ಸಮಾಜದಲ್ಲಿ ಅಸಮಾನತೆ ಹೋಗುವವರೆಗೂ ಹೋರಾಟ ಮಾಡುವೆ, ಆದರೆ, ಚುನಾವಣೆಯಲ್ಲಿ ಮಾತ್ರ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ಸಮಾಜದಲ್ಲಿ ಅಸಮಾನತೆ ಹೋಗುವವರೆಗೂ ಹೋರಾಟ ಮಾಡುವೆ, ಆದರೆ, ಚುನಾವಣೆಯಲ್ಲಿ ಮಾತ್ರ ನಿಲ್ಲುವುದಿಲ್ಲ. ನನಗೆ ವಯಸ್ಸಾಯ್ತು ಅಂತ ನಿಲ್ಲುವುದಿಲ್ಲ ಎನ್ನುತ್ತಿಲ್ಲ. ಆದರೆ, ಚುನಾವಣೆ ಈಗ ದುಬಾರಿಯಾಗಿದೆ. ನಿಮ್ಮನ್ನು ಕೈಬಿಡುವುದಿಲ್ಲ. ನಿಮ್ಮ ಜೊತೆ ನಾನಿರುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಚುನಾವಣೆ ವ್ಯವಸ್ಥೆ ಬಹಳ ದುಬಾರಿಯಾಗುತ್ತಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಯ್ತು ಅನ್ನೋ ಕಾರಣಕ್ಕೆ ಚುನಾವಣಾ ನಿಲ್ಲಲ್ಲ ಎಂದು ಹೇಳುತ್ತಿಲ್ಲ. ಚುನಾವಣೆ ವ್ಯವಸ್ಥೆ ಬಹಳ ಹದೆಗೆಟ್ಟಿದೆ. ಆ ಕಾರಣದಿಂದ ಹೇಳಿದ್ದೇನೆಯೇ ಹೊರತು ಬೇರೆ ಕಾರಣದಿಂದಲ್ಲ. ನಾನೂ ನಿಮ್ಮವನೆ. ನಿಮ್ಮಲ್ಲಿ ಒಬ್ಬನಾಗಿ ಈ ಹೋರಾಟವನ್ನು ಈಗಲೂ, ಮುಂದೆಯೂ ಮಾಡುತ್ತೇನೆ. ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ, ಆದರೆ, ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತಿಯಾಗುತ್ತೇನೆ ಎಂದರು.

ಸಾವಿರಾರು ಮಂದಿ ಕೂಗಿದ್ರೂ ನಿರ್ಧಾರ ಬದಲಿಲ್ಲ:

ಸಮಾವೇಶದಲ್ಲಿದ್ದ ಸಾವಿರಾರು ಮಂದಿ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂದು ಕೂಗಿದರೂ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ಮತ್ತೆ ಇದೇ ಮಾತು ಪುನರುಚ್ಚರಿಸಿದರು.

ತಾನು ಹಿಂದುಳಿದ ಜಾತಿಯವನು ಎಂದು ಹೇಳಿಕೊಳ್ಳಲು ಯಾವುದೇ ಮುಜುಗರ ಇಲ್ಲ. ಏಕೆಂದರೆ, ಈ ದೇಶದಲ್ಲಿ ಬಹಳ ವರ್ಷ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆ ಇತ್ತು. ಚಾತುರ್ವರ್ಣ ಪದ್ಧತಿ ಜಾರಿಯಲ್ಲಿತ್ತು. ನಾನು ಶೂದ್ರ. ಲಿಂಗಾಯತರು, ಒಕ್ಕಲಿಗರೂ ನಾವೆಲ್ಲರೂ ಶೂದ್ರರೇ. ಚಾತುರ್ವರ್ಣ ಪದ್ದತಿಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರಿಗೆ ಮಾತ್ರ ವಿದ್ಯೆ ಕಲಿಯಲು ಅವಕಾಶ ಇತ್ತು. ಉಳಿದವರು ದಡ್ಡರಾಗಿದ್ದರು ಎಂದರ್ಥವಲ್ಲ, ಆದರೆ, ಅವರಿಗೆ ಅವಕಾಶ ಇರಲಿಲ್ಲ ಎಂದರು.

