಪಿಗಳು ಅತ್ಯಂತ ಗೌಪ್ಯವಾದ ವಿಚಾರವಾಗಿದೆ. ಸೈಬರ್ ಅಪರಾಧಗಳನ್ನು ತಡೆಯಲು ಬಳಕೆದಾರರಾದ ನಮ್ಮಿಂದಲೇ ಸಾಧ್ಯವಿದೆ. ಯಾವುದೇ ಆಕರ್ಷಕ ಕರೆಗಳಿಗೆ ಮಾರುಹೋಗದೇ ವಿಮರ್ಶಿಸಲು ಪ್ರಾರಂಭಿಸಿ. ಇದರಿಂದ ಅನೇಕ ಅಪರಾಧಗಳನ್ನು ತಡೆಯಬಹುದು. ಆಧುನಿಕತೆಯಿಂದ ಎಲ್ಲವೂ ಸಾಧ್ಯ ಎನ್ನುವ ಭ್ರಮೆ ಬೇಡ ಎಂದು ಹೇಳಿದರು.ಪ್ರತಿಯೊಂದು ಪೊಲೀಸ್ ಠಾಣೆ ಸಿಬ್ಬಂದಿಗೆ ಸೈಬರ್ ಅಪರಾಧಗಳ ನಿರ್ವಹಣೆ ಕುರಿತ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧಗಳ ಕುರಿತಾಗಿ ದೂರು ದಾಖಲಿಸಬಹುದು. ವಾಹನಗಳನ್ನು ಚಲಾಯಿಸುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ರಸ್ತೆ ಪ್ರತಿಯೊಬ್ಬ ಜನಸಾಮಾನ್ಯರ ಆಸ್ತಿ. ರಸ್ತೆಯ ಸ್ವಚ್ಚತೆ, ಬಳಕೆ, ಕಾನೂನಿನಾತ್ಮಕ ಉಲ್ಲಂಘನೆಗಳ ಅರಿವು ಅತ್ಯಗತ್ಯ. ಡಿಜಿಲಾಕರ್ ಮೂಲಕ ವಾಹನ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಟೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ರವಿಕುಮಾರ್ ಕರ್ನಾಟಕ ಸ್ಟೇಟ್ ಪೋಲೀಸ್ ಆ್ಯಪ್ ಹಾಗೂ ವಿವಿಧ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ, ಉಪನ್ಯಾಸಕ ಕೆ.ಲಕ್ಷ್ಮಣ ಮತ್ತಿತರರು ಇದ್ದರು.
- - -ಕೋಟ್ ಇಂದಿನ ಯುವಸಮೂಹದಲ್ಲಿ ಸೌಜನ್ಯತೆಯ ಕೊರತೆಯಿದೆ. ಯಾರು ನಮ್ಮನ್ನು ಪ್ರಶ್ನಿಸಬಾರದು ಎಂಬ ನಿರಂಕುಶಮತಿತ್ವ ಬೇಡ. ಇಂತಹ ಹಠಮಾರಿ ಧೋರಣೆಗಳು ನಮ್ಮ ವ್ಯಕ್ತಿತ್ವಗಳ ಉನ್ನತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ಕಾನೂನಿನ ಅಗತ್ಯವಾದ ಅರಿವು ಪಡೆದು ಜವಾಬ್ದಾರಿಯುತ ಪ್ರಜೆಗಳಾಗಿ ವರ್ತಿಸಿ
- ಅನಿಲ್ಕುಮಾರ್ ಭೂಮರೆಡ್ಡಿ, ಎಎಸ್ಪಿ- - - -14ಎಸ್ಎಂಜಿಕೆಪಿ01:
ಶಿವಮೊಗ್ಗದ ಎಸ್.ಆರ್.ನಾಗಪ್ಪ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ, ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿದರು.