ಗಜೇಂದ್ರಗಡ: ಕೃತಕ ಬಣ್ಣ(ಟೇಸ್ಟಿಂಗ್ ಪೌಡರ್) ಹಾಗೂ ನಿಷೇಧಿತ ವಸ್ತುಗಳ ಬಳಸಿ ಎಗ್ ರೈಸ್ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ರಸ್ತೆ ಬದಿಯ ಎಗ್ ರೈಸ್ ಅಂಗಡಿಗಳ ಮೇಲೆ ಶನಿವಾರ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ದಿಢೀರ್ ದಾಳಿ ನಡೆಸಿದರು. ಈ ವೇಳೆ ನಿಷೇಧಿತ ವಸ್ತುಗಳನ್ನು ಬಳಸಿದರೆ ಅಂಗಡಿಗಳನ್ನು ಬಂದ್ ಮಾಡುವುದಾಗಿ ಎಚ್ಚರಿಸಿದರು.ಪಟ್ಟಣದಲ್ಲಿ ಕೆಲ ತಿಂಗಳ ಹಿಂದೆ ತಹಸೀಲ್ದಾರ್ ನೇತೃತ್ವದಲ್ಲಿ ಬೀದಿಬದಿ ಎಗ್ರೈಸ್ ಸೇರಿ ಹೋಟೆಲ್ಗಳಲ್ಲಿ ಅಸ್ವಚ್ಛತೆ, ನಿಷೇಧಿತ ವಸ್ತುಗಳ ಬಳಕೆ ಹಾಗೂ ಪರವಾನಗಿ ಪಡೆಯದ ಆರೋಪದ ಹಿನ್ನೆಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಸಹ ದಾಳಿ ನಡೆಸಿ ನಿಷೇಧಿತ ವಸ್ತುಗಳ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅಧಿಕಾರಿಗಳ ಎಚ್ಚರಿಕೆಗೆ ಕಿಮ್ಮತ್ತು ಕೊಡದ ಅಂಗಡಿಕಾರರು ಯಥೇಚ್ಛವಾಗಿ ನಿಷೇಧಿತ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಪುರಸಭೆ ಮುಖ್ಯಾಧಿಕಾರಿ ದಾಳಿ ನಡೆಸಿ ಹೋಟೆಲ್ ನಡೆಸುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಹೆಚ್ಚುತ್ತಿರುವ ಎಗ್ರೈಸ್ ಅಂಗಡಿಗಳು: ಪಟ್ಟಣದಲ್ಲಿ ಪ್ರಮುಖ ರಸ್ತೆಗಳಾದ ಕುಷ್ಟಗಿ ಹಾಗೂ ರೋಣ, ಹಾಗೂ ಬಸ್ ನಿಲ್ದಾಣ ಸೇರಿ ಪ್ರಮುಖ ವೃತ್ತ ಹಾಗೂ ರಸ್ತೆಗಳ ಬೀದಿಬದಿಯಲ್ಲಿ ನಾಯಿ ಕೊಡೆಯಂತೆ ಎಗ್ರೈಸ್ ಅಂಗಡಿಗಳು ಆರಂಭವಾಗುತ್ತಿವೆ. ಆಹಾರ ಸೇವಿಸಲು ತೆರಳುವ ಗ್ರಾಹಕರಿಗೆ ನೀಡುವ ಎಗ್ರೈಸ್ ಸೇರಿ ಇತರ ಆಹಾರ ಪದಾರ್ಥಗಳಲ್ಲಿ ನಿಷೇಧಿತ(ಟೇಸ್ಟಿಂಗ್ ಪೌಡರ್) ಬಳಕೆ ಮಾಡುವುದರಿಂದ ಗ್ರಾಹಕರು ಪದೇ, ಪದೇ ಅದೇ ಹೋಟೆಲ್ಗಳಿಗೆ ತೆರಳುವಂತಾಗುತ್ತಿದೆ. ಪರಿಣಾಮ ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಹಾಗೂ ಎಗ್ರೈಸ್ ಅಂಗಡಿಗಳ ಸುತ್ತಲಿನ ವಾಣಿಜ್ಯ ಮಳಿಗೆಗಳಲ್ಲಿನ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ.ಪರವಾನಗಿ ಪಡೆಯದ ಅಂಗಡಿಗಳು: ಪಟ್ಟಣದಲ್ಲಿ ಆರಂಭವಾಗಿರುವ ಅಂದಾಜು ೧೦೦ ಅಂಗಡಿಗಳಲ್ಲಿ ಭಾಗಶಃ ಅಂಗಡಿಗಳು ಪರವಾನಗಿ ಪಡೆದಿಲ್ಲ. ಪರಿಣಾಮ ಪರವಾನಗಿ ಪಡೆಯುವಾಗ ಅಧಿಕಾರಿಗಳು ನೀಡುವ ಎಚ್ಚರಿಕೆಗಳು ಅಂಗಡಿಕಾರರಿಗೆ ತಿಳಿದಿರುತ್ತವೆ. ಆದರೆ ಇಲ್ಲಿ ಪರವಾನಗಿ ಪಡೆಯದ ಪರಿಣಾಮ ಸ್ವಚ್ಛತೆ ಸೇರಿ ಇತರ ನಿಯಮಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿ ಎಗ್ರೈಸ್ ಸೇರಿ ಇತರ ಹೋಟೆಲ್ಗಳನ್ನು ನಡೆಸಲಾಗುತ್ತಿದೆ. ಇತ್ತ ಇಂತಹ ಬೀದಿಬದಿಯ ಎಗ್ರೈಸ್ ಅಂಗಡಿಗಳಿಗೆ ನಿಷೇಧಿತ ವಸ್ತುಗಳನ್ನು ಪೂರೈಸುತ್ತಿರುವ ಅಂಗಡಿಗಳ ಮೇಲೆ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಿದ್ದಾರೆ.ಕಾನೂನು ಕ್ರಮ: ಪಟ್ಟಣದಲ್ಲಿ ಎಗ್ರೈಸ್ ಸೇರಿ ಇತರ ಹೋಟೆಲ್ಗಳಲ್ಲಿ ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳ ಬಳಕೆ ಕುರಿತ ದೂರಿನ ಹಿನ್ನೆಲೆ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದ್ದು, ಘಟನೆ ಪುನರಾವರ್ತನೆಯಾದರೆ ಅಂಗಡಿಗಳನ್ನು ಬಂದ್ ಮಾಡಿಸುವುದರ ಜತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದರು.