ಕನ್ನಡಪ್ರಭ ವಾರ್ತೆ, ಬಾಗೇಪಲ್ಲಿ:
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವುದಲ್ಲದೆ ಮುಂದಿನ ದಿನಗಳಲ್ಲಿ ಸುಂದರ ಪಟ್ಟಣವನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ಸಂತೆಮೈದಾನದಲ್ಲಿ 2 ಕೋಟಿ 70 ಲಕ್ಷ ರು. ವೆಚ್ಚದಲ್ಲಿ ಪುರಸಭೆ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಳೇ ಪುರಸಭೆ ಕಾರ್ಯಾಲಯದ ಜಾಗದಲ್ಲಿ ಪುರಸಭೆಗೆ ಆದಾಯ ತರುವ ನಿಟ್ಟಿನಲ್ಲಿ ಸುಮಾರು 10 ಕೋಟಿ ರು.ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಇದರಿಂದ ಪಟ್ಟಣದ ಜನತೆಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದರು.ರಸ್ತೆ, ಚರಂಡಿ, ವಿದ್ಯುದ್ದೀಪ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯಗಳನ್ನು ಪಟ್ಟಣದ ಜನತೆಗೆ ಒದಗಿಸುವ ಮೂಲಕ ಪಟ್ಟಣದ ಸರ್ವತೋಮುಖ ಅಭಿವೃದ್ಧಿಪಡಿಸುವುದರ ಜೊತೆಗೆ ಸುಂದರ ಪಟ್ಟಣವನ್ನಾಗಿಸಲು ಒತ್ತು ನೀಡುವುದಾಗಿ ತಿಳಿಸಿದ ಅವರು ಇಲ್ಲಿನ ಪುರಸಭೆ ನೂತನ ಕಾರ್ಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಎ.ಶ್ರೀನಿವಾಸ್, ರೇಷ್ಮಾಭಾನು, ಮಾಜಿ ಸದಸ್ಯರಾದ ಎ .ನಂಜುಂಡಪ್ಪ, ಅಶೋಕ ರೆಡ್ಡಿ, ಗಡ್ಡಂ ರಮೇಶ್, ಜಬೀವುಲ್ಲಾ, ಮಹಮ್ಮದ್ ನೂರುಲ್ಲಾ, ಶ್ರೀನಾಥ್, ಕಾಂಗ್ರೆಸ್ ಮುಖಂಡ ಪಿ.ಮಂಜುನಾಥರೆಡ್ಡಿ, ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭೆ ಸಿಬ್ಬಂದಿಅತ್ತಾವುಲ್ಲಾ, ಶ್ರೀಧರ್, ಕೃಷ್ಣಪ್ಪ, ಮಹಮ್ಮದ್ ಪೀರ್ ಸೇರಿ ಕಾಂಗ್ರೆಸ್ ನಾಯಕರು ಇದ್ದರು.
22ಬಿಜಿಪಿ-1: ಬಾಗೇಪಲ್ಲಿ ಪಟ್ಟಣದ ಪುರಸಭೆ ನೂತನ ಕಾರ್ಯಾಲಯ ಕಟ್ಟಡ ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.