ಸಾರಾಂಶ
ಪ್ರವಾದಿ ಮಹಮ್ಮದ್ ಪೈಗಂಬರ್(ಸ.ಅ)ರವರ ಜನ್ಮದಿನದ ಅಂಗವಾಗಿ ಮುಸ್ಲಿಂ ಧರ್ಮೀಯರು ನಗರ, ಜಿಲ್ಲಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದ್ದಾರೆ.
- ಮುಸ್ಲಿಂ ಧರ್ಮೀಯರಿಂದ ಸಾಮೂಹಿಕ ಪ್ರಾರ್ಥನೆ । ಶುಭಾಶಯಗಳ ವಿನಿಮಯ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ, ಸೆ.5ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ) ರವರ ಜನ್ಮದಿನದ ಅಂಗವಾಗಿ ಮುಸ್ಲಿಂ ಧರ್ಮೀಯರು ನಗರ, ಜಿಲ್ಲಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಇಲ್ಲಿನ ಬಾಷಾ ನಗರ, ಆಜಾದ್ ನಗರ, ಇಮಾಂ ನಗರ, ಬೀಡಿ ಲೇಔಟ್, ಆಶ್ರಯ ಕಾಲನಿ, ವಿನೋಬ ನಗರ, ಕೆಟಿಜೆ ನಗರ, ನಿಟುವಳ್ಳಿ, ಭಗತ್ ಸಿಂಗ್ ನಗರ, ಲೆನಿನ್ ನಗರ, ಶಿವ ನಗರ, ಲೇಬರ್ ಕಾಲನಿ, ರಜಾವುಲ್ ಮುಸ್ತಫಾ ನಗರ, ಎಸ್ಪಿಎಸ್ ನಗರ, ಜಾಲಿ ನಗರ, ದೇವರಾಜ ಅರಸು ಬಡಾವಣೆ ಸೇರಿದಂತೆ ವಿವಿಧೆಡೆಯಿಂದ ಮೆರವಣಿಗೆ ಹೊರಟು, ಹಳೆ ಪಿಬಿ ರಸ್ತೆಯ ಖಬರಸ್ಥಾನ ಬಳಿ ಮುಸ್ಲಿಂ ಧರ್ಮೀಯರು ಸೇರಿದರು. ನಂತರ ಪರಸ್ಪರರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಚಿಕ್ಕಪುಟ್ಟ ಮಕ್ಕಳಿಂದ ಹಿರಿಯ ನಾಗರೀಕವರೆಗೆ ಮುಸ್ಲಿಂ ಧರ್ಮೀಯರು ಸಂಭ್ರಮದಿಂದ ಭಾಗವಹಿಸಿದ್ದರು. ರಜಾವುಲ್ ಮುಸ್ತಫಾ ನಗರದಿಂದ ಬಾಷಾ ನಗರ ಮುಖ್ಯರಸ್ತೆ ಮಾರ್ಗವಾಗಿ ಮಂಡಿಪೇಟೆ, ಬಾರ್ ಲೈನ್ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಕೆಆರ್ ರಸ್ತೆ, ಶಾಂತಿ ಟಾಕೀಸ್ ರಸ್ತೆ, ಅರಳೀ ಮರ ವೃತ್ತದ ಮುಖಾಂತರ ಸಾಗಿ ಮಿಲ್ಲತ್ ಶಾಲಾ ಮೈದಾನದಲ್ಲಿ ಮೆರವಣಿಗೆ ಮುಕ್ತಾಯವಾಯಿತು. ಮೆರವಣಿಗೆಯುದ್ದಕ್ಕೂ ಹಸಿರು ಬಾವುಟ, ಧಾರ್ಮಿಕ ಬಾವುಟಗಳನ್ನು ಹಾರಿಸುತ್ತಾ, ಮಕ್ಕಳು, ಯುವ ಜನರು ಜಯಕಾರ ಹಾಕುತ್ತಾ ಸಾಗಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯುದ್ದಕ್ಕೂ ಸೇರಿದ್ದರು. ವಿವಿಧ ವೃತ್ತಗಳಲ್ಲಿ ಮೆರವಣಿಗೆ ಸ್ವಲ್ಪ ಹೊತ್ತು ನಿಂತು ಸಾಗುತ್ತಿತ್ತು. ಸಣ್ಣ ಮಕ್ಕಳಿಂದ ವಯೋವೃದ್ಧವರೆಗೆ ಘೋಷಣೆ ಕೂಗುತ್ತಿದ್ಜರು. ಮುಸ್ಲಿಂ ಮುಖಂಡರಾದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಸೈಯದ್ ಸೈಫುಲ್ಲಾ, ಪಾಲಿಕೆ ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ಮಾಜಿ ಸದಸ್ಯರಾದ ಎ.ಬಿ.ರಹೀಂ ಸಾಬ್, ಷಫೀಕ್ ಪಂಡಿತ್, ಜೆ.ಅಮಾನುಲ್ಲಾ ಖಾನ್, ಯಾಸೀರ್ ಪೀರ್ ರಜ್ವಿ, ಅನ್ವರ್ ಸಾಬ್, ನಜೀರ್ ಸಾಬ್, ಸಾದಿಕ್ ಪೈಲ್ವಾನ್, ಅಯೂಬ್ ಪೈಲ್ವಾನ್, ಎ.ಬಿ.ಹಬೀಬ್ ಸಾಬ್, ಮುನ್ನಾ ಹರ್ಷದ್, ಸೈಯದ್ ಚಾರ್ಲಿ, ಸಿರಾಜ್ ಅಹಮ್ಮದ್, ಪತ್ರಕರ್ತರಾದ ಎ.ಫಕೃದ್ದೀನ್, ಸಿಕಂದರ್, ಮಹಮ್ಮದ್ ರಫೀಕ್, ನೂರುಲ್ಲಾ, ವಕೀಲ ರಿಜ್ವಿ ಖಾನ್, ಅಸ್ಲಂಖಾನ್, ಗೌಸ್, ಖಾದರ್ ಬಾಷಾ, ವಿಶ್ವ ಕರವೇ ಮುಖಂಡರಾದ ಅಮ್ಜದ್ ಅಲಿ, ಮೆಹಬೂಬ್, ಮಹಮ್ಮದ್ ರಿಜ್ವಿ ಸೇರಿದಂತೆ ಸಮಾಜ ಬಾಂಧವರು ಮೆರವಣಿಗೆಯಲ್ಲಿದ್ದರು.