ಎಲ್ಲರಿಗೂ ಆಗಲೇ ಸಮಾನ ಅವಕಾಶ ಒದಗಿಸಿಕೊಟ್ಟಿದ್ದರೆ, ಈ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗುತ್ತಿರಲಿಲ್ಲ. ಶೂದ್ರರು ಶಿಕ್ಷಣದಿಂದ ಅವಕಾಶಗಳಿಂದ ವಂಚಿತರಾದ್ದರಿಂದ ಇವೆಲ್ಲರೂ ಅಸಮಾನತೆಗೆ, ಅವಮಾನಕ್ಕೆ ಒಳಗಾಗಲು ಕಾರಣವಾಯಿತು. ನಾನು ವಿದ್ಯಾರ್ಥಿ ದೆಸೆಯಿಂದಲೂ ಅಸಮಾನತೆ ವಿರುದ್ಧ ಹೋರಾಡುತ್ತಿದ್ದೇನೆ. ಬಹಳ ಕಷ್ಟಪಟ್ಟು ಓದಿ, ಕಾನೂನು ಪದವಿ ಪಡೆದು, ನಂತರ ರಾಜಕಾರಣಿಯಾಗಿ, ಹಿಂದುಳಿದ ಜಾತಿಗಳು, ಶೋಷಿತ ವರ್ಗದವರು ಯಾರ್‍ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೋ, ಸಮಾಜದಲ್ಲಿರುವ ಎಲ್ಲಾ ಬಡವರು ಅವರೆಲ್ಲರ ಪರ ಹೋರಾಡುತ್ತೇನೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು. ಯಾರೂ ವಂಚಿತರಾಗಬಾರದು, ಯಾರೂ ದೌರ್ಜನ್ಯಕ್ಕೆ ಒಳಗಾಗಬಾರದು, ನಾನು ಅಸಮಾನತೆ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ ಧ್ವನಿ ಎತ್ತುತ್ತೇನೆ. ನೀವೆಲ್ಲರೂ ಕಳೆದ ನಾಲ್ಕು ಐದು ದಶಕಗಳಿಂದ ನನ್ನನ್ನು ಬೆಂಬಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಬೇಕು. ಇದು ನನ್ನ ಮನದಾಳದ ಅನಿಸಿಕೆ, ನೀವು ಅಭಿನಂದಾನಾರ್ಹರು, ನಾನಲ್ಲ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್, ಸಚಿವರಾದ ಸಂತೋಷ್ ಲಾಡ್, ಮಧು ಬಂಗಾರಪ್ಪ, ಭೈರತಿ ಸುರೇಶ್, ಪುಟ್ಟರಂಗಶೆಟ್ಟಿ, ಶಾಸಕರಾದ ಪ್ರದೀಪ್ ಈಶ್ವರ್, ರವಿಶಂಕರ್, ಶ್ರೀನಿವಾಸ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಂತರಾಜು ವರದಿ ಜಾರಿಯಾಗಲೇಬೇಕು:

ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಧ್ಯಯನ ಮಾಡಿರುವ ಕಾಂತರಾಜು ವರದಿ ಜಾರಿಯಾಗಲೇಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಹಿಂದೆ 2013ರಲ್ಲಿ ಕಾಂತರಾಜು ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸಮೀಕ್ಷೆ ಮಾಡಿಸಿದ್ದೆ, ಆದರೆ, ನನ್ನ ಅವಧಿಯಲ್ಲಿ ವರದಿ ಸಿದ್ಧವಾಗಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ವರದಿ ತೆಗೆದುಕೊಳ್ಳುತ್ತೇನೆ ಎಂದರೂ ಕುಮಾರಸ್ವಾಮಿ ಒಪ್ಪಲಿಲ್ಲ. ಖಂಡಿತವಾಗಿ ಬೇಡ ಎಂದು ಬಿಟ್ಟರು. ಆದ್ದರಿಂದ ಕಾಂತರಾಜು ವರದಿ ಅಲ್ಲಿಗೆ ನಿಂತಿತು ಎಂದು ವಿವರಿಸಿದರು.ನಂತರ 2023ರಲ್ಲಿ ಮುಖ್ಯಮಂತ್ರಿಯಾದಾಗ ಹೊಸದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮಧುಸೂದನ್ ನಾಯಕ್ ಅಧ್ಯಕ್ಷರಾದರು, ಅವರು ವರದಿ ಕೊಟ್ಟಿದ್ದಾರೆ. ಆ ವರದಿಯನ್ನು ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಇಳಿಯುವಾಗ ಸ್ವೀಕರಿಸಿದ್ದೇನೆ, ಆದರೆ, ನ್ಯಾಯಾಲಯದಲ್ಲಿ ಅದನ್ನು ಜಾರಿ ಮಾಡಬಾರದು, ಅದನ್ನು ಬಹಿರಂಗಪಡಿಸಬಾರದು ಎಂದು ಆದೇಶ ನೀಡಿದೆ. ಈ ಆದೇಶವನ್ನು ಹೇಗಾದರೂ ಮಾಡಿ ತೆರವು ಮಾಡಿಸಿ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಅವರಿಗೆ ಹೇಳಿದ್ದೇನೆ. ನ್ಯಾಯಾಲಯ ಅನುಮತಿ ಕೊಟ್ಟರೆ, ನನಗೆ ವಿಶ್ವಾಸ ಇದೆ, ಈಗಿನ ಮುಖ್ಯಮಂತ್ರಿ ನನ್ನ ಮಾತುಗಳನ್ನು ಕೇಳುತ್ತಾರೆ. ಈ ವರದಿ ಜಾರಿ ಮಾಡುತ್ತಾರೆ. ಆಗ ಮಾತ್ರ ಎಲ್ಲಾ ಹಿಂದುಳಿದ, ದಲಿತ, ಅಲ್ಪಸಂಖ್ಯಾತರಿಗೆ ಶೇ.75 ರಷ್ಟು ಮೀಸಲಾತಿ ದೊರೆಯಬೇಕು. ಆಗ ಮಾತ್ರ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆತು, ಸಮಸಮಾಜ ನಿರ್ಮಾಣವಾಗುತ್ತದೆ ಎಂದರು.ಕೋಟ್‌;

ಹಿಂದೆ 2013ರಲ್ಲಿ ಕಾಂತರಾಜು ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸಮೀಕ್ಷೆ ಮಾಡಿಸಿದ್ದೆ, ಆದರೆ, ನನ್ನ ಅವಧಿಯಲ್ಲಿ ವರದಿ ಸಿದ್ಧವಾಗಲಿಲ್ಲ. ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಧ್ಯಯನ ಮಾಡಿರುವ ಕಾಂತರಾಜು ವರದಿ ಜಾರಿಯಾಗಲೇಬೇಕು.-ಸಿದ್ದರಾಮಯ್ಯ, ಮುಖ್ಯಮಂತ್ರಿ.