ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾಯಕಯೋಗಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಒಗ್ಗಟ್ಟಿನಿಂದ ಸೋದರ ಮನೋಭಾವದಿಂದ ಬದುಕು ನಡೆಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತದಿಂದ ನಡೆದ ಬಸವಣ್ಣ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ ಅವರು ಪ್ರಜಾಪ್ರಭುತ್ವವಾದಿ, ಆರ್ಥಿಕ ತಜ್ಞ, ಸಮಸಮಾಜ ನಿರ್ಮಾತೃ ಎಂದರು.
ತತ್ವಜ್ಞಾನಿ, ಕ್ರಾಂತಿಯೋಗಿ, ಮಹಾನ್ ಮಾನವವಾದಿಯಾಗಿ ಸಮಾಜದಲ್ಲಿ ಅಡಗಿದ್ದ ಜಾತಿ, ಧರ್ಮ, ಅಸ್ಪೃಶ್ಯತೆ, ಅನಾಚಾರ ತೊಡೆದು ಹಾಕಿ ಸಮಸಮಾಜ ನಿರ್ಮಾಣ ಮಾಡಲು ಹೋರಾಟ ನಡೆಸಿದರು. ಬಸವಣ್ಣ ಅವರ ತತ್ವ, ಸಿದ್ಧಾಂತಗಳನ್ನು ನಾವು ಬರಿ ಮಾತಿನಲ್ಲಿ ತೋರಿಸದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.ತಾಲೂಕು ಅಧ್ಯಕ್ಷ ಶಿವಕುಮಾರ್ ಮಾತನಾಡಿ, 12 ನೇ ಶತಮಾನದಲ್ಲಿ ಬಸಣ್ಣ ಅವರು ಜಾತಿ-ಧರ್ಮದ ವಿರುದ್ಧ ಹೋರಾಟ ನಡೆಸಿ ಬ್ರಾಹ್ಮಣ ಸಮುದಾಯದಿಂದ ಹೊರಬಂದು ಲಿಂಗಾಯದ ಧರ್ಮಸ್ಥಾಪನೆ ಮಾಡಿದರು. 25 ಸಾವಿರಕ್ಕೂ ಅಧಿಕ ವಚನ ರಚಿಸಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದರು.
ಬಸವಣ್ಣರಂತಹ ಇಂತಹ ಮಹಾನ್ ನಾಯಕರ ಆದರ್ಶಗಳು ಜೀವಂತವಾಗಿ ಉಳಿಯಬೇಕಿದೆ. ಪಟ್ಟಣದಲ್ಲಿ ಬಸವ ಭವನ ನಿರ್ಮಾಣಕ್ಕೆ ಕ್ರಮವಹಿಸಬೇಕು. ಜೊತೆಗೆ ಪಟ್ಟಣದ ಯಾವುದಾದರು ಒಂದು ವೃತ್ತಕ್ಕೆ ಅವರ ಹೆಸರಿಟ್ಟು ಬಸವಣ್ಣ ಅವರ ಪ್ರತಿಮೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ವೀ.ಶೈ.ಲಿ.ಮ.ಸ.ಜಿಲ್ಲಾಧ್ಯಕ್ಷ ಎಸ್.ಆನಂದ್ ಮಾತನಾಡಿ, ಬಸವಣ್ಣ ನವರ ಜಯಂತಿ ಮೂಲಕ ಕಾಯಕವೇ ಕೈಲಾಸ ಎಂಬ ಬಸವಣ್ಣ ಅವರ ಆದರ್ಶ, ವಚನಗಳ ಮಹತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ಬಸವಣ್ಣ ಅವರ ಜಯಂತಿಗೆ ಅರ್ಥಬರುತ್ತಿದೆ. ಹಾಗಾಗಿ ಸಮಾಜದ ಎಲ್ಲರು ಬಸವಣ್ಣ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಎಸ್.ಎ.ಮಲ್ಲೇಶ್, ದ್ಯಾವಪ್ಪ, ಜಗದೀಶ್, ಕೈಲಾಸಮೂರ್ತಿ, ಹಾಗನಹಳ್ಳಿ ಗೋಪಾಲ್ ಸೇರಿದಂತೆ ಹಲವರು ಮಾತನಾಡಿದರು.ಈ ವೇಳೆ ಉಪತಹಸೀಲ್ದಾರ್ ಪ್ರಕಾಶ್, ಸಂತೋಷ್, ಟಿಎಪಿಸಿಎಂಎಸ್ ನಿರ್ದೇಶಕ ಪಿ.ಎಲ್.ಆದರ್ಶ, ಟಿಎಚ್ಓ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್ಪೆಕ್ಟರ್ ಉಮೇಶ್, ರೈತಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಉಪಪ್ರಾಂಶುಪಾಲ ಮಹದೇವಪ್ಪ, ದಸಂಸ ಮುಖಂಡರಾದ ಅಲ್ಪಳ್ಳಿ ಗೋವಿಂದಯ್ಯ, ಕಣಿವೆರಾಮು, ಅಂಕಯ್ಯ, ವೀರಶೈವ ಸಮುದಾಯ ಉಪಾಧ್ಯಕ್ಷ ಜಯಣ್ಣ, ಖಜಾಂಚಿ ಕಲಿಗಣೇಶ್, ಪ್ರ.ಕಾರ್ಯದರ್ಶಿ ಹರೀಶ್ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.