ಉಳ್ಳಾಲ: ಪರಿಸರ ಸಂರಕ್ಷಣೆಯ ಜೊತೆಗೆ ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯೊಂದಿಗೆ ಸುಸ್ಥಿರ ಅಭಿವೃದ್ಧಿಯಡೆಗೆ ಒತ್ತು ನೀಡಿ ಮುನ್ನಡೆಯುವುದು ಇಂದಿನ ಅಗತ್ಯವಾಗಿದೆ. ಈ ‌ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಅಭಿವೃದ್ಧಿಯ ಚಿಂತನೆಗಳಿಗೆ ಪೂರಕವಾಗಿದೆ ಎಂದು ಕರ್ನಾಟಕ ಅದಾನಿ ಗ್ರೂಪ್ ನ ಅಧ್ಯಕ್ಷರಾದ ಕಿಶೋರ್ ಕುಮಾರ್ ಆಳ್ವ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ‘ವಿಕಸಿತ ಭಾರತ -2047’ ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ‘ಮ್ಯಾಗ್ನಂ’ ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ಸಾಂಸ್ಕೃತಿಕ ಉತ್ಸವವನ್ನು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು.ಮಂಗಳೂರು ವಿವಿಯ ವಿಶ್ರಾಂತ ಕುಲಸಚಿವ ರಾಜು ಮೊಗವೀರ ಅವರು, ಭಾರತವು ಸ್ವಾತಂತ್ರ ನಂತರ ಪಂಚವಾರ್ಷಿಕ ಯೋಜನೆಯ ಮೂಲಕ ದೇಶದ ಅಭಿವೃದ್ಧಿಯ ನೀತಿಗಳನ್ನು ಜಾರಿಗೆ ತಂದಿತ್ತು. ಆದರೆ ಈಗ ಭಾರತ ಬದಲಾಗಿದೆ. ಇದೀಗ ವಿಕಸಿತ ಭಾರತ -2047 ಮಹತ್ವಕಾಂಕ್ಷೆಯ ಯೋಜನೆಯು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು. ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಸ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಆನಂದ ಅವರು ವರ್ಚುವಲ್ ಮೀಡಿಯಾ ಮೂಲಕ ಮಾತನಾಡಿದರು. ಎಎಂಸಿಎ ಅಧ್ಯಕ್ಷ ಪ್ರೊ.ಉಮಪ್ಪ ಪೂಜಾರಿ ಮಾತನಾಡಿದರು.

ಪ್ರಾಧ್ಯಾಪಕ ಪ್ರೊ.ಪುಟ್ಟಣ್ಣ, ಸಮ್ಮೇಳನದ ಸಹ ಸಂಘಟನಾ ಕಾರ್ಯದರ್ಶಿ ಡಾ.ರೋಶನಿ ಯಶವಂತ್, ಪ್ರಾಧ್ಯಾಪಕರಾದ‌ ಪ್ರೊ.ಮುನಿರಾಜು, ಪ್ರೊ.ವೇದವ ಪಿ, ಪ್ರೊ.ಪರಮೇಶ್ವರ, ಪ್ರೊ.ಪ್ರೀತಿ ಕೀರ್ತಿ ಡಿಸೋಜ, ಉಪನ್ಯಾಸಕರಾದ ಡಾ.ದಿನಕರ, ವೈಶಾಲಿ, ಲಹರಿ ಮತ್ತಿತರರಿದ್ದರು.ವಿಭಾಗದ ಅಧ್ಯಕ್ಷ ಪ್ರೊ.ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ನಾಯಕ ಸುದರ್ಶನ ಮ್ಯಾಗ್ನಂನ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಡಾ.ರಮ್ಯ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಪಲ್ಲವಿ ಜೆ ವಂದಿಸಿದರು. ಸುಶ್ಮಿತಾ ಮತ್ತು ಸ್ನೇಹ ನಿರೂಪಿಸಿದರು.