ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಗೊಂದಲದ ಗೂಡಾಗಿರುವ ಭೋವಿ ಸಮಾಜ ಅಭಿವೃದ್ಧಿ ನಿಗಮಕ್ಕೆ ಅಧಿಕ ಅನುದಾನ ತರಲು ಶ್ರಮಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗುರುತಿಸಿ ಅರ್ಹರಿಗೆ ಶಾಸಕರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲಾಗುವುದು ಎಂದು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ ನೇರ್ಲಗುಂಟೆ ಭರವಸೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಭೋವಿ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯದ ಮುಖಂಡರು ದಲ್ಲಾಳಿಗಳಾಗಿ ಕೆಲಸ ಮಾಡಬೇಡಿ. ನನ್ನ ಪಕ್ಷನಿಷ್ಠೆ ಗುರುತಿಸಿ ನೀಡಿರುವ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪಾರದರ್ಶಕವಾಗಿ ನಿಭಾಯಿಸುವೆ. ನಾನು ಸಂಸದನಾಗುವ ಆಸೆಯಿದೆ. ಟಿಕೇಟ್ ಸಿಗದ ಕಾರಣ ವಂಚಿತನಾಗಿರುವೆ. ಚಿತ್ರದುರ್ಗದ ಶಾಸಕರ, ಉಸ್ತುವಾರಿ ಸಚಿವರ ಶಿಫಾರಸಿನಂತೆ ಪಕ್ಷ ನನ್ನ ಚಟುವಟಿಕೆ ನಂಬಿ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಸಾಮಾಜಿಕ ನ್ಯಾಯದಡಿ ಸ್ಥಾನಮಾನ ಕಲ್ಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಪ್ರಚಾರಗೊಳಿಸಬೇಕು ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 2 ವರ್ಷಗಳ ನಂತರ ಸಾರಥಿಯಾಗಿರುವ ನಿಗಮ ಮಂಡಳಿ ಅಧ್ಯಕ್ಷರೊಡನೆ ಚರ್ಚಿಸಿ ಸಿಂಹಪಾಲು ಅನುದಾನ ತಂದು ಕ್ಷೇತ್ರದಲ್ಲಿ ಭೋವಿ ಸಮಾಜದ ಶ್ರೇಯೋಭಿವೃದ್ದಿಗೆ ಕಾಳಜಿ ವಹಿಸುವೆ. ಕ್ಷೇತ್ರದಲ್ಲಿ ಭೋವಿ ಮತ್ತು ಛಲವಾದಿ ಸಮಾಜಗಳ ಸಮುದಾಯ ಭವನ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರಿಗೆ ಮನವಿ ಮಾಡಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ. ನನ್ನ ಆಡಳಿತಾವಧಿಯಲ್ಲಿಯೇ ಸಮುದಾಯ ಭವನಗಳ ಕಟ್ಟಡ ನಿರ್ಮಿಸುವೆ ಎಂದು ಭರವಸೆ ನೀಡಿದರು.ಈ ಸಂದರ್ಭ ಕೆಪಿಸಿಸಿ ಎಸ್.ಟಿ. ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಜಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ತಾಲೂಕು ಅಧ್ಯಕ್ಷ ಪುಟ್ಟಪ್ಪ, ವೆಂಕಟೇಶ್, ದೇವರಾಜ್, ಜಯಪ್ಪ, ವಕೀಲ ಡಿ.ಶ್ರೀನಿವಾಸ್, ಬಸವರಾಜ್, ಶಿಲ್ಪಾ, ದಾಸಪ್ಪ, ಪಲ್ಲಾಗಟ್ಟೆ ವೀರೇಶ್, ಬಸವರಾಜ್, ಹನುಮಂತಪ್ಪ ಇತರರು ಇದ್ದರು.
- - --20ಜೆಜಿಎಲ್.2:
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಭೋವಿ ಸಮಾಜದಿಂದ ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ ನೇರ್ಲಗುಂಟೆ ಅವರನ್ನು ಸನ್ಮಾನಿಸಲಾಯಿತು